
ಒಂದೇ ಸಲ ಪಿಯುಸಿ ಪರೀಕ್ಷೆ ಉತ್ತೀರ್ಣರಾದ ತಾಯಿ ಮಗಳು
ಬಂಟ್ವಾಳ: ಈ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಮಾಣಿಮಜಲಿನ ತಾಯಿ ಮತ್ತು ಪುತ್ರಿ ಉತ್ತೀರ್ಣರಾಗಿರುವುದು ದಾಖಲಾಗಿದೆ.
ಅಂಗನವಾಡಿ ಕಾರ್ಯಕರ್ತೆಯಾಗಿರುವ 42 ರ ಹರೆಯದ ರವಿಕಲಾ ಮತ್ತು ಇವರ ಪುತ್ರಿ ತ್ರಿಶಾ ಅವರು ಈ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಜೊತೆಯಾಗಿ ಬರೆದು ಗಮನಸೆಳೆದಿದ್ದಾರೆ.
ಎಸ್.ಎಸ್.ಎಲ್.ಸಿ.ಪರೀಕ್ಷೆ ಬರೆದು 27 ವರ್ಷಗಳ ಬಳಿಕ ರವಿಕಲಾ ಅವರು ತಮ್ಮ ಪುತ್ರಿಯ ಜೊತೆ ಪರೀಕ್ಷೆ ಬರೆದಿದ್ದಾರೆ.
ರವಿಕಲಾ ಅವರು ಕಲಾವಿಭಾಗದಲ್ಲಿ ಪರೀಕ್ಷೆ ಬರೆದಿದ್ದು, ಮೊಡಂಕಾಪು ಕಾರ್ಮೆಲ್ ಕಾನ್ವೆಂಟ್ ಪ್ರೌಡ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದು ಶೇ.50 ಅಂಕವನ್ನು ಗಳಿಸಿ ತೇರ್ಗಡೆಯಾಗಿದ್ದು, ಪುತ್ರಿ ತ್ರಿಶಾ ಪುತ್ತೂರು ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿದ್ದು, ಶೇ. 97.67 ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿದ್ದಾಳೆ.
ಕೆಲಸ ಹೋಗಬಹುದು ಎಂಬ ಹೆದರಿಕೆಯಿಂದ ಪರೀಕ್ಷೆ ಬರೆದೆ ರವಿಕಲಾ..
ಮಾಣಿಮಜಲು ನಿವಾಸಿ ಮಂಜುನಾಥ್ ಅವರ ಪತ್ನಿ ರವಿಕಲಾ ಅವರು ತಾರಿಪಡ್ಪು ಅಂಗನವಾಡಿಕೇಂದ್ರದಲ್ಲಿ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ತ್ರಿಶಾ ಮತ್ತು ತನ್ವಿ ಇಬ್ಬರು ಪುತ್ರಿಯರಿದ್ದು,ತನ್ನ ಕುಟುಂಬದ ಜೀವನಕ್ಕೆ ಅಂಗನವಾಡಿ ಕಾರ್ಯಕರ್ತೆ ಹುದ್ದೆಯೇ ಆಧಾರ. ಇದ್ದಕ್ಕಿದ್ದಂತೆ ಸರಕಾರದಿಂದ ಬಂದಿದ್ದ ಅದೇಶ ರವಿಕಲಾ ಅವರು ಪಿಯುಸಿ ಪರೀಕ್ಷೆ ಬರೆಯುವಂತೆ ಮಾಡಿದೆ.
ಮುಂದಿನ ದಿನಗಳಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಎಲ್.ಕೆ.ಜಿ. ಮತ್ತು ಯು.ಕೆ.ಜಿ ಶಿಕ್ಷಣ ಆರಂಭವಾಗುವ ಹಿನ್ನಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪಿಯುಸಿವರೆಗೆ ಶಿಕ್ಷಣ ಪೂರೈಸಿರಬೇಕು ಎಂದು ಸರಕಾರ ಆದೇಶಿಸಿತ್ತು.
ಪಿಯುಸಿ ಮುಗಿಸದಿದ್ದರೆ ಕೆಲಸಕ್ಕೆ ಕುತ್ತು ಬರುವ ಆತಂಕ, ಮತ್ತೊಂದೆಡೆ ಪಿಯುಸಿ ಪರೀಕ್ಷೆ ಬರೆಯುವ ಸವಾಲು. ಕೆಲಸ ಹೋದರೆ ತನ್ನ ಭವಿಷ್ಯದ ಮೇಲೆ ಪರಿಣಾಮ ಬೀರಬಹುದೆಂಬ ಭಯವು ಕಾಡಿದರಿಂದ ಧೈರ್ಯದಿಂದ ಬಿ.ಸಿ.ರೋಡಿನ ಸರಕಾರಿ ಪ.ಪೂ. ಕಾಲೇಜು ಮೂಲಕ ಪರೀಕ್ಷೆ ಬರೆಯಲು ಸನ್ನದ್ದರಾದರು. ಕೆಲಸದ ಒತ್ತಡದಿಂದಾಗಿ ಪರೀಕ್ಷೆಗೆ ಓದಿ ತಯಾರಾಗಲು ಸಾಕಷ್ಟು ಸಮಯ ಸಿಗಲಿಲ್ಲ. ಆದರೂ ಶುಲ್ಕ ಪಾವತಿಸಿ,ಪರೀಕ್ಷೆ ಬರೆಯಲು ಮಾನಸಿಕವಾಗಿ ಸಜ್ಜಾಗಿದ್ದೆ.
ಪರೀಕ್ಷಾ ಕೇಂದ್ರ ಪ್ರವೇಶಿಸಿದಾಗ ದುಗುಡ ಉಂಟಾಗಿತ್ತು. ಹಾಗೆಯೇ ಪರೀಕ್ಷಾ ಕೊಠಡಿಯಲ್ಲಿ ತನ್ನ ಪುತ್ರಿ ಸಮಾನದ ವಿದ್ಯಾರ್ಥಿಗಳನ್ನು ಕಂಡು ನನಗೆ ನಾಚಿಕೆ ಯಾಗಿತ್ತು. ಅವರಿಗೂ ನನ್ನ ಮೇಲೆ ಅನುಮಾನಗೊಂಡು ಪುತ್ರಿಗೆ ಪರೀಕ್ಷಾ ಹಾಲ್ ಟಿಕೆಟ್ ನೀಡಲು ಬಂದಿರಬೇಕು ಎಂದು ಮಾತನಾಡಿಕೊಳ್ಳುತ್ತಿದ್ದದು ನನಗೆ ಮುಜುಗರವನ್ನುಂಟು ಮಾಡಿತ್ತು.
ಆದರೆ ನನ್ನ ಪತಿ, ಪುತ್ರಿಯರು, ಕುಟುಂಬದ ಸದಸ್ಯರ ಸಹಕಾರ, ಇಲಾಖೆಯ ಪ್ರೋತ್ಸಾಹ ನನಗೆ ಪಿಯುಸಿ ಉತ್ತೀರ್ಣವಾಗುವಲ್ಲಿ ಪ್ರರೇಣೆ ನೀಡಿದೆ.
ಛಲ, ಶ್ರಮ, ಸಾಧನೆ ಮಾಡಿದಲ್ಲಿ ಯಾವ ವಯಸ್ಸಿನಲ್ಲಿಯೂ ಪರೀಕ್ಷೆ ಬರೆದು ಯಶಸ್ಸು ಕಾಣಬಹುದು ಎಂಬುದು ನಾನು ಕಂಡು ಕೊಂಡ ಸತ್ಯ ಎಂದು ರವಿಕಲಾ ತಿಳಿಸಿದ್ದಾರೆ.
ಪುತ್ರಿಯ ಜೊತೆ ನಾನು ಪಿಯುಸಿ ಪರೀಕ್ಷೆ ಬರೆದು ತಾಲೂಕು ಮಾತ್ರವಲ್ಲ ಜಿಲ್ಲೆಯಲ್ಲೇ ಹೊಸದಾಖಲೆ ಸೃಷ್ಟಡಿಸಿದ ಸಂತೃಪ್ತಿ,ಖುಷಿ ಹೊಂದಿದ್ದೆನೆ ಎಂದು ಹೇಳಿದರು.