
ಕರಾವಳಿಗೆ ಪ್ರತ್ಯೇಕ ಮರಳು ನೀತಿ: ಐವನ್ ಡಿ’ಸೋಜಾ
ಮಂಗಳೂರು: ಕರಾವಳಿಯಲ್ಲಿ ಸಾಕಷ್ಟು ಮರಳಿನ ಅಭಾವ ಎದ್ದು ಕಾಣುತ್ತಿದ್ದು, ಇದನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರತ್ಯೇಕವಾಗಿ ಮರಳು ನೀತಿಯನ್ನು ಜಾರಿಗೆ ತರಬೇಕು ಎಂದು ಅಧಿವೇಶನದ ವೇಳೆ ಸಚಿವರಲ್ಲಿ ಮನವಿ ಮಾಡಿದ್ದು, ಅಧಿವೇಶನದ ನಂತರ ಮಂಗಳೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರತ್ಯೇಕ ಮರಳು ನೀತಿಯನ್ನು ನೀಡುವ ಭರವಸೆಯನ್ನು ನೀಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಹೇಳಿದರು.
ಅವರು ಇಂದು ತಮ್ಮ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ನಮ್ಮಲ್ಲಿ ಎಗ್ಗಿಲ್ಲದೇ ಮರಳು ನೀತಿ ನಡೆಯುತ್ತಿದ್ದು, ಕೆಡಿಪಿ ಸಭೆಯಲ್ಲಿಯೂ ಈ ವಿಚಾರದಲ್ಲಿ ಅಧಿಕಾರಿಗಳ ನಡುವೆ ಗಲಾಟೆಯಾಗಿದೆ. ರಾಜ್ಯದ ಬೇರೆ ಜಿಲ್ಲೆಗಳ ಪರಿಸ್ಥಿತಿ ಬೇರೆ ಇಲ್ಲಿಯ ಪರಿಸ್ಥಿತಿ ಬೇರೆ ಇಲ್ಲಿ ಸಿಆರ್ಝೆಡ್ ಪ್ರದೇಶದಲ್ಲಿ ಮರಳಿಗೆ ಅನುಮತಿ ನೀಡಿದರೆ ಮರಳಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದರು.
ನಮ್ಮಲ್ಲಿಗೆ ನದಿಗಳು ಹರಿದು ಬರುತ್ತಿದ್ದು, ನೀರಿನ ಎರಡು ಬದಿಯಲ್ಲಿ ಮರಳು ಶೇಖರಣೆಯಾಗುತ್ತಿದ್ದು, ಅದನ್ನು ತೆರವು ಗೊಳಿಸಲು ಅನುಮತಿ ನೀಡಿದಲ್ಲಿ ಸಾಕಷ್ಟು ಮಂದಿಗೆ ಅನುಕೂಲವಾಗಲಿದೆ. ಇದನ್ನು ಬಿಟ್ಟು ಹೊರ ಪ್ರದೇಶದಲ್ಲಿ ಮರಳುಗಾರಿಕೆಗೆ ಕೈಹಾಕಿದರೆ ಅದು ಭೂಮಿಯನ್ನು ನುಂಗಿ ಹಾಕುತ್ತಿದೆ. ಇದಕ್ಕೆ ಉದಾಹರಣೆಯಾಗಿ ಪಾವೂರು ಉಳಿಯದಲ್ಲಿ 130 ಎಕ್ಕರೆ ಭೂ ಪ್ರದೇಶವಿದ್ದು, ಮರಳುಗಾರಿಕೆಯಿಂದ 88 ಎಕ್ಕರೆಗೆ ಬಂದು ಮುಟ್ಟಿದೆ ಎಂದು ವಿವರಿಸಿದರು.
ಸಿಆರ್ಝೆಡ್ಗೆ ಅನುಮತಿ ನೀಡದಿರುವುದರಿಂದ ನಗರದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದ್ದು, ಇದರಿಂದಲೇ ಸಾಕಷ್ಟು ಸೇತುವೆಗಳು ಕುಸಿದುಬೀಳುತ್ತಿವೆ ಎಂದು ಆರೋಪಿಸಿದ ಅವರು ಮರಳುಗಾರಿಕೆಗೆ 198 ಬ್ಲಾಕ್ ಮಾಡಿ ನಾನ್ ಸಿಆರ್ಝೆಡ್ನಲ್ಲಿ ಮರಳು ಅವಕಾಶ ಕಲ್ಪಿಸಲಾಗಿದ್ದು, ಜನರಿಗೆ ಎಲ್ಲೆಲ್ಲಿ ಮರಳು ಸಿಗುತ್ತದೆ ಎಂಬುವುದನ್ನು ತಿಳಿಸುವ ನಿಟ್ಟಿನಲ್ಲಿ ಹಿಂದೆ ಯು.ಟಿ. ಖಾದರ್ ಸಚಿವರಾಗಿದ್ದ ಸಂದರ್ಭದಲ್ಲಿ ಸ್ಯಾಂಡ್ ಬಜಾರ್ ಆಪ್ ನಿರ್ಮಿಸಿದ್ದು, ಅದು ಈಗ ನಿಂತುಹೋಗಿದ್ದು, ಮಂಗಳವಾರದಿಂದಲೇ ಸ್ಯಾಂಡ್ ಬಜಾರ್ ಆಪ್ ಮತ್ತೆ ಜನತೆಗೆ ಸಿಗಲಿದೆ ಎಂದು ಹೇಳಿದರು.
ನೂತನ ವಿವಿಗಳನ್ನು ವಿಲೀನಗೊಳಿಸುವುದು ಉತ್ತಮ:
ಹಿಂದಿನ ಬಿಜೆಪಿ ಸರ್ಕಾರ ನೂತನವಾಗಿ ನಿರ್ಮಿಸಿದ 9 ವಿಶ್ವವಿದ್ಯಾನಿಲಯಗಳನ್ನು ತೆರೆದಿದ್ದು, ಅದರೊಂದಿಗೆ ನೂತನ ಕಟ್ಟಡಕ್ಕೆ ಅನುಮತಿ ನಿರಾಕರಣೆ, ನೂತನ ವಾಹನ ಖರೀಧಿಗೆ ನಿರಾಕರಣೆ ಹಾಗೂ ನೂತನವಾಗಿ ಉಪನ್ಯಾಸಕರನ್ನೂ ನೇಮಕ ಮಾಡಿಕೊಳ್ಳದಂತೆ ನಿರ್ಬಂಧ ಹೇರಿ ತೆರೆಯುವ ಮುನ್ನವೇ ಮುಚ್ಚಲು ಹೆರಟಿದ್ದರು ಎಂದು ಐವನ್ ದೂರಿದರು.