
ಸುಪ್ರಿಂಕೋರ್ಟ್ ತೀರ್ಪಿನ ಮೇಲೆ ನಂಬಿಕೆ ಇದೆ
ಮಂಗಳೂರು: ಕೇಂದ್ರ ಸರ್ಕಾರ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅನುಮೋದನೆಗೊಳಿಸಿದ ವಕ್ಫ್ ಕಾಯ್ದೆಯು ಅಸಂವಿಧಾನಿಕ ಮತ್ತು ಅವೈಜ್ಞಾನಿಕವಾಗಿದ್ದು ಇದನ್ನು ನಾವು ಎಂದಿಗೂ ಒಪ್ಪುವುದಿಲ್ಲ. ಸುಪ್ರಿಂಕೋರ್ಟ್ನಲ್ಲಿ ಮೇ.5 ರಂದು ತಿರ್ಮಾನವಾಗಲಿದ್ದು, ನಮಗೆ ಸುಪ್ರಿಂಕೋರ್ಟ್ ತೀರ್ಪಿನ ಮೇಲೆ ನಂಬಿಕೆ ಇದೆ ಎಂದು ಉಲ್ಮಾ ಕೋ-ಆರ್ಡಿನೇಷನ್ನ ಕೋಶಾಧಿಕಾರಿ, ರಾಜ್ಯ ವಕ್ಫ್ ಕಮಿಟಿಯ ರಾಜ್ಯ ಮಾಜಿ ಅಧ್ಯಕ್ಷ ಮೋಲಾನ್ ಎಂ.ಕೆ. ಮಹಮ್ಮದ್ ಶಾಫಿ ಹೇಳಿದರು.
ಅವರು ಇಂದು ನಗರದ ಹೊರವಲಯ ಅದ್ಯಾರ್ನಲ್ಲಿ ನಡೆದ ‘ವಕ್ಫ್ ತಿದ್ದುಪಡಿ ಕಾನೂನು ವಿರುದ್ಧ ಖಾಝಿಗಳ ನಾಯಕತ್ವದಲ್ಲಿ ಪ್ರತಿಭಟನಾ ಸಮಾವೇಶ’ದಲ್ಲಿ ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಕ್ಫ್ ಕಾಯ್ದೆಯ ಅನುಷ್ಠಾನದ ಮೂಲಕ ಬುಲ್ಡೋಜರ್ ಮಾಡಲು ಮುಂದಾಗಿದ್ದು, ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನವನ್ನೇ ಬುಲ್ಡೋಜರ್ ಮಾಡುತ್ತಿದ್ದಾರೆ. ಆದರೆ ಇಂದು ಪ್ರಾರಂಭಗೊಂಡ ಘೋಷಣೆ ಮೇ.5 ರವರೆಗೂ ನಡೆಯಲಿದೆ. ಯಾವುದೇ ಕಾರಣಕ್ಕೂ ನಮ್ಮ ಘೋಷಣೆ ನಿಲ್ಲದು ಎಂದರು.
ನಾವು ನಡೆಸುತ್ತಿರುವ ಪ್ರತಿಭಟನೆ ಯಾವುದೇ ಜಾತಿ, ಧರ್ಮ, ಪಕ್ಷದ ವಿರುದ್ಧವಲ್ಲ. ನಾವು ನಮ್ಮ ಹಕ್ಕಿಗಾಗಿ ಮಾತ್ರ ಹೋರಾಟ ನಡೆಸುತ್ತಿದ್ದೇವೆ. ಸಾವಿರಾರು ವರ್ಷಗಳಿಂದ ನಾವು ಉಳಿಸಿಕೊಂಡು ಬಂದಂತಹ ಆಸ್ತಿಯನ್ನು ಕಸಿದುಕೊಳ್ಳಲು ಬಿಡುವುದಿಲ್ಲ. ನಾವು ಯಾರಿಂದಲೂ ಆಸ್ತಿಯನ್ನು ವಕ್ಫ್ ಪಡಿಸಿಕೊಂಡಿಲ್ಲ. ನಮಗೆ ಬಂದದ್ದು ಮಾತ್ರ ವಕ್ಫ್. ಕಸಿದುಕೊಂಡ ಜಾಗದಲ್ಲಿ ಮಸೀದಿ, ಮದರಸಗಳನ್ನು ನಿರ್ಮಿಸಿದರೆ ಅದನ್ನು ದೇವರು ಮೆಚ್ಚುವುದಿಲ್ಲ. ನಾವು ಯಾರಿಂದನಾದರೂ ವಕ್ಫ್ ಮಾಡಿದ ದಾಖಲೆ ಇದ್ದರೆ ತೋರಿಸಿಕೊಡಿ ಎಂದು ಹೇಳಿದರು.
ಈಗ ನರೇಂದ್ರ ಮೋದಿಯವರು ನಾವು ಯಾವುದೇ ಅಧಿಕೃತವಾಗಿರುವ ಆಸ್ತಿಯನ್ನು ಮುಟ್ಟುವುದಿಲ್ಲ ಯಾವುದು ವಿವಾದದಲ್ಲಿದೆ ಅದನ್ನು ಮಾತ್ರ ಮುಟ್ಟುತ್ತೇವೆ ಎಂದು ಹೇಳಿದ್ದಾರೆ. ಈ ಹಿಂದೆ ದೇಶದಾದ್ಯಂತ ವಕ್ಫ್ನಲ್ಲಿ 36 ಲಕ್ಷ ಎಕ್ಕರೆ ಆಸ್ತಿ ಇತ್ತು ಎಂದು ಇತ್ತು ಆದರೆ ಈಗ ರಿಜೂಜ್ನಲ್ಲಿ ಕೇವಲ 9 ಸಾವಿರ ಎಕ್ಕರೆ ಮಾತ್ರ ಇದೆ ಎಂದು ಹೇಳುತ್ತಾರೆ. ನಾವು ಯಾವುದನ್ನು ನಂಬುವುದು ಕೇಂದ್ರ ಸರ್ಕಾರ ವಕ್ಫ್ನ 36 ಲಕ್ಷ ಎಕ್ಕರೆ ಆಸ್ತಿಯನ್ನು ಕಬಳಿಸಲು ನೋಡುತ್ತಿದೆ ಎಂದರು.
ಡಾ.ಫಾಝಿಲ್ ರಝ್ವಿ ಕಾವಳಕಟ್ಟೆ ಮಾತನಾಡಿ, ಕೇಂದ್ರ ಸರ್ಕಾರ ಪದೇ ಪದೇ ಮುಸ್ಲಿಂ ಸಮುದಾಯದವರನ್ನು ಗುರಿಯಾಗಿಸುತ್ತಿದ್ದು, ಹಿಜಾಬ್ ತಡೆಯುವ ಮೂಲಕ ಮುಸ್ಲಿಂ ಯುವತಿಯರ ಶಿಕ್ಷಣಕ್ಕೆ ಕಡಿವಾಣ ಹಾಕಿದ್ದಲ್ಲದೇ, ಯುವಕರನ್ನು ಪಂಚರ್ಶಾಫ್ ಹಾಕುವಂತೆ ಮಾಡಿದ್ದಾರೆ. ದೇಶದಾದ್ಯಂತ 20 ಕೋಟಿ ಮುಸ್ಲಿಂ ಸಮುದಾಯದವರಿದ್ದು, ಅವರನ್ನು ಪ್ರಧಾನಮಂತ್ರಿಗಳು ಸಮುದ್ರಕ್ಕೆ ಎಸೆಯಲು ನೋಡುತ್ತಿದ್ದಾರೆ. ಪ್ರಧಾನಮಂತ್ರಿಗಳಾದವರು ದೇಶದ ಸೇವೆಯನ್ನು ಮಾಡಬೇಕು. ಜನರನ್ನು ಹೆದರಿಸುವ ಕೆಲಸವನ್ನಲ್ಲ. ನೀಡು ಮೊದಲಬಾರಿಗೆ ಪ್ರಧಾನಮಂತ್ರಿಯಾದಾಗ ದೇಶಸೇವೆ ಮಾಡುತ್ತೇನೆ ಎಂದು ಹೇಳಿರುವುದು ಮರೆತಿರಬೇಕು ಅದನ್ನು ಮತ್ತೆ ನೆನಪಿಸುತ್ತೇವೆ ಎಂದು ಹೇಳಿದರು.
ದೇಶದಲ್ಲಿ ಸಂವಿಧಾನ ಇರುವವರೆಗೆ ನಮ್ಮನ್ನು ಯಾರಿಂದಲೂ ಏನನ್ನು ಮಾಡಲು ಸಾಧ್ಯವಿಲ್ಲ. ಮುಸ್ಲಿಂ ಸಮುದಾಯದವರನ್ನು ಕಟ್ಟುಹಾಕಲು ಸಾಧ್ಯವಿಲ್ಲ. ಎಷ್ಟು ದಾಳಿ ಮಾಡಿದರೂ, ಎಷ್ಟೇ ತಳಕ್ಕೆ ತಳ್ಳಿದರೂ ನಾವು ಮತ್ತೆ ಗಟ್ಟಿಯಾಗಿ ಎದ್ದುನಿಲ್ಲುತ್ತೇವೆ. ಮೋದಿ ಅವರು ಅಂಬೇಡ್ಕರ್ ಅವರ ಸಂವಿಧಾನವನ್ನು ಪಂಚರ್ ಮಾಡಲು ಹೊರಟಿದ್ದು, ಅಂಬೇಡ್ಕರ್ ಅವರ ಸಂವಿಧಾನವನ್ನು ದುರ್ಬಲಗೊಳಿಸುವಂತವರು ಈ ಮಣ್ಣಿನಲ್ಲಿ ಇಲ್ಲಿಯ ತನಕ ಯಾರೂ ಹುಟ್ಟಿಲ್ಲ ಎಂದು ಹೇಳಿದರು.
ಧರ್ಮಗುರುಗಳಾದ ಬಂಬ್ರಾಣ ಉಸ್ತಾದ್ ಅಬ್ದುಲ್ ಮುಸ್ಲಿಯಾರ್, ರಫೀಕ್ ಹುದವಿ ಕೋಲಾರ್, ಅನ್ವರ್ ಅಸ್ಗರಿ ಚಿತ್ರದುರ್ಗ, ಕೆ.ಎಂ. ಅಬೂಬಕ್ಕರ್ ಸಿದ್ದೀಕ್, ಡಾ.ಫಾಝಿಲ್ ರಝ್ವಿ ಕಾವಳಕಟ್ಟೆ ಮತ್ತಿತರರಿದ್ದರು. ಉಜಿರೆ ತಂಙಳ್ ಸಯ್ಯದ್ ಇಸ್ಮಾಯಿಲ್ ದುಆ ಮಾಡಿದರು. ಉಲಮಾ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎಂ. ಉಸ್ಮಾನುಲ್ ಫೈಝಿ ತೋಡಾರ್ ಸ್ವಾಗತಿಸಿದರು. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಪ್ರಾಸ್ತಾವಿಕ ಮಾತನಾಡಿದರು.
ವಕ್ಫ್ ಕಮಿಟಿಯಲ್ಲಿ 11 ಜನ ಸದಸ್ಯರಿದ್ದು, 4 ಮಂದಿ ಮುಸ್ಲಿಂ ಸಮುದಾಯದವರು 2 ಮಂದಿ ಮುಸ್ಲಿಂಮೇತರ ಸಮುದಾಯದವರು ಹಾಗೂ ಉಳಿದ 5 ಜನ ಯಾರನ್ನು ಬೇಕಾದರೂ ನೇಮಿಸಬಹುದು ಎಂದು ಪ್ರಧಾನಮಂತ್ರಿಗಳು ಆದೇಶಿಸಿದ್ದು, ಇದರಿಂದಾಗಿ ಕಮಿಟಿಯಲ್ಲಿ ನಮ್ಮ ಬಹುಸಂಖ್ಯಾತ್ವವನ್ನು ತಡೆಯುವ ಕೆಲಸವಾಗುತ್ತಿದೆ ಎಂದು ಮೋಲಾನ್ ಎಂ.ಕೆ. ಮಹಮ್ಮದ್ ಶಾಫಿ ದೂರಿದರು.