
ಹಿರಿಯರ ಆದರ್ಶಗಳನ್ನು ನಮ್ಮಲ್ಲಿ ಅಳವಡಿಸಿಕೊಂಡಾಗ ಉತ್ತಮ ಭವಿಷ್ಯ: ಮಮತಾ ಗಟ್ಟಿ
Thursday, April 24, 2025
ಮಂಗಳೂರು: ಹಿರಿಯರು ಹಾಕಿಕೊಟ್ಟ ದಾರಿದೀಪ, ಅವರ ಜೀವನದ ಮೌಲ್ಯಗಳು ಹಾಗೂ ಆದರ್ಶಗಳನ್ನು ನಮ್ಮಲ್ಲಿ ಅಳವಡಿಸಿಕೊಂಡಾಗ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಹೇಳಿದರು.
ಅವರು ಇಂದು ಮಂಗಳೂರಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತ ಆಶ್ರಯಲ್ಲಿ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ನಡೆದ ಡಾ. ರಾಜ್ ಕುಮಾರ್ ಜಯಂತಿಯನ್ನು ಉದ್ಘಾಟಿಸಿ, ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಸರ್ಕಾರ ದೇಶಕ್ಕಾಗಿ ಸೇವೆ ಸಲ್ಲಿಸಿದ, ಬಲಿದಾನ ಮಾಡಿದ ವ್ಯಕ್ತಿಗಳ ಜಯಂತಿಯನ್ನು ಆಚರಿಸುತ್ತಾರೆ. ಅದೇ ರೀತಿಯಲ್ಲಿ ಕನ್ನಡ ಚಿತ್ರ ರಂಗಕ್ಕೆ ನೀಡಿದ ಅವರ ಕೊಡುಗೆಯಿಂದಾಗಿ ಇಂದು ಅವರ ಜಯಂತಿಯನ್ನು ಆಚರಿಸುತ್ತಿದ್ದೇವೆ ಎಂದರು.
ವಿದ್ಯಾರ್ಥಿಗಳು ಜೀವ ನೀಡಿದ ತಾಯಿ, ಜೀವನ ನೀಡಿದ ತಂದೆ ಹಾಗೂ ಶಿಕ್ಷಣವನ್ನು ನೀಡಿದ ಶಿಕ್ಷಕರನ್ನು ನಾವು ಗೌರವಿಸಬೇಕು ಎಂದ ಅವರು ವಿದ್ಯಾರ್ಥಿ ಜೀವನದಲ್ಲಿ ಸಿಕ್ಕ ಅವಕಾಶಗಳನ್ನು ನಾವು ಉತ್ತಮವಾಗಿ ಬಳಸಿಕೊಳ್ಳಬೇಕು. ಆ ಮೂಲಕ ದೇಶದ ಸತ್ ಪ್ರಜೆಗಳಾಗಬೇಕು ಎಂದು ತಿಳಿಸಿದರು.
ಹಿರಿಯ ಪತ್ರಕರ್ತ, ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಡಾ. ರಾಜ್ ಕುಮಾರ್ ಅವರ ಜೀವನದ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ. ಅವರು ಮಾತನಾಡಿ, ಈಗಿನ ನಟರು ತೆರೆಯ ಮುಂದೆ ಇರುವುದಕ್ಕೂ ತೆರೆಯ ಹಿಂದೆ ಇರುವುದಕ್ಕೂ ಹೋಲಿಕೆಯೇ ಇಲ್ಲ. ಆದರೆ ಡಾ. ರಾಜ್ ಕುಮಾರ್ ಅವರು ತೆರೆಯ ಮುಂದೆ ಇದ್ದಂತೆಯೇ ಜೀವನದಲ್ಲಿಯೂ ಬದುಕಿ ತೋರಿಸಿದವರು. ಅವರನ್ನು ಕೇವಲ ನಟ ಎಂದು ಗುರುತಿಸಿ ಅವಮಾನ ಮಾಡಬಾರದು ಎಂದು ಹೇಳಿದರು.
ಕಾಲೇಜಿನ ಐಕ್ಯೂಎಸಿ ಸಹ ಸಂಯೋಜಕಿ ಡಾ. ಜ್ಯೋತಿಪ್ರಿಯಾ, ಕಲಾಸಂಘದ ಸಂಯೋಜಕಿ ಡಾ. ಕೃಷ್ಣಪ್ರಭಾ ಉಪಸ್ಥಿತರಿದ್ದರು.
ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ನಿರ್ದೇಶಕ ಬಿ.ಎ. ಖಾದರ್ ಷಾ ಸ್ವಾಗತಿಸಿದರು.