
ಮಾಲಾಡಿ ಹಾಡಿಯಲ್ಲಿ ಮತ್ತೆ ಚಿರತೆ: ಭಯಗೊಂಡ ಜನತೆ
ಕುಂದಾಪುರ: ತಾಲೂಕಿನ ತೆಕ್ಕಟ್ಟೆ ಗ್ರಾಮಪಂಚಾಯತ್ ವ್ಯಾಪ್ತಿಯ ಮಾಲಾಡಿ ಎಂಬಲ್ಲಿನ ಶ್ರೀ ನಂದಿಕೇಶ್ವರ ದೇವಸ್ಥಾನ ಹಾಗೂ ಅಂಗನವಾಡಿ, ಶಾಲೆ ಹಿಂಭಾಗದ ಹಾಡಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಈ ಹಾಡಿ ಚಿರೆತೆಗಳ ಮೆಚ್ಚಿನ ತಾಣವಾಗಿದೆ. ಅರಣ್ಯ ಇಲಾಖೆಯವರು ಚಿರತೆಯ ಬಗ್ಗೆ ಸಾರ್ವಜನಿಕ ದೂರು ಬರುತ್ತಿದ್ದಂತೆ ಬೋನು ಇರಿಸಿ, ಕಾರ್ಯಾಚರಣೆ ನಡೆಸಿ, ಚಿರತೆ ಹಿಡಿಯುತ್ತಾರೆ. ಆದರೆ, ಕೆಲವೇ ಸಮಯದಲ್ಲಿ ಮತ್ತೆ ಈ ಪ್ರದೇಶದಲ್ಲಿ ಚಿರತೆಗಳು ಪ್ರತ್ಯಕ್ಷವಾಗುತ್ತವೆ.
ಈ ಭಾಗದಲ್ಲಿ ಆಗ್ಗಾಗೆ ಚಿರತೆ ಪ್ರತ್ಯಕ್ಷವಾಗುತ್ತಿದ್ದು, ನಿರಂತರ ಈ ಭಾಗದಲ್ಲಿ ಚಿರತೆ ಕಾಟವಿರುವುದರಿಂದ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಕುಂದಾಪುರ ವಲಯ ಅರಣ್ಯಾಧಿಕಾರಿ ರಾಘವೇಂದ್ರ ನೇತೃತ್ವದಲ್ಲಿ, ಗಸ್ತು ಅರಣ್ಯ ಪಾಲಕರು ಹಾಗೂ ಸಿಬ್ಬಂದಿಗಳು ಬೋನ್ ಇಟ್ಟು ಚಿರತೆ ಹಿಡಿಯುವ ಕಾರ್ಯಾಚರಣೆ ನಡೆಸಲು ಮುಂದಾಗಿದ್ದಾರೆ.
ಈ ಹಿಂದೆಯೂ ಮಾಲಾಡಿ ಅಸುಪಾಸಿನಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಚಿರತೆಯು ನಾಯಿ, ಜಾನುವಾರು ಸೇರಿದಂತೆ ಸಾಕುಪ್ರಾಣಿಗಳನ್ನು ಹೊತ್ತೊಯ್ದಿದೆ. ಹಾಡುಹಗಲೇ ಕಾಣಿಸಿಕೊಂಡು ಜನರಲ್ಲಿ ಭೀತಿ ಸೃಷ್ಟಿಸಿದೆ. ಈ ಭಾಗದಲ್ಲಿ ಮೊದಲಿಗೆ 2018 ಆಗಸ್ಟ್ ತಿಂಗಳಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿತ್ತು. ಬಳಿಕ 2019 ಅ.6, ಡಿ.12, 2019, ಡಿ.24, 2019 ರಲ್ಲಿ ಹಾಗೂ 2022 ರ ಎಪ್ರಿಲ್ ತಿಂಗಳಿನಲ್ಲಿ, 2022 ಅ.2 ರಂದು ಹಾಗೂ 2023 ಮಾರ್ಚ್ ಮತ್ತು ಜೂನ್ ತಿಂಗಳಿನಲ್ಲಿ ಚಿರತೆ ಅರಣ್ಯ ಇಲಾಖೆಯಿಟ್ಟ ಬೋನಿಗೆ ಬಿದ್ದಿತ್ತು.