
ಸಿಒಡಿ ತನಿಖೆಗೆ ಒತ್ತಾಯ
ಮಂಗಳೂರು: ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾ.14ರಂದು ಆಟೋರಿಕ್ಷಾ ಚಾಲಕ ರಾಧಾಕೃಷ್ಣ ಅವರು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತಪಟ್ಟ ಪ್ರಕರಣದ ಬಗ್ಗೆ ಸಿಒಡಿ ತನಿಖೆ ನಡೆಸಬೇಕು ಎಂದು ರಾಧಾಕೃಷ್ಣ ಅವರ ಸಹೋದರಿ, ಕುಂದಾಪುರ ಶ್ರೀ ಮೂಕಾಂಬಿಕಾ ಮಹಿಳಾ ಮಂಡಲಗಳ ತಾಲೂಕು ಒಕ್ಕೂಟದ ಅಧ್ಯಕ್ಷೆ ರಾಧಾ ದಾಸ್ ಒತ್ತಾಯಿಸಿದ್ದಾರೆ.
ರಾಧಾಕೃಷ್ಣ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ಪ್ರಕರಣ ದಾಖಲಾಗಿದೆ. ಆದರೆ ಈ ಸಾವಿನ ಬಗ್ಗೆ ಸಂಶಯವಿದೆ. ಮಹಿಳೆಯೊಬ್ಬಳು ಆಕೆಯನ್ನು ರಾಧಾಕೃಷ್ಣ ಅವರ ಪತ್ನಿ ಎಂದು ಹೇಳಿಕೊಂಡಿದ್ದಾಳೆ. ಆದರೆ ಆಕೆ ರಾಧಾಕೃಷ್ಣ ಅವರನ್ನು ವಿವಾಹವಾಗಿಲ್ಲ. ಬೆದರಿಕೆ ಹಾಕಿ ಹಾರ ಬದಲಾಯಿಸಿಕೊಂಡಿದ್ದಾಳೆ. ನೋಂದಣಿ ಅಥವಾ ಸಾಂಪ್ರದಾಯಿಕ ರೀತಿಯಲ್ಲಿ ಮದುವೆ ಆಗಿಲ್ಲ. ಆಕೆ ರಾಧಾಕೃಷ್ಣ ಅವರನ್ನು ಬ್ಲ್ಯಾಕ್ಮೇಲ್ ಮಾಡಿದ್ದಾಳೆ. ಆಕೆ ಮತ್ತು ಆಕೆಯ ಸಹಚರರು ರಾಧಾಕೃಷ್ಣ ಅವರ ಸಾವಿಗೆ ಕಾರಣರಾಗಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಆರೋಪಿಸಿದರು.
ರಾಧಾಕೃಷ್ಣ ಅವರ ಇನ್ನೋರ್ವ ಸಹೋದರಿ ಜಯಂತಿ, ಸಾಮಾಜಿಕ ಸೇವಾ ಕಾರ್ಯಕರ್ತೆ ತಿಲೋತ್ತಮ ನಾಯಕ್, ನಿತ್ಯಾನಂದ್ ಉಪಸ್ಥಿತರಿದ್ದರು.