
ಶಾಸಕರ ವಿರುದ್ಧ ಸುಳ್ಳು ಕೇಸು ವಿಷಾದನೀಯ: ಎಚ್.ಕೆ. ಪುರುಷೋತ್ತಮ
ಮಂಗಳೂರು: ಶಕ್ತಿನಗರ ಶ್ರೀ ಕೃಷ್ಣ ಭಜನ ಮಂದಿರದ ಬ್ರಹ್ಮಕಲಶೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಶಾಸಕರಿಗೆ ಘೇರಾವು ಹಾಕಿ ಅವರನ್ನು ಏಕವಚನದಲ್ಲಿ ನಿಂದಿಸಿರುವುದು ಹಾಗೂ ಅವರ ಜತೆಗಿದ್ದ ಸ್ವಯಂಸೇವಕರ ಮೇಲೆ ಸುಳ್ಳು ಕೇಸು ಹಾಕಿರುವುದು ಬೇಸರ ತಂದಿದೆ ಎಂದು ಶ್ರೀ ಕೃಷ್ಣ ಭಜನಾ ಮಂದಿರ ರಜತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಎಚ್.ಕೆ. ಪುರುಷೋತ್ತಮ ಹೇಳಿದರು.
ಶಾಸಕ ವೇದವ್ಯಾಸ ಕಾಮತ್ ಅವರು 6.30ಕ್ಕೆ ಬ್ರಹ್ಮಕಲಶೋತ್ಸವಕ್ಕೆ ಬಂದಿದ್ದಾರೆ. ಅವರು ಬಂದ ಬಳಿಕ ನಾನು ಬಂದಿರುತ್ತೇನೆ. ಆಗ ಆಶಾ, ದಯಾನಂದ ನಾಯ್ಕ್, ಯಶವಂತ್ ಪ್ರಭು, ಸುಶಾಂತ್ ಅವರು ನನ್ನನ್ನು ಮಾತನಾಡಿಸಿದ್ದಾರೆ. ಶಾಸಕ ವೇದವ್ಯಾಸ್ ಕಾಮತ್ ಪ್ರತೀ ಬಾರಿ ಶಕ್ತಿನಗರಕ್ಕೆ ಬರುವಾಗ ನಮ್ಮನ್ನು ಗೇಲಿ ಮಾಡುತ್ತಾರೆ. ಇಂದು ಕೂಡ ಹಾಗೆಯೇ ವರ್ತಿಸಿದ್ದಾರೆ. ಶಾಸಕರು ಕಾರ್ಯಕ್ರಮ ಮುಗಿಸಿ ಹಿಂತಿರುಗುವಾಗ ಅವರಿಗೆ ನಾವು ಫೇರಾವ್ ಹಾಕುತ್ತೇವೆ ಎಂದು ಹೇಳಿದ್ದಾರೆ. ಇನ್ನು ಮುಂದೆ ಆ ರೀತಿ ತಮಾಷೆ ಮಾತಾಡದಂತೆ ಶಾಸಕರಿಗೆ ನಾನು ಹೇಳುತ್ತೇನೆ, ನೀವು ಬ್ರಹ್ಮಕಲಶದ ಕೆಲಸ ಮುಂದುವರೆಸಿ ಎಂದು ಣಾನು ನೀಡಿದ ಸಲಹೆಯನ್ನು ಫೇರಾವ್ ಹಾಕಿದವರು ಪರಿಗಣಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಶಾಸಕ ವೇದವ್ಯಾಸ್ ಕಾಮತ್ ಅವರು ಶಕ್ತಿನಗರದ ಅಭಿವೃದ್ಧಿಯಲ್ಲಿ ಹಿಂದೂ, ಕ್ರೈಸ್ತ, ಮುಸ್ಲಿಂ ಎಂದು ಭೇದ, ಭಾವ ತೋರದೆ ಕೆಲಸ ಮಾಡಿದ್ದಾರೆ. ಶಾಸಕರ ಹೆಸರು ಹಾಳು ಮಾಡಲು ಕೆಲವರು ಧಾರ್ಮಿಕ ಸಮಾರಂಭವನ್ನು ಬಳಸಿಕೊಂಡಿರುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.
ಮುಖಂಡರಾದ ಕುಶಾಲ್ ಕುಮಾರ್ ಕೆ., ಪುಷ್ಪಾ ಬಿ. ಶೆಟ್ಟಿ, ಅಶೋಕ್ ನಾಯಕ್, ಹರೀಶ್ ಕುಮಾರ್ ಕೆ. ಉಪಸ್ಥಿತರಿದ್ದರು.