
ಹೆಣ್ಣು ಮಕ್ಕಳಿಗೆ ಗೌರವ ನೀಡುವ ಶಿಕ್ಷಣ ನೀಡಿ: ರೇಖಾ ಡಿ. ಹೆಗ್ಡೆ
Monday, March 10, 2025
ಮೂಡುಬಿದಿರೆ: ಸಣ್ಣ ವಯಸ್ಸಿನಲ್ಲೇ ಮಕ್ಕಳಿಗೆ ಶಾಲೆಯಲ್ಲಿ ಮತ್ತು ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಗೌರವ ಕೊಡುವ ಶಿಕ್ಷಣವನ್ನು ನೀಡಿದಾಗ ಸಮಾಜದಲ್ಲಿ ಆಕೆಗೆ ಗೌರವ ಸಿಗುತ್ತದೆ ಎಂದು ಕಾರ್ಕಳದ ನ್ಯಾಯವಾದಿ ರೇಖಾ ಡಿ. ಹೆಗ್ಡೆ ಹೇಳಿದರು.
ಅವರು ಕೋಟೆಬಾಗಿಲು ವೀರಮಾರುತಿ ದೇವಸ್ಥಾನ ಹಾಗೂ ದ.ಕ ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ಸಹಯೋಗದಲ್ಲಿ ದ.ಕ ಜಿಲ್ಲಾ ಹೆಗ್ಗಡೆ ಮಹಿಳಾ ಘಟಕದ ವತಿಯಿಂದ ವೀರಮಾರುತಿ ಸಭಾಭವನದಲ್ಲಿ ಭಾನುವಾರ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಹೆಣ್ಣಿನ ಮೇಲಾಗುವ ಬೇರೆ ಬೇರೆ ರೀತಿಯ ದೌರ್ಜನ್ಯಗಳ ತಡೆಗೆ ಸರಕಾರ ಕಾನೂನುಗಳನ್ನು ಜಾರಿಗೊಳಿಸಿದ್ದು ತಮಗೆ ಅನ್ಯಾಯವಾದಾಗ ದೈರ್ಯದಿಂದ ವಿರೋಧಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಹೆಣ್ಣುಮಕ್ಕಳಿಗೆ ಕಿವಿ ಮಾತು ಹೇಳಿದರು.
ದ.ಕ. ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ಸದಸ್ಯೆ ಲೀಲಾವತಿ ಆರ್ ಹೆಗ್ಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಸರಕಾರ ಸಾಕಷ್ಟು ಅವಕಾಶ ಮತ್ತು ಪ್ರೋತ್ಸಾಹವನ್ನು ನೀಡುತ್ತಿದ್ದು ಅದನ್ನು ಸದುಪಯೋಗಪಡಕೊಳ್ಳಬೇಕು. ಮಹಿಳೆಯರು ಸಂಘಟಿತರಾಗಿ ಸಮುದಾಯದ ಅಭಿವೃದ್ಧಿಗೆ ನೆರವಾಗಬೇಕು ಎಂದು ಹೇಳಿದರು.
ಜಿಲ್ಲಾ ಹೆಗ್ಗಡೆ ಮಹಿಳಾ ಘಟಕದ ಅಧ್ಯಕ್ಷೆ ಶಾಂತಾ ಸನತ್ ಹೆಗ್ಡೆ ಅಧ್ಯಕ್ಷತೆ ವಹಿಸಿದರು. ಘಟಕದ ಮೂಡುಬಿದಿರೆ ವಲಯ ಅಧ್ಯಕ್ಷೆ ಉಷಾ ಕೆ. ಹೆಗ್ಡೆ, ನಾರಾವಿ ವಲಯ ಅಧ್ಯಕ್ಷೆ ನವ್ಯ ಪಿ. ಹೆಗ್ಡೆ, ಹೆಬ್ರಿ ವಲಯ ಅಧ್ಯಕ್ಷೆ ಸುನೀತಾ ಎ. ಹೆಗ್ಡೆ, ವೇಣೂರು ವಲಯ ಅಧ್ಯಕ್ಷೆ ಸುಭಾಶಿಣಿ ವಿ. ಹೆಗ್ಡೆ, ದ.ಕ ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ಅಧ್ಯಕ್ಷ ನವೀನ್ ಹೆಗ್ಡೆ ಮತ್ತು ವೀರಮಾರುತಿ ದೇವಸ್ಥಾನದ ಆಡಳಿತ ಮೊಕ್ತೇಸರ ಉದಯ ಕುಮಾರ್ ಹೆಗ್ಡೆ ಉಪಸ್ಥಿತರಿದ್ದರು.
ಚೇತನಾ ಆರ್. ಹೆಗ್ಡೆ ಕಾಯ೯ಕ್ರಮ ನಿರೂಪಿಸಿದರು. ಜಿಲ್ಲಾ ಘಟಕದ ಕಾರ್ಯದರ್ಶಿ ಮಮತ ಆರ್. ಹೆಗ್ಡೆ ವಂದಿಸಿದರು.