
ಹೊಳೆ ಹೂಳಿನ ಸಮಸ್ಯೆಗೆ ಪರಿಹಾರ ಮರೀಚಿಕೆ: ಹೋರಾಟಕ್ಕೆ ತಯಾರಿ
ಕುಂದಾಪುರ: ಕುಂದಾಪುರ ತಾಲೂಕು ಕುಂಭಾಶಿ, ತೆಕ್ಕಟ್ಟೆ ಪರಿಸರದಲ್ಲಿನ ಸಣ್ಣ ಹೊಳೆ ಹಾಗೂ ತೋಡುಗಳಲ್ಲಿ ಹೂಳು ತುಂಬಿ, ಮಳೆ ನೀರಿನ ಬೇಕಾಬಿಟ್ಟಿ ಹರಿವಿನಿಂದ ರೈತರು ಭಾರೀ ತೊಂದರೆಗೊಳಗಾಗಿದ್ದು, ಸಹನೆಯ ಕಟ್ಟೆ ಒಡೆಯುವ ಸಮಯ ಸನ್ನಿಹಿತವಾದಂತಿದೆ. ಹೂಳು ಸಮಸ್ಯೆಯಿಂದ ಹೈರಾಣಾದ ರೈತರು ಈ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ಸಮಸ್ಯೆಗಳ ಪರಿಹಾರೊಪಾಯಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.
ತೆಕ್ಕಟ್ಟೆಯಿಂದ ಆರಂಭಗೊಂಡು ಗಿಳಿಯಾರು, ಚಿತ್ರಪಾಡಿ ಮೂಲಕ ಕಾವಡಿ ತನಕ ಸಂಪರ್ಕ ಹೊಂದಿರುವ ಸೂಲಡ್ಪು ಹೊಳೆಯ ಹೂಳಿನ ಸಮಸ್ಯೆ ಬಗೆಹರಿಯದಿರುವುದರಿಂದ ರೈತರಿಗೆ ಕೃಷಿ ಚಟುವಟಿಕೆಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಹೋರಾಟ ನಡೆಸುವ ಸಲುವಾಗಿ ಸ್ಥಳೀಯರು ಕೋಟ ಮಾಂಗಲ್ಯ ಮಂದಿರದಲ್ಲಿ ಸೇರಿ ಚರ್ಚೆ ನಡೆಸಿದರು.
ಹೋರಾಟದ ಕುರಿತು ವಸಂತ್ ಗಿಳಿಯಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಹೊಳೆಯ ಸಮಸ್ಯೆಯಿಂದ ಪ್ರತಿ ವರ್ಷ ಕೃಷಿ ಬೆಳೆ ನಾಶವಾಗುತ್ತಿದೆ. ಕಾಮಗಾರಿಗಾಗಿ ಅನುದಾನ ಬಿಡುಗಡೆಯಾಗಿದೆ ಎನ್ನುವ ಮಾತು ಈ ಹಿಂದೆ ಕೇಳಿಬಂದಿತ್ತು. ಆದರೆ ಈ ವರ್ಷ ಕೂಡ ಮಳೆಗಾಲ ಹತ್ತಿರವಾಗುತ್ತಿದ್ದು ಸಮಸ್ಯೆ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ರೈತರು ಹೋರಾಟ ನಡೆಸಲು ಕೈಜೋಡಿಸುವುದಾಗಿ ಭರವಸೆ ನೀಡಿದರು.
ಎ.22 ರಂದು ಈ ಬಗ್ಗೆ ಮತ್ತೊಮ್ಮೆ ಸಭೆ ನಡೆಸಿ ಹೋರಾಟದ ರೂಪುರೇಷೆ ಸಿದ್ಧಪಡಿಸುವುದು ಎಂದು ತೀರ್ಮಾನಿಸಲಾಯಿತು. ಸ್ಥಳೀಯರಾದ ಶ್ಯಾಮ್ಸುಂದರ ನಾಯರಿ, ಕಾರ್ಕಡ ರಾಜು ಪೂಜಾರಿ, ಅಜಿತ್ ದೇವಾಡಿಗ ಕೋಟ, ಶೇಖರ್ ಜಿ., ಗಿರೀಶ್ ಬೆಟ್ಲಕ್ಕಿ, ಗಣೇಶ್ ಗಾಣಿಗ ಚಿತ್ರಪಾಡಿ, ಕಿರಣ್ ಕುಂದರ್ ಮೊದಲಾದವರು ಸಭೆಯಲ್ಲಿದ್ದರು.