
ಮನಪಾಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಾಲ್ ಮ್ಯಾನ್ ಗಳ ಬೇಡಿಕೆಯನ್ನು ಸರ್ಕಾರ ಈಡೇರಿಸುವಂತೆ ಶಾಸಕ ಕಾಮತ್ ಆಗ್ರಹ
Thursday, March 6, 2025
ಮಂಗಳೂರು: ರಾಜ್ಯದ ಹತ್ತೂ ಮಹಾನಗರ ಪಾಲಿಕೆಗಳ ನೀರು ಸರಬರಾಜು ಪ್ರಕ್ರಿಯೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ವಾಲ್ ಮ್ಯಾನ್ ಗಳು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನಾ ನಿರತರಾಗಿದ್ದು ಸರ್ಕಾರ ಈ ಕೂಡಲೇ ಕ್ರಮಕೈಗೊಳ್ಳಬೇಕೆಂದು ಶಾಸಕ ವೇದವ್ಯಾಸ ಕಾಮತ್ ರವರು ಅಧಿವೇಶನದಲ್ಲಿ ಆಗ್ರಹಿಸಿದರು.
ಈ ವಿಷಯದ ಪರವಾಗಿ ಶಿವಮೊಗ್ಗದ ಶಾಸಕ ಶ್ರೀ ಚನ್ನಬಸಪ್ಪರವರು ಸದನದಲ್ಲಿ ಪ್ರಸ್ತಾಪಿಸಿ, ವಾಲ್ ಮ್ಯಾನ್ ಗಳ ಹೋರಾಟ ತೀವ್ರವಾಗಿ ಕುಡಿಯುವ ನೀರಿಗೆ ಸಮಸ್ಯೆಯಾಗುತ್ತಿದ್ದರೂ ಸರ್ಕಾರ ಇನ್ನೂ ಸಹ ಎಚ್ಚೆತ್ತುಕೊಂಡಿಲ್ಲ. ಕಾಟಾಚಾರಕ್ಕೆ ಉತ್ತರ ಕೊಟ್ಟು ನಮ್ಮ ತಾಳ್ಮೆ ಪರೀಕ್ಷಿಸಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಧ್ವನಿಗೂಡಿಸಿದ ಶಾಸಕ ಕಾಮತ್ ಮಂಗಳೂರು ಮಹಾನಗರ ಪಾಲಿಕೆಯಲ್ಲಿಯೂ ವಾಲ್ ಮ್ಯಾನ್ ಗಳಿಂದ ನ್ಯಾಯಯುತ ಬೇಡಿಕೆಯಿದ್ದು ಸರ್ಕಾರ ಅವರನ್ನು ನೇರ ನೇಮಕಾತಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದೆ. ಕೊನೆಪಕ್ಷ ಸರ್ಕಾರದಿಂದಲೇ ನೇರ ಪಾವತಿಯಾದರೂ ಕೊಡಿಸಿ. ಅದು ಬಿಟ್ಟು ಕಳೆದ ವರ್ಷ ನೀಡಿದ ಉತ್ತರವನ್ನೇ ಈ ವರ್ಷವೂ ನೀಡಿ ಕಾಲಹರಣ ಮಾಡುವುದು ಬೇಡ. ಕೂಡಲೇ ಇವರ ಕಷ್ಟಗಳನ್ನು ಮನಗಂಡು ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳ ವಾಲ್ ಮ್ಯಾನ್ ಗಳ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿದರು.