ಸಿರಿ ವ್ಯಾಪಾರವಾಗಿದೆ, ದೈವಾರಾಧನೆ ದಿಕ್ಕು ತಪ್ಪಿದೆ, ಕಂಬಳದ ಉದ್ದೇಶ ಬದಲಾಗಿದೆ: ಡಾ. ಇಂದಿರಾ ಹೆಗ್ಗಡೆ

ಸಿರಿ ವ್ಯಾಪಾರವಾಗಿದೆ, ದೈವಾರಾಧನೆ ದಿಕ್ಕು ತಪ್ಪಿದೆ, ಕಂಬಳದ ಉದ್ದೇಶ ಬದಲಾಗಿದೆ: ಡಾ. ಇಂದಿರಾ ಹೆಗ್ಗಡೆ


ಮೂಲ್ಕಿ: ಭಕ್ತಿ ಬಾವ ಹೋಗಿ ಸಿರಿ ವ್ಯಾಪಾರವಾಗಿದೆ. ಸಿರಿ ಕುಮಾರನ ಸಂಬಂಧಗಳೇ ಗೊತ್ತಿಲ್ಲದ ಹಾಗೆ ನಡವಳಿಕೆಗಳು ಬದಲಾಗಿವೆ. ಶೋಷಣೆಗೊಳಗಾದವರು ಸಿರಿ ನಿಲ್ಲುತ್ತಾರೆ. ಹಣ ಮಾಡುವ ದಂಧೆಯಾಗಿ ಬದಲಾಗುತ್ತಿದೆ. ನಂಬಿಕೆಗಳು ಬದಲಾಗಿ ದೈವಾರಾಧನೆ ದಿಕ್ಕು ತಪ್ಪಿದೆ. ಕೃಷಿ ಸಂಬಂಧಿತವಾದ ಕಂಬಳದ ಉದ್ದೇಶ ಇವತ್ತು ಬದಲಾಗಿದೆ. ಆಚರಣೆಗಳು ಹಾದಿತಪ್ಪಿವೆ ಎಂದು ಖ್ಯಾತ ಸಂಶೋಧಕಿ, ಸಾಹಿತಿ ಡಾ. ಇಂದಿರಾ ಹೆಗ್ಗಡೆ ಹೇಳಿದರು.

ಅವರು ತನ್ನ ಹುಟ್ಟೂರು ಕಿನ್ನಿಗೋಳಿ ಎಳತ್ತೂರುಗುತ್ತಿನಲ್ಲಿ ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಸಾಹಿತ್ಯ ಪರಿಷತ್ತು ಘಟಕ ಹಾಗೂ ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪತಿ ಎಸ್.ಆರ್. ಹೆಗ್ಡೆಯವರ ಪ್ರೋತ್ಸಾಹದಿಂದ ಕಥೆ, ಕವನಗಳಿಂದ ಸಾಹಿತ್ಯದಲ್ಲಿ ತೊಡಗಿಸಿಕೊಂಡ ತಾನು ಖ್ಯಾತ ಸಂಶೋಧಕ ಚಿದಾನಂದ ಮೂರ್ತಿಯವರ ಪ್ರೇರಣೆಯಂತೆ ಸಂಶೋಧನೆಯ ಕ್ಷೇತ್ರದಲ್ಲಿ ತೊಡಗಿಸಿಕೊಂಡೆ. ಸಂಶೋಧನೆಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕಾದರೆ ಧೈರ್ಯಬೇಕು. ಸತ್ಯವನ್ನು ಹೇಳಬೇಕು. ಒಂದು ಕಡೆ ಫೋಟೋ ತೆಗೆಯಲೂ ಬಿಡಲಿಲ್ಲ. ಇಲ್ಲಿ ಫೋಟೋ ತೆಗೆದರೆ ಬರುವುದಿಲ್ಲ ಅಂದೂ ಹೇಳಿದ್ದರು. ಆಮೇಲೆ ಒಂದು ದಿನ ಆ ಪ್ರದೇಶಕ್ಕೆ ಹೋಗಿ ಫೋಟೋ ತೆಗೆದೆ. ಚೆನ್ನಾಗಿ ಬಂತು. ನನ್ನ ಸಂಶೋಧನೆಯ ಪುಸ್ತಕದ ಮುಖಪುಟಕ್ಕೆ ಅದೇ ಫೋಟೋ ಹಾಕಿದೆ ಎಂದರು.

ಪ್ರವಾಸ ಸಾಹಿತ್ಯವೂ ನನ್ನ ಇಷ್ಟದ ಕ್ಷೇತ್ರ. ಪ್ರವಾಸಗಳಿಗೆ ಹೋಗಿ ಬಂದ ಬಳಿಕ ಅಲ್ಲಿ ನಾನು ಕಂಡ ಬಗೆಯನ್ನು ಬರೆದುದನ್ನು ನನ್ನ ಜೊತೆಗೆ ಬಂದವರು ಅಚ್ಚರಿಯಿಂದ ನಾವು ನೋಡದ್ದು ನಿನಗೆ ಹೇಗೆ ಕಂಡಿತು ಎಂದು ಕೇಳಿದ್ದು ಉಂಟು. ನಾವು ನೋಡುವ ದೃಷ್ಟಿ ಆಯಾ ಕ್ಷೇತ್ರಗಳ ಹೊಸತನ್ನು ಹೊಳಹನ್ನು ತೋರಿಸುತ್ತದೆ. ಒಳ್ಳೆಯ ಪ್ರಕಾಶಕರು ಸಿಕ್ಕಿದುದರಿಂದ ನನ್ನ ಕೃತಿಗಳು ಹೆಚ್ಚು ಹೆಚ್ಚು ಪ್ರಕಟವಾದವು. ಪುನರ್ ಮುದ್ರಣವಾದವು. ಎಂದು ಇಂದಿರಾ ಹೆಗ್ಗಡೆ, ಇದು ಪರಶುರಾಮ ಸೃಷ್ಟಿ ಅಲ್ಲ. ಸಿರಿಕುಲೆನಾಡು. ತಾಯಿನೆಲ. ನನ್ನ ವಾದವನ್ನು ಇತರರು ಒಪ್ಪಬೇಕೆಂದಿಲ್ಲ. ಈ ಬಗ್ಗೆ ಟಿವಿಗಳಲ್ಲಿ ಚರ್ಚೆ ಮಾಡಿ ಜಗಳವಾಡುವುದು ಮನರಂಜನೆ ಒದಗಿಸುವುದು ಇಷ್ಟವಿಲ್ಲ. ವಿದ್ವಾಂಸರ ಜೊತೆ ಆರೋಗ್ಯಕರ ಚರ್ಚೆಗೆ ಸಿದ್ಧನಿದ್ದೇನೆ ಎಂದರು. 

ಉದ್ಭವಲಿಂಗ ಅಂದರೆ ಇಲ್ಲಿನ ಮೂಲ ಆರಾಧನೆ. ಕಾಡಿನಲ್ಲಿ ಕಲ್ಲಿನಲ್ಲೇ ಆರಾಧನೆ. ಆಮೇಲೆ ಮೂರ್ತಿ ವಿಗ್ರಹಗಳು ಬಂದು ಆಚರಣೆಗಳಲ್ಲಿ ಬದಲಾವಣೆಗಳಾಗುತ್ತ ಬಂದವು. ಭೂತ ಎಂದರೆ ಸಣ್ಣದಲ್ಲ. ಭೂತಾಲಯ, ಭೂತದ ಕೊಟ್ಯ, ಭೂತಕ್ಕೆ ಮಾಡುವುದು ಎಂದೇ ರೂಢಿಯಲ್ಲಿದೆ. ದೈವ ಎಂದರೆ ದೇವರೂ ಹೌದು. ಲೆಕ್ಕೆಸಿರಿ, ರಕ್ತೇಶ್ವರಿ ಒಂದೇ ಅಲ್ಲ ಎಂದು ಅವರು ಹೇಳಿದರು.

ವಿದ್ವಾಂಸ ಕೆ.ಎಲ್. ಕುಂಡಂತಾಯ, ಉಪನ್ಯಾಸಕಿ ಡಾ. ಸುಧಾರಾಣಿ ಡಾ. ಹೆಗ್ಗಡೆಯವರೊಂದಿಗೆ ಸಂವಾದ ನಡೆಸಿದರು. ಡಾ. ಹೆಗ್ಗಡೆಯವರ ಕೃತಿಗಳ ಪ್ರದರ್ಶನವಿತ್ತು. ಲಾವಣ್ಯ ಶೆಟ್ಟಿ ಇಂದಿರಾ ಹೆಗ್ಗಡೆಯವರ ಕವನಗಳನ್ನು ಹಾಡಿದರು.

ಟ್ರಸ್ಟ್‌ನ ಕೃಷ್ಣಮೂರ್ತಿ, ಡಾ. ಜ್ಯೋತಿ ಚೇಳಾಯರು, ಕಸಪಾ ಮೂಲ್ಕಿ ಘಟಕಾಧ್ಯಕ್ಷ ಮಿಥುನ ಕೊಡೆತ್ತೂರು, ಹೆರಿಕ್ ಪಾಯಸ್, ವೀಣಾ ಶಶಿಧರ್, ಸ್ವರಾಜ್ ಶೆಟ್ಟಿ, ಜೊಸ್ಸಿ ಪಿಂಟೋ, ಮಾಜಿ ಶಾಸಕಿ, ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಶಕುಂತಳಾ ಶೆಟ್ಟಿ, ಎಳತ್ತೂರು ಗುತ್ತಿನಾರ್ ಬಾಲಕೃಷ್ಣ ಯಾನೆ ಶಂಕರ ರೈ, ಸಂತೋಷ್ ಕುಮಾರ ಹೆಗ್ಡೆ ಮತ್ತಿತರರ ಉಪಸ್ಥಿತಿಯಲ್ಲಿ ಡಾ. ಇಂದಿರಾ ಹೆಗ್ಗಡೆ ಅವರನ್ನು ಸಂಮಾನಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article