
ಡಿಸಿ ಸಮಕ್ಷಮ ಶರಣಾದ ನಕ್ಸಲ್ ತೊಂಬಟ್ಟು ಲಕ್ಷ್ಮೀ
Sunday, February 2, 2025
ಉಡುಪಿ: ನಕ್ಸಲ್ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದ ಕುಂದಾಪುರ ಅಮಾಸೆಬೈಲು ಸಮೀಪದ ತೊಂಬಟ್ಟುನವಳಾದ ಲಕ್ಷ್ಮೀ ಭಾನುವಾರ ಉಡುಪಿ ಜಿಲ್ಲಾಧಿಕಾರಿ ಸಮಕ್ಷಮದಲ್ಲಿ ಶರಣಾಗಿ, ಸಮಾಜದ ಮುಖ್ಯವಾಹಿನಿಗೆ ಬಂದಳು.
ಅದಕ್ಕೂ ಮುನ್ನ ಆಕೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಕರೆದೊಯ್ದು ಶರಣಾಗತಿ ಪ್ರಕ್ರಿಯೆಗಳನ್ನು ಪೂರೈಸಲಾಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಶರಣಾಗತಿ ಕರೆಗೆ ಓಗೊಟ್ಟು ಮುಖ್ಯವಾಹಿನಿಗೆ ಬಂದಿರುವುದಾಗಿ ಲಕ್ಷ್ಮಿ ತಿಳಿಸಿದಳು.
ತೊಂಬಟ್ಟು ಲಕ್ಷ್ಮಿ ವಿರುದ್ಧ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ತಿಳಿಸಿದರು.
ಲಕ್ಷ್ಮಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿಸಿದರು.
ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಸದಸ್ಯ ಕೆ.ಪಿ.ಶ್ರೀಪಾಲ್, ಜಿ.ಪಂ. ಸಿಇಓ ಪ್ರತೀಕ್ ಬಾಯಲ್, ಲಕ್ಷ್ಮಿ ಪತಿ ಸಂಜೀವ, ಸಹೋದರರಾದ ವಿಠಲ್ ಪೂಜಾರಿ, ಬಸವ ಪೂಜಾರಿ ಉಪಸ್ಥಿತರಿದ್ದರು.
ನಾನು ಯಾವುದೇ ಒತ್ತಡಕ್ಕೆ ಮಣಿದು ಶರಣಾಗಿಲ್ಲ. ನಮ್ಮೂರಿಗೆ ರಸ್ತೆ, ಸೇತುವೆ ಇತ್ಯಾದಿ ಆಗಬೇಕಿದೆ. ಅದಕ್ಕಾಗಿ ಸಿಎಂ ಸಹಕಾರ ಬೇಕು ಎಂಬುದು ಲಕ್ಷ್ಮಿ ಆಶಯ.