
ಶತ್ರುಸಂಹಾರ ಯಾಗ ನಡೆಸಿದ ನಟ ದರ್ಶನ್
ಮಂಗಳೂರು: ಶತ್ರು ಸಂಹಾರ ಪೂಜೆಗೆ ಹೆಸರಾಗಿರುವ ಕೇರಳ ಕಣ್ಣೂರಿನ ಪ್ರಸಿದ್ಧ ಕ್ಷೇತ್ರ ಮಾಡಾಯಿಕಾವು ಶ್ರೀಭಗವತಿ ದೇವಸ್ಥಾನಕ್ಕೆ ಶನಿವಾರ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀತ್ ಸಮೇತ ಭೇಟಿ ನೀಡಿ ಶತ್ರುಸಂಹಾರ ಯಾಗ ನಡೆಸಿದರು.
ಶನಿವಾರ ಬೆಳಗ್ಗೆ ಸಂಗಡಿಗರ ಜೊತೆ ಎರಡು ಕಾರಿನಲ್ಲಿ ದೇವಸ್ಥಾನಕ್ಕೆ ಆಗಮಿಸಿದ ದರ್ಶನ್ ಅವರು ಸಂಕಲ್ಪ ಕೈಗೊಂಡು ಶತ್ರು ಸಂಹಾರ ಯಾಗದಲ್ಲಿ ಪಾಲ್ಗೊಂಡರು.
ಸಾಂಪ್ರದಾಯಿಕ ದಿರಿಸಿನಲ್ಲಿ ದೇವಸ್ಥಾನ ಪ್ರವೇಶಿಸಿದ ದರ್ಶನ್, ಕುಟುಂಬ ಮಧ್ಯಾಹ್ನ ವರೆಗೆ ಶತ್ರು ಸಂಹಾರ ಪೂಜೆ(ಯಾಗ) ನೆರವೇರಿಸಿತು. ಮಹಾಪೂಜೆ ವೇಳೆ ಸಂಕಲ್ಪ ಮಾಡಿ ನಂತರ
ಪ್ರಸಾದ ಸ್ವೀಕರಿಸಿದರು. ದೈವಸ್ಥಾನದ ಅರ್ಚಕರು ದರ್ಶನ್, ಕುಟುಂಬಕ್ಕೆ ಕಪ್ಪು ಬಣ್ಣದ ತಾಯತ ನೀಡಿದ್ದು, ಅದನ್ನು ಧರಿಸಿದರೆ ಸ್ವರಕ್ಷಣೆ ಸಿಗುತ್ತದೆ ಎಂಬ ನಂಬಿಕೆ ಇದೆ. ಇದಲ್ಲದೆ ದೃಷ್ಟಿ ನಿವಾರಣೆಗೆ ಅಘ ಹೆಸರಿನ ಪೂಜೆಯನ್ನೂ ದರ್ಶನ್ ನೆರವೇರಿಸಿದರು.
ಮಹಾಪೂಜೆ ವೇಳೆ ದರ್ಶನ್ ಮನಸ್ಸಿನಲ್ಲೇ ದೀರ್ಘ ಹೊತ್ತು ಪ್ರಾರ್ಥನೆ ಸಲ್ಲಿಸಿದರು. ಏನಾದರೂ ಸಮಸ್ಯೆಯಾಗಿದ್ದರೆ, ಅದನ್ನು ಮನಸ್ಸಿನಲ್ಲೇ ಹೇಳಿ ಪ್ರಾರ್ಥಿಸುವುದು ಇಲ್ಲಿನ ಕ್ರಮ. ಮಾಟ, ಮಂತ್ರ, ಶತ್ರುಬಾಧೆ ನಿವಾರಣೆಗೆ ಈ ಕ್ಷೇತ್ರ ಪ್ರಾಮುಖ್ಯತೆ ಹೊಂದಿದೆ. ಯಾರ ವಿರುದ್ಧ ಅಥವಾ ಯಾರದೇ ವೈಯಕ್ತಿಕ ಹೆಸರೆತ್ತಿ ಇಲ್ಲಿ ಶತ್ರು ಸಂಹಾರ ಯಾಗ ನಡೆಸುವುದಿಲ್ಲ. ಕೇವಲ ಮಾಟ, ಮಂತ್ರ, ಶತ್ರುಬಾಧೆ ನಿವಾರಣೆಗೆ ಮಾತ್ರ ಇಲ್ಲಿ ಯಾಗ ನಡೆಸಲಾಗುತ್ತದೆ. ಈ ದೇವಸ್ಧಾನಕ್ಕೆ ದರ್ಶನ್ ಆಗಮಿಸಿ ಸೇವೆ ಸಲ್ಲಿಸಿರುವ ಹಿಂದೆ ಅವರಿಗೆ ಮಾಟ, ಮಂತ್ರ, ಶತ್ರುಬಾಧೆಯ ಸಾಧ್ಯತೆಯನ್ನು ಹೇಳಲಾಗುತ್ತಿದೆ.