
ವಿವಿ ಕಾಲೇಜಿನಲ್ಲಿ ‘ಪರಿಸರ ಅಧ್ಯಯನ’ ಪುಸ್ತಕ ಬಿಡುಗಡೆ
ಮಂಗಳೂರು: ನಗರದ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ‘ಪರಿಸರ ಅಧ್ಯಯನ’ ಎಂಬ ಕನ್ನಡ ಪುಸ್ತಕವನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಎಸ್. ಬಿಡುಗಡೆ ಮಾಡಿದರು. ಮಂಗಳೂರು ವಿಶ್ವವಿದ್ಯಾಲಯದ ಪಠ್ಯಕ್ರಮಕ್ಕೆ ಅನುಗುಣವಾಗಿ ಡಾ. ಸಿದ್ದರಾಜು ಎಂ.ಎನ್. ಮತ್ತು ಡಾ. ವಿನಾಯಕ ಅವರು ರಚಿಸಿದ್ದಾರೆ.
ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರು, ವಿದ್ಯಾರ್ಥಿಗಳಿಗೆ ತಾವು ಮಾತನಾಡುವ ಭಾಷೆಯಲ್ಲಿ ಅಧ್ಯಯನ ಮಾಡುವ ಅವಕಾಶ ದೊರೆತರೆ ವಿಷಯಗಳು ಅರ್ಥವತ್ತಾದ ಕಲಿಕೆ ಸಾಧ್ಯವಾಗುತ್ತದೆ. ಕನ್ನಡ ವಿದ್ಯಾರ್ಥಿಗಳ ಹೃದಯದ ಭಾಷೆಯಾಗಿದ್ದು, ಈ ಪುಸ್ತಕದ ಮೂಲಕ ಪರಿಸರ ಅಧ್ಯಯನವನ್ನು ಹೆಚ್ಚು ಪರಿಣಾಮಕಾರಿಯಾಗಿ ನಡೆಸಬಹುದಾಗಿದೆ ಎಂದು ಹೇಳಿದರು.
ಕೆನರಾ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಮಧುಶ್ರೀ ಅವರು ಪ್ಲಾಸ್ಟಿಕ್ ಮಾಲಿನ್ಯ ಮತ್ತು ಮಾನವ ಆರೋಗ್ಯದ ಮೇಲೆ ಅದರ ಪರಿಣಾಮ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಕಳೆದ ತಿಂಗಳು ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದ ಅಂತಾರಾಷ್ಟ್ರೀಯ ವಿಜ್ಞಾನ ಸಮಾವೇಶದಲ್ಲಿ ಸಂಶೋಧನಾ ಲೇಖನ ಪ್ರಸ್ತುತಿಯಲ್ಲಿ ದ್ವಿತೀಯ ಸ್ಥಾನ ಪಡೆದ ಸಂಶೋಧನಾ ವಿದ್ಯಾರ್ಥಿನಿ ಪರಮಶ್ರೀ ದೀಪ ಅವರಿಗೆ ಸನ್ಮಾನ ಮಾಡಲಾಯಿತು. ಸಂಶೋಧನಾ ವಿದ್ಯಾರ್ಥಿನಿ ಸಾಧನೆಯನ್ನು ಮೆಚ್ಚಿ ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕರು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಗ್ರಂಥಪಾಲಕಿ ಡಾ. ವನಜಾ ಸೇರಿದಂತೆ ವಿವಿಧ ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ರೂಪಾಲಿ ಅವರು ಪ್ರಾರ್ಥಿಸಿದರು. ಸೀತಾ ಸ್ವಾಗತಿಸಿ, ಬಸಮ್ಮ ನಿರೂಪಿಸಿದರು. ನಿಧಿವಿತಾ ವಂದಿಸಿದರು.