
ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಸರಕಾರಿ ಬಸ್ ಗಳ ಸೇವೆಯನ್ನು ಸ್ಥಗಿತಗೊಳಿಸಲು ಇಲಾಖೆಯಿಂದ ಹುನ್ನಾರ: ಬೈಂದೂರು ಶಾಸಕ ಗಂಟಿಹೊಳೆ
ಕುಂದಾಪುರ: ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಮಾರ್ಗಗಳಿಗೆ ಸರಕಾರಿ ಬಸ್ ಓಡಿಸಲು ಅನುಮತಿ ಇದ್ದರೂ ಸಹಾ ಇಲಾಖೆಯು ಈ ಬಗ್ಗೆ ದಿವ್ಯ ನಿರ್ಲಕ್ಷ ವಹಿಸಿರುವುದಲ್ಲದೆ ಚಾಲಕರ ಕೊರತೆ, ನಿರ್ವಹಣೆ ಸಮಸ್ಯೆ ಎಂದೆಲ್ಲಾ ಸಬೂಬು ಹೇಳಿ ಅಲ್ಲಲ್ಲಿ ಬಸ್ ಗಳ ಓಡಾಟವನ್ನು ನಿಲ್ಲಿಸಿದೆ. ಇದರಿಂದಾಗಿ ಸಾರ್ವಜನಿಕರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಭಾರೀ ತೊಂದರೆಯಾಗುತ್ತಿದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದ್ದಾರೆ.
ವಿದ್ಯಾರ್ಥಿಗಳ ಸಂಘಟನೆಯ ಹೋರಾಟ ಹಾಗೂ ಒತ್ತಡಗಳಿಂದ ಕೆಲವು ಕಡೆ ಸರಕಾರಿ ಬಸ್ ಸಂಚಾರ ಪುನರಾರಂಭಿಸಿದರೂ ಈಗ ಮತ್ತೊಮ್ಮೆ ಬೇರೆ ಬೇರೆ ಕಾರಣ ನೀಡಿ ಕುಂದಾಪುರ ದಿಂದ ಬೈಂದೂರು ಮಾರ್ಗವಾಗಿ ಸಾಗುವ, ಸಾರ್ವಜನಿಕರಿಗೆ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿರುವ ಬಸ್ ಗಳ ಸಂಚಾರವನ್ನು ರದ್ದು ಪಡಿಸಿ ತನ್ನ ಹಳೇ ಚಾಳಿಯನ್ನು ಮುಂದುವರಿಸಿದೆ. ಇದನ್ನು ಸಹಿಸಲು ಸಾದ್ಯವಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಒಂದು ಕಡೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅನುವು ಮಾಡಿಕೊಡುತ್ತಿರುವ ಸರಕಾರ ಇನ್ನೊಂದು ಕಡೆ ತನ್ನದೇ ವೈಫಲ್ಯವನ್ನು ಮರೆ ಮಾಚಿ ಬೇರೆ ಬೇರೆ ಕಾರಣ ನೀಡಿ ಬಸ್ ಗಳ ಸಂಚಾರವನ್ನು ಸ್ಥಗಿತ ಗೊಳಿಸಿ ಬೈಂದೂರು ಹಾಗೂ ಕುಂದಾಪುರ ಭಾಗದ ಸಾರ್ವಜನಿಕರಿಗೆ ವಿನಾ ಕಾರಣ ತೊಂದರೆ ನೀಡುತ್ತಿದೆ. ಇದನ್ನು ಕ್ಷೇತ್ರದ ಶಾಸಕನಾಗಿ ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ, ಸರಕಾರಿ ಬಸ್ ಓಡಿಸಲು ಅನುಮತಿ ಇರುವ ಹಾಗೂ ಸಾರ್ವಜನಿ ಕರಿಂದ ನೈಜ ಬೇಡಿಕೆ ಇರುವ ಕಡೆ ಬಸ್ ಓಡಿಸಲು ಸಾರಿಗೆ ಇಲಾಖೆ ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಇಲಾಖೆಯ ವೈಫಲ್ಯ ಖಂಡಿಸಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.