
ನೇಜಾರು ಪ್ರಕರಣ ವಿಚರಣೆ: ಫೆ.7ಕ್ಕೆ ಮುಂದೂಡಿಕೆ
ಉಡುಪಿ: ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ಪ್ರಕರಣದ ಸಾಕ್ಷಿಗಳ ವಿಚಾರಣೆಯ ಆಡಿಯೋ ಮತ್ತು ವಿಡಿಯೋ ದಾಖಲಿಸಬೇಕೆಂದು ಆರೋಪಿ ಪ್ರವೀಣ್ ಚೌಗುಲೆ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿ ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಾದ ಪ್ರತಿವಾದ ಮಂಡಿಸಲಾಯಿತು.
ಬೆಂಗಳೂರು ಜೈಲಿನಲ್ಲಿರುವ ಆರೋಪಿ ಪ್ರವೀಣ್ ಚೌಗುಲೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅರ್ಜಿ ಸಂಬಂಧ ಆರೋಪಿ ಪರ ವಕೀಲ ದಿಲ್ರಾಜ್ ರೋಹಿತ್ ಸಿಕ್ವೆರಾ ಹಾಗೂ ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ ಕೆ. ವಾದ ಮಂಡಿಸಿದರು. ಇಬ್ಬರ ವಾದಗಳನ್ನು ನ್ಯಾಯಾಧೀಶ ಸಮಿವುಲ್ಲಾ ಆಲಿಸಿದರು.
ಈ ಬಗ್ಗೆ ಅಂತಿಮ ತೀರ್ಪನ್ನು ನ್ಯಾಯಾಧೀಶರು ಮುಂದೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬ್ಯಾಂಕ್ ನಿಂದ ಅರ್ಜಿ:
ಪ್ರಕರಣದ ಆರೋಪಿ ಚೌಗುಲೆ ಕೃತ್ಯಕ್ಕೆ ಬಳಸಿದ ಕಾರಿನ ಸಾಲ ಮರು ಪಾವತಿಸದ ಹಿನ್ನೆಲೆಯಲ್ಲಿ ತಮ್ಮ ವಶಕ್ಕೆ ಕಾರನ್ನು ನೀಡುವಂತೆ ಬ್ಯಾಂಕಿನವರು ಕೋರ್ಟ್ಗೆ ಅರ್ಜಿ ಹಾಕಿದ್ದಾರೆ. ಸದ್ಯ ಕೃತ್ಯಕ್ಕೆ ಬಳಸಿದ ಆರೋಪಿ ಕಾರು ಪೊಲೀಸರ ವಶದಲ್ಲಿ ಇದೆ. ಆ ಬಗ್ಗೆ ವಿಶೇಷ ಸರಕಾರಿ ಅಭಿಯೋಜಕರು ಆಕ್ಷೇಪಣೆ ಹಾಗೂ ಮುಂದಿನ ವಿಚಾರಣೆಗೆ ಫೆ.7ಕ್ಕೆ ದಿನಾಂಕ ನಿಗದಿಪಡಿಸಿ ನ್ಯಾಯಾಧೀಶರು ಆದೇಶ ನೀಡಿದರು.