
‘ಧ್ಯಾನದೊಂದಿಗೆ ದಾನ ಕೂಡಿದಾಗ ಜೀವನ ಸಾರ್ಥಕ’: ಶಾಸಕ ಕಾಮತ್
ಮಂಗಳೂರು: ದೇವರ ನಾಮ ಸ್ಮರಣೆಯೊಂದಿಗೆ ಸತ್ಕಾರ್ಯಗಳನ್ನು ಒಳಗೊಂಡ ದಾನಧರ್ಮದಂತಹ ಚಟುವಟಿಕೆಗಳನ್ನು ಜೋಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಹಾಗೂ ಮಾನವ ಜೀವನವು ಅರ್ಥಪೂರ್ಣವಾಗುವುದು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ. ವೇದವ್ಯಾಸ್ ಕಾಮತ್ ಹೇಳಿದರು.
ಗುಡ್ಪ್ರೈಡೆ ಪ್ರಯುಕ್ತ ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ನೇತೃತ್ವದಲ್ಲಿ, ಟೀಮ್ ಕೊರ್ಡೆಲ್ (ಕುಲಶೇಖರ) ಮತ್ತು ಪಾಲ್ದನೆ ಕ್ರಿಕೆಟರ್ಸ್ ಪಾಲ್ದನೆ ಇವರ ಜಂಟಿ ಸಹಭಾಗಿತ್ವದಲ್ಲಿ ನಡೆದ ಹಣ್ಣುಹಂಪಲು, ಊಟದ ತಟ್ಟೆ, ಲೋಟ ಹಾಗೂ ಬಾತ್ ಟವಲ್ ವಿತರಣಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ದೇವರ ಜಪ, ಸ್ಮರಣೆ, ಧ್ಯಾನ ಇವೆಲ್ಲವೂ ಭಕ್ತಿಯ ಚಟುವಟಿಕೆಗಳು ಬಡವರ ಹಾಗೂ ದೀನದಲಿತರ ಅಗತ್ಯತೆಗಳನ್ನು ಪೂರೈಸಿದಾಗ ಅಂತಹ ಧ್ಯಾನಕ್ಕೆ ಒಂದು ದೊಡ್ಡ ಯಶಸ್ಸು ಸಿಗುತ್ತದೆ ಹಾಗೂ ಇತರರಿಗೆ ಒಂದು ಪ್ರೇರಣೆಯಾಗುತ್ತದೆ ಎಂದು ಹೇಳಿದರು.
ಆಶೀರ್ವಚನ ಮಾಡಿದ ಬಜ್ಜೋಡಿ ಇನ್ಫೆಂಟ್ ಮೇರೀಸ್ ಚರ್ಚ್ ಬಜ್ಜೋಡಿ ಪ್ರಧಾನ ಧರ್ಮಗುರು ಡೊಮಿನಿಕ್ ವಾಸ್ ಮಾತನಾಡಿ, ಗುಡ್ಫ್ರೈಡೆಯ ಈ ಪವಿತ್ರ ದಿನದಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಈ ರೀತಯ ಕಾರ್ಯಕ್ರಮವನ್ನು ಆಯೋಜಿಸಿರುವುದು ಬೈಬಲ್ನ ನಿಜವಾದ ಅರ್ಥವನ್ನು ಎಲ್ಲರೂ ತಿಳಿಯುವಂತಾಗಿದೆ ಹಾಗೂ ಈ ಕಾರ್ಯಕ್ರಮವನ್ನು ಸಂಯೋಜಿಸಿದ ಸಂಘಟಕರನ್ನು ಅಭಿನಂದಿಸಿದರು. ಮುಖ್ಯ ಅತಿಥಿ ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾಜಿ ಶಾಸಕ ಜೆ.ಆರ್. ಲೋಬೋ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ಮಹಾನಗರ ಸಂಘಚಾಲಕ್ ಡಾ. ಸತೀಶ್ ರಾವ್ ಇವರುಗಳು ಮಾತನಾಡಿ ರಾಷ್ಟ್ರದ ಚಿಂತನೆ ಹಾಗೂ ಸಮಾಜದ ಹಿತಾಸಕ್ತಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಆಯೋಜಿಸುವ ಇಂತಹ ಸಂಘಟನೆಗಳು ದೇಶಕ್ಕೆ ಮಾದರಿ ಎಂದು ಹೇಳಿದರು. ವೆನ್ಲಾಕ್ ಆಸ್ತಪತ್ರೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ಫ್ಲೋರಾ ಡಲ್ಮೆಡಾ, ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಪದ್ಮನಾಭ ಅಮೀನ್, ಉದ್ಯಮಿಗಳಾದ ಮ್ಯಾಕ್ಸಿನ್ ಕ್ರಾಸ್ತಾ ಅಶೋಕನಗರ, ವಿಜಯ್ ಪಿಂಟೋ, ರೋಶನ್ ಡಿ’ಸೋಜಾ, ವೇದಿಕೆಯ ಪ್ರಮುಖರಾದ ಮೆಲ್ವಿನ್ ಪೆರಾವೋ, ಪ್ರಕಾಶ್ ಡಿಸೋಜಾ, ಜ್ಯೂಲಿಯಟ್ ಬರ್ಬೊಜಾ, ಲಿನೆಟ್ ಡಿಸೋಜಾ ಕುಲಶೇಖರ, ಮಿಶಾ, ಅರುಣ್ ಡಿಸೋಜಾ ಉರ್ವ, ರಿಚರ್ಡ್ ರಾಡ್ರಿಗಸ್ ಬಿಜೈ, ಅವಿಲ್ ಡಿಸೋಜಾ, ಟೀಮ್ ಕೊರ್ಡೆಲ್ನ ಪ್ರಮುಖರಾದ ನವೀನ್ ಫೆರ್ನಾಂಡಿಸ್ ಕುಲಶೇಖರ ಹಾಗೂ ಪಾಲ್ದನೆ ಕ್ರಿಕೆಟರ್ಸ್ನ ಪ್ರಮುಖರು ಉಪಸ್ಥಿತರಿದ್ದರು.
ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಸ್ಥಾಪಕ ಹಾಗೂ ಸಂಚಾಲಕ ಫ್ರ್ಯಾಂಕ್ಲಿನ್ ಮೊಂತೆರೊ ಸ್ವಾಗತಿಸಿ ಪ್ರಸ್ತಾವನೆ ಗೈದರು. ಪ್ರೀತಿ ಮಿನೆಜಸ್ ಕುಲಶೇಖರ ಕಾರ್ಯಕ್ರಮ ನಿರೂಪಿಸಿದರು. ನಿಯೋನಾ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.