
ಕಾಲೇಜು ಕಾರ್ಯಕ್ರಮದಲ್ಲಿ ‘ದೈವ’ದ ವೇಷ..!: ಜಾಲತಾಣಗಳಲ್ಲಿ ವೈರಲ್-ಪರ ವಿರೋಧ ಚರ್ಚೆ
ಪುತ್ತೂರು: ಸದಾ ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ಮಾತನಾಡುವ ಪುತ್ತೂರಿನ ಪ್ರತಿಷ್ಠಿತ ಕಾಲೇಜಿನ ದಶಮಾನೋತ್ಸವ ಸಂದರ್ಭ ತುಳುನಾಡಿನ ನಂಬಿಕೆಯ ಭೂತಾರಾಧನಾ ಸಂಸ್ಕೃತಿಯ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂಬ ವಿಚಾರ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪುತ್ತೂರಿನ ಕಾಲೇಜೊಂದರ ದಶಮಾನೋತ್ಸವದಲ್ಲಿ ನಡೆದ ನೃತ್ಯ ರೂಪಕವೊಂದರಲ್ಲಿ ಧೂಮಾವತಿ ದೈವದ ವೇಷ ಧರಿಸಿ ಹಾಡಿಗೆ ಹೆಜ್ಜೆ ಹಾಕಿರುವ ದೃಶ್ಯ ವೈರಲ್ ಆಹುವ ಜತೆಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ದೈವಾರಾಧನೆಗೆ ಅಪಮಾನ ಮಾಡುವಂತೆ ವೇದಿಕೆಗಳಲ್ಲಿ ದೈವಗಳ ವೇಷ ಧರಿಸಿ ಭಾಗವಹಿಸುದರ ವಿರುದ್ಧ ಕೆಲ ವರ್ಷಗಳಿಂದ ತುಳುನಾಡಿನ ಜನತೆಯಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ನಲಿಕೆ ಸಮಾಜ ಸಂಘಟನೆಗಳಿಂದಲೂ ಇದಕ್ಕೆ ಸಾಕಷ್ಟು ಪ್ರತಿರೋಧ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ದೈವಾರಾಧನೆಯನ್ನು ವೇದಿಕೆ ಮೇಲೆ ಪ್ರದರ್ಶನ ಮಾಡುವುದು ಬಹುತೇಕ ಕಡಿಮೆಯಾಗಿತ್ತು. ಆದರೆ ಇದೀಗ ಮತ್ತೆ ಪುತ್ತೂರಿನ ಕಾಲೇಜಿನಲ್ಲಿ ವೇದಿಕೆ ಮೇಲೆ ದೈವದ ವೇಷ ಧರಿಸಿ ಕಾಣಿಸಿಕೊಂಡಿರುವುದು ಆಕ್ರೋಶಕ್ಕೂ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.
ಪುತ್ತೂರಿನ ವಿವೇಕ ಆನಂದ ಕಾಲೇಜಿನಲ್ಲಿ ಗೆಜ್ಜೆಗಿರಿತ ಬೊಲ್ಪು ಎಂಬ ನೃತ್ಯ ರೂಪಕ ದಶಮಾನೋತ್ಸವ ಕಾರ್ಯಕ್ರಮದಲ್ಲಿ ನಡೆದಿತ್ತು. ಇದರಲ್ಲಿ ಧೂಮಾವತಿ ದೈವದ ವೇಷ ಧರಿಸಿರುವುದು ವೈರಲ್ ಆಗಿದೆ. ಈ ಬಗ್ಗೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಸಿನಿಮಾ-ನಾಟಕ ರಂಗ ಹಾಗೂ ಯಕ್ಷಗಾನಗಳಲ್ಲಿ ದೈವದ ವೇಷ ಧರಿಸುತ್ತಾರೆ. ನೃತ್ಯ ನೂಪಕದಲ್ಲಿ ವೇಷ ಹಾಕಿದರೆ ತಪ್ಪೇನು ಎಂಬುವುದು ಕೆಲವರ ವಾದವಾಗಿದೆ. ಆದರೆ ಶಾಲಾ ಕಾಲೆಜುಗಳ ಕಾರ್ಯಕ್ರಮದಲ್ಲಿ ದೈವಗಳ ವೇಷ ಧರಿಸಿ ಕಾರ್ಯಕ್ರಮ ಮಾಡಬಾರದು ಎಂಬುವುದು ಇಲಾಖೆಯ ನಿಯಮವಾಗಿದೆ. ಹಾಗಾಗಿ ಈ ರೀತಿಯ ನಡೆ ಸರಿಯಲ್ಲ ಎಂಬುವುದು ಮತ್ತೆ ಕೆಲವರ ಅಭಿಪ್ರಾಯ. ಒಟ್ಟಿನಲ್ಲಿ ಈ ನೃತ್ಯರೂಪಕ ಇದೀಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಕಾಲೇಜಿನ ಕಾರ್ಯಕ್ರಮದ ನೃತ್ಯ ರೂಪಕದಲ್ಲಿ ಯಾವುದೇ ರೀತಿಯಲ್ಲಿಯೂ ಅಪಮಾನ ಮಾಡಲಾಗಿಲ್ಲ. ಹಾಡು-ಮಾತಿಗೆ ಹೆಜ್ಜೆ ಹಾಕಿರುವುದು ಎಂಬ ಅಭಿಪ್ರಾಯಗಳೂ ಕೇಳಿಬರುತ್ತಿದೆ. ಆದರೆ ಆರಾಧನೆಯ ಅಂಶವಾಗಿರುವ ದೈವದ ವೇಷ ಧರಿಸುವುದೇ ತಪ್ಪು. ಇದೇ ರೀತಿಯಾದರೆ ಮುಂದೆ ಎಲ್ಲಾ ಕಾಲೇಜುಗಳ ಕಾರ್ಯಕ್ರಮಗಳಲ್ಲಿ ದೈವಗಳ ವೇಷಧರಿಸುವ ಪ್ರಕ್ರಿಯೆ ಆರಂಭವಾಗುತ್ತದೆ. ಈ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮ ಇದಕ್ಕೆ ಮುನ್ನುಡಿಯಾಗುತ್ತದೆ. ಇದರಿಂದ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗುತ್ತದೆ. ಆರಾಧನಾ ಪದ್ಧತಿಗೆ ಅವಮಾನವಾಗುವಂತಹ ಸ್ಥಿತಿ ನಿರ್ಮಾಣವಾಗುತ್ತದೆ ಎಂಬ ಅಭಿಪ್ರಾಯಗಳೂ ವ್ಯಕ್ತವಾಗುತ್ತಿದೆ.
ಶಾಲಾ ಕಾಲೇಜು ಕಾರ್ಯಕ್ರಮಗಳಲ್ಲಿ ಈ ರೀತಿ ದೈವದ ವೇಷ ಧರಿಸುವುದು ಸರಿಯಾದ ಕ್ರಮ ಅಲ್ಲ. ಅದರಲ್ಲೂ ಧೂಮಾವತಿ ದೈವದ ವೇಷ ಧರಿಸಿದ್ದಾರೆ. ಅಣಿ, ಕಡ್ತಲೆ. ಚವಳ ಎಲ್ಲಾ ಬಳಕೆ ಮಾಡಿರುವುದು ತಪ್ಪು. ಆರಾಧನಾ ಪದ್ಧತಿಯಲ್ಲಿ ಇದು ಜನತೆಯ ‘ನಂಬಿಕೆ’ ಮೇಲೆ ಪರಿಣಾಮ ಬೀರುತ್ತದೆ. ಇದು ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಮಾಡಿದ ಕಾರ್ಯಕ್ರಮ. ಈ ಬಗ್ಗೆ ಅವರು ಎಚ್ಚರಿಕೆ ವಹಿಸಿಬೇಕಿತ್ತು. ಬಹುಶಃ ಯಕ್ಷಗಾನ ಶೈಲಿಯಲ್ಲಿ ಇದನ್ನು ಬಳಕೆ ಮಾಡಬಹುದಿತ್ತು. ಇದರಲ್ಲಿ ಕಾಲೇಜಿನವರ ತಪ್ಪು ಎಂದು ಅನ್ನಿಸುವುದಿಲ್ಲ. ಯಾಕೆಂದರೆ ಈ ನೃತ್ಯರೂಪಕದಲ್ಲಿ ಕಂಟೆಂಟ್ ಅವರಿಗೆ ಗೊತ್ತಿರಲಿಕ್ಕಿಲ್ಲ. ಆದರೆ ಇಂತಹ ಕ್ರಿಯೆಗಳು ಮುಂದುವರಿಯಬಾರದು ಎಂದು ಪುತ್ತೂರಿನ ದೈವ ನರ್ತಕ ತಿಳಿಸಿದ್ದಾರೆ.