
ಮಂಗಳೂರಿಗೆ ಹೈಕೋರ್ಟ್ ಪೀಠ: ಪೂರಕ ಸಿದ್ಧತೆ
ಮಂಗಳೂರು: ಮಂಗಳೂರಿಗೆ ಹೈಕೋರ್ಟ್ ಪೀಠ ರಚನೆ ಬಗ್ಗೆ ಪೂರಕ ಸಿದ್ಧತೆಗಳು ನಡೆಯುತ್ತಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ಮಂಗಳೂರಿನ ಬಾರ್ ಅಸೋಸಿಯೇಷನ್ ಆಶ್ರಯದಲ್ಲಿ ಇಲ್ಲಿನ ಹಳೆ ಕೋರ್ಟ್ ಕಟ್ಟಡದಲ್ಲಿ ಶುಕ್ರವಾರ ಇದೇ ಮೊದಲ ಬಾರಿಗೆ ಬಾರ್ ಅಸೋಸಿಯೇಷನ್ ಚಟುವಟಿಕೆಗೆ ರೂಪಿಸಲಾದ ಪ್ರತ್ಯೇಕ ಆಪ್ನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಲು ಸಾಕಷ್ಟು ಪ್ರಕ್ರಿಯೆಗಳು ನಡೆಯಬೇಕು. ಮಂಗಳೂರು, ಉಡುಪಿ, ಶಿವಮೊಗ್ಗಗಳಲ್ಲಿ ಎಷ್ಟು ಕೇಸುಗಳು ಇವೆ. ಎಷ್ಟು ಕೇಸುಗಳು ಹೈಕೋರ್ಟ್ಗೆ ಹೋಗಬೇಕಾಗುತ್ತದೆ ಇತ್ಯಾದಿ ವಿಚಾರಗಳ ಬಗ್ಗೆ ದಾಖಲೆ ಸಂಗ್ರಹ ಕಾರ್ಯ ನಡೆಯುತ್ತಿದೆ. ಆ ಬಳಿಕವೇ ಹೈಕೋರ್ಟ್ ಪೀಠ ಮಂಗಳೂರಲ್ಲಿ ಸ್ಥಾಪನೆ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದರು.
ಉಪವಿಭಾಗ ಕೇಂದ್ರ ಪುತ್ತೂರಿನಲ್ಲಿ ವಕೀಲರ ಭವನ ಇದೆ, ಆದರೆ ಮಂಗಳೂರಲ್ಲಿ ಇಲ್ಲ. ಈ ಕೊರತೆ ನಿವಾರಿಸಲು ಪ್ರಯತ್ನಿಸಲಾಗುವುದು. ಅಲ್ಲದೆ ಇಲ್ಲಿನ ಕೋರ್ಟ್ ಕಟ್ಟಡ ಹಾಗೂ ವಕೀಲರ ಸಂಘದ ಕಟ್ಟಡ ನಡುವೆ ರ್ಯಾಂಪ್ ನಿರ್ಮಿಸಲು ಹೈಕೋರ್ಟ್ ಅನುಮತಿ ಕಾಯಲಾಗುತ್ತಿದೆ. ಇದಕ್ಕೆ ಸುಮಾರು 20-25 ಲಕ್ಷ ರೂ. ಬೇಕಾಗುತ್ತದೆ ಎಂದರು.
ಉದ್ಘಾಟಿಸಿದ ದ.ಕ.ಜಿಲ್ಲಾ ಹಿರಿಯ ಹೆಚ್ಚುವರಿ ಮತ್ತು ಸೆಶನ್ಸ್ ನ್ಯಾಯಾಧೀಶ ಎಚ್.ಎಸ್.ಮಲ್ಲಿಕಾರ್ಜುನ ಸ್ವಾಮಿ, ಕರಾವಳಿ ಮೊದಲಿನಿಂದಲೂ ಸೃಜನಶೀಲತೆಗೆ ಹೆಸರಾಗಿದೆ. ಸಂವಿಧಾನ ರಚನಾ ಸಮಿತಿ ಸದಸ್ಯರಲ್ಲಿ ಬಿ.ಎಂ.ನರಸಿಂಹ ರಾವ್ ಮಂಗಳೂರಿನವರು ಎನ್ನುವುದು ಹೆಮ್ಮೆಯ ಸಂಗತಿ. ದೇಶ ಕಟ್ಟುವ ಕಾಯಕದಲ್ಲಿ ಕರಾವಳಿಗಳ ಸೇವೆ ಅನನ್ಯ ಎಂದರು.
ದೇಶದಲ್ಲಿ ತಿದ್ದುಪಡಿಯಾದ ಹಲವು ಕಾನೂನುಗಳು, ಕೋರ್ಟ್ ಮತ್ತು ಸುಪ್ರೀಂ ಕೋರ್ಟ್ಗಳ ಸೂಚನೆಗಳು ಕೆಲವೊಮ್ಮೆ ನ್ಯಾಯಾಧೀಶರಿಗೆ ತಲುಪುತ್ತಿಲ್ಲ. ಹೀಗಾಗಿ ಈ ಆಪ್ನಲ್ಲಿ ಅಂತಹ ವಿಚಾರಗಳನ್ನೂ ಅಳವಡಿಸಬೇಕು. ಆಪ್ ಮೂಲಕ ಕಾನೂನು ತಿಳಿಸುವ ಕೆಲಸ ಆಗಬೇಕು. ಇದರಿಂದ ತ್ವರಿತ ನ್ಯಾಯದಾನ ಸಾಧ್ಯ ಎಂದರು.
ಮಂಗಳೂರು ಬಾರ್ ಅಸೋಸಿಯೇಷನ್ ಅಧ್ಯಕ್ಷ ಎಚ್.ವಿ.ರಾಘವೇಂದ್ರ ಪ್ರಾಸ್ತಾವಿಕದಲ್ಲಿ, 2019ರಲ್ಲಿ ವೆಬ್ಸೈಟ್ ಅನಾವರಣಗೊಂಡಿದ್ದು, ಈಗ ಆಪ್ ರಚನೆಯಾಗುತ್ತಿದೆ. ಇದು ಅತ್ಯಾಧುನಿಕ ಆಪ್ ಆಗಿದ್ದು, ಸದಸ್ಯತನ ನೋಂದಣಿ, ಪರಿಶೀಲನೆ,ಖರ್ಚು ವೆಚ್ಚ, ನೇರ ಶುಲ್ಕ ಪಾವತಿ ಸೇರಿದಂತೆ ಅನೇಕ ವ್ಯವಸ್ಥೆಗಳು ಇವೆ. ವಕೀಲರು ಇದರ ಪ್ರಯೋಜನ ಪಡೆಯಬೇಕು
ಎಂದರು.
ಹಿರಿಯ ವಕೀಲ ಕಳ್ಳಿಗೆ ತಾರಾನಾಥ ಶೆಟ್ಟಿ, ನ್ಯಾಯವಾದಿ, ನ್ಯಾಯವಾದಿ ಹಾಗೂ ಪಾಲಿಕೆ ಮಾಜಿ ಸದಸ್ಯ ಎ.ಸಿ.ವಿನಯರಾಜ್, ಹಿರಿಯ ನ್ಯಾಯವಾದಿ ಅಂದ್ರಾದೆ ಡೆರಿ ಇದ್ದರು.