
ರಕ್ತದಾನ ಪವಿತ್ರವಾದ ದಾನ: ಭಾನುಮತಿ ಶೀನಪ್ಪ
ಮೂಡಬಿದಿರೆ: ರಕ್ತದಾನ ಅತ್ಯಂತ ಪವಿತ್ರವಾದ ದಾನ. ಒಬ್ಬ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸುವ ಸಲುವಾಗಿ ತನ್ನ ರಕ್ತವನ್ನು ಸ್ವಯಂಪ್ರೇರಣೆಯಿಂದ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ದಾನ ಮಾಡುವುದಕ್ಕೆ ರಕ್ತದಾನ ಎನ್ನುತ್ತಾರೆ. ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ ಮತ್ತೊಬ್ಬ ವ್ಯಕ್ತಿಯ ಜೀವ ಉಳಿಸಿದಂತಾಗುತ್ತದೆ. ಆ ಕಾರಣದಿಂದಲೇ ರಕ್ತದಾನವನ್ನು ಜೀವದಾನ ಎಂದು ಕರೆಯಲಾಗುತ್ತದೆ ಎಂದು ಭಾನುಮತಿ ಶೀನಪ್ಪ ಹೇಳಿದರು.
ಅವರು ಇಂದು ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ (ರಿ) ಮೂಡುಬಿದಿರೆ ಸಂಘದ ಅಮೃತ ಮಹೋತ್ಸವ ಸಂಭ್ರಮ-2025 ರ ಪ್ರಯುಕ್ತ ಇಲ್ಲಿನ ನಾರಾಯಣ ಗುರು ಸೇವಾದಳ ಮತ್ತು ನಾರಾಯಣ ಗುರು ಮಹಿಳಾ ಘಟಕ ಇವುಗಳ ವತಿಯಿಂದ ದ್ವಿತೀಯ ಮಾಸಿಕ ಕಾರ್ಯಕ್ರಮವಾಗಿ ಆಳ್ವಾಸ್ ಹೆಲ್ತ್ ಸೆಂಟರ್ ಮೂಡುಬಿದಿರೆ ಇವರ ಸಹಯೋಗದಲ್ಲಿ ಉಚಿತ ವೈದ್ಯಕೀಯ ಹಾಗೂ ರಕ್ತದಾನ ಶಿಬಿರವು ಸಂಘದ ಅಮೃತ ಸಭಾಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.
ಆಳ್ವಾಸ್ ಹೆಲ್ತ್ ಸೆಂಟರ್ನ ಆಡಳಿತ ನಿರ್ದೇಶಕ ಡಾ. ವಿನಯ್ ಆಳ್ವ ಮಾತನಾಡಿ, ದಾನಗಳಲ್ಲಿ ರಕ್ತ ದಾನ ಶ್ರೇಷ್ಠ ವಾಗಿದ್ದು, ಇನ್ನೊಬ್ಬರ ಜೀವ ಉಳಿಸುವ ಪುಣ್ಯದ ಕೆಲಸವಾಗಿದ್ದು, ಪ್ರತಿಯೊಬ್ಬರು ಇದರಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ಸಂಘದ ಅಧ್ಯಕ್ಷ ವಕೀಲ ಸುರೇಶ್ ಕೆ. ಪೂಜಾರಿ ಮಾತನಾಡಿ, ಉಚಿತ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನ ಪಡೆಯುವಂತೆ ವಿನಂತಿಸಿದರು.
ಸಂಘದ ಮಾಜಿ ಅಧ್ಯಕ್ಷ ಪದ್ಮಯ್ಯ ಬಿ ಸುವರ್ಣ, ಹಿರಿಯ ನ್ಯಾಯವಾದಿ ಎಂ.ಎಸ್. ಕೋಟ್ಯಾನ್, ದೇವರಾಜ್ ಸುವರ್ಣ ಪೊಸಲಾಯಿ ಮೂಡು ಮಾರ್ನಾಡು, ಪ್ರಗತಿ ಪರ ಕೃಷಿಕರಾದ ಶಿವ ಎಲ್. ಪೂಜಾರಿ ಹೊಸ್ಮಾರು, ಬ್ಯಾಂಕ್ ಸಿಇಓ ರಮೇಶ್ಚಂದ್ರ ಪಿ, ಸೇವಾ ದಳದ ಮಾಜಿ ಅಧ್ಯಕ್ಷ ಚಂದ್ರ ಕೆ.ಎಚ್., ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಜಯಲಕ್ಷ್ಮಿ ಆರ್. ಕೋಟ್ಯಾನ್ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಗಿರೀಶ್ ಕುಮಾರ್ ಹಂಡೇಲು ಸ್ವಾಗತಿಸಿದರು. ಪ್ರಜ್ವಲ್ ಮಾರ್ನಾಡ್ ಕಾರ್ಯಕ್ರಮ ನಿರೂಪಿಸಿ, ಶ್ರೀರಾಜ್ ಸನಿಲ್ ವಂದಿಸಿದರು.
ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಸುಮಾರು 250 ಕ್ಕಿಂತಲೂ ಹೆಚ್ಚು ಜನರು ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದರು.