
ಮದ್ಯ ಕುಡಿದು ಬಸ್ ಚಲಾಯಿಸಿದ ಕೆಎಸ್ಆರ್ಟಿಸಿ ಚಾಲಕ
ಬಂಟ್ವಾಳ: ಅಮಲು ಪದಾರ್ಥ ಸೇವಿಸಿ ಬಸ್ ಚಲಾಯಿಸಿದ ಚಾಲಕನಿಂದ ಅಪಘಾತ ಸಂಭವಿಸಿ ಬೈಕ್ ಸವಾರರಿಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯ ತುಂಬೆ ಎಂಬಲ್ಲಿ ಎ.15ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕೆ.ಎಸ್.ಆರ್.ಟಿ.ಸಿ.ಬಸ್ ಚಾಲಕ ದಿಲೀಪ್ ನದಾಫ್ ಅಪಘಾತವೆಸಗಿದ ಆರೋಪಿಯಾಗಿದ್ದು, ಬೈಕ್ ಸವಾರರಾದ ಮಹಮ್ಮದ್ ಸುನೈಫ್, ಮಹಮ್ಮದ್ ನಿಜಾಮುದ್ದೀನ್ ಗಾಯಾಳುಗಳಾಗಿದ್ದಾರೆ.
ಮಂಗಳೂರು ಕಡೆಯಿಂದ ಬಿ.ಸಿ. ರೋಡು ಕಡೆಗೆ ಬೈಕ್ ಸವಾರರಿಬ್ಬರಿಗೆ ವಿಪರೀತ ಅಮಲು ಪದಾರ್ಥ ಸೇವಿಸಿ, ಅಜಾಗರೂಕತೆಯಿಂದ ಬಸ್ ಚಲಾಯಿಸಿದ ಚಾಲಕ ದಿಲೀಪ್ ನದಾಫ್ ಅವರು ತುಂಬೆಯಲ್ಲಿ ಹಿಂಬದಿಯಿಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ.
ಡಿಕ್ಕಿಯಾದ ರಭಸಕ್ಕೆ ಬೈಕ್ ಸವಾರಿಬ್ಬರು ಕೆಳಗೆ ಬಿದ್ದು ದೇಹದ ಅಲ್ಲಲ್ಲಿ ಗಾಯಗಳಾಗಿವೆ. ಕೂಡಲೇ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸ್ ಚಾಲಕನ ವರ್ತನೆ ಬಗ್ಗೆ ಸಂಶಯಗೊಂಡ ಟ್ರಾಫಿಕ್ ಪೊಲೀಸರು ಇಲಾಖೆಯ ನಿರ್ದೇಶನದಂತೆ ಪರೀಕ್ಷೆ ನಡೆಸಿದಾಗ ಆತ ವಿಪರೀತ ಅಮಲು ಪದಾರ್ಥ ಸೇವನೆ ಮಾಡಿರುವುದು ಧೃಡಗೊಂಡಿದೆ.
ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಎಸ್.ಐ.ಸುತೇಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.