
ವಾಲಿಬಾಲ್ ಪಂದ್ಯಾಟ, ಲೆಜೆಂಡ್ಸ್ ಟ್ರೋಫಿ
ಮಂಗಳೂರು: ದ.ಕ.ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ ಮತ್ತು ಕಡಬ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಹಾಗೂ ಸಮಾನ ಮನಸ್ಕರ ವೇದಿಕೆ ನೆಲ್ಯಾಡಿ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಪುರುಷರ ಹಾಗೂ ಮಹಿಳೆಯರ ವಾಲಿಬಾಲ್ ಪಂದ್ಯಾಟ ಹಾಗೂ ಲೆಜೆಂಡ್ಸ್ ಟ್ರೋಫಿ ಏ.5ರಂದು ಸಂಜೆ 3ಕ್ಕೆ ನೆಲ್ಯಾಡಿ ಬೆಥನಿ ಶಾಲಾ ಮೈದಾನದಲ್ಲಿ ನಡೆಯಲಿದೆ.
ಪಂದ್ಯಾಟದಲ್ಲಿ ಮಹಿಳೆಯರ ನಾಲ್ಕು ತಂಡಗಳು ಹಾಗೂ ಪುರುಷರ 12 ತಂಡಗಳು ಭಾಗವಹಿಸಲಿದೆ. ಮೊದಲ ನಾಲ್ಕು ಸ್ಥಾನ ಪಡೆದವರಿಗೆ ಶಾಶ್ವತ ಫಲಕ ಹಾಗೂ ನಗದು ಬಹುಮಾನ ನೀಡಲಾಗುವುದು. ಪಂದ್ಯಾಟವನ್ನು ಉದ್ಯಮಿ ಕಿರಣ್ಚಂದ್ರ ಡಿ. ಪುಷ್ಪಗಿರಿ ಉರುವಾಲು ಉದ್ಘಾಟಿಸಲಿದ್ದಾರೆ.
ನೆಲ್ಯಾಡಿ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಡಾ.ವರ್ಗಿಸ್ ಕೈಪನಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ತಂಡಗಳಿಗೆ ಉಚಿತ ಪ್ರವೇಶವಿದೆ ಎಂದು ದ.ಕ.ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ಬಿ.ಎನ್. ಸತೀಶ್ ಕುಮಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉಪಾಧ್ಯಕ್ಷೆ ಲಿಲ್ಲಿ ಪಾಯಸ್ ಮಾತನಾಡಿ, ಶಾಲಾ ಮಕ್ಕಳ 14 ಮತ್ತು 17 ವಯೋಮಾನದ ಹುಡುಗ, ಹುಡುಗಿಯರ ಪಂದ್ಯಾಟ ಏ.12ರಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಪ್ರತಿ ತಾಲೂಕಿನಿಂದ ತಂಡವನ್ನು ಆಹ್ವಾನಿಸಿ, ಪ್ರತಿಭಾವಂತ ಆಟಗಾರರನ್ನು ಗುರುತಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅವರನ್ನು ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುವುದು ಇದರ ಉದ್ದೇಶವಾಗಿದೆ ಎಂದರು.
ಸಂಘಟಕರಾದ ಶಂಕರ್ ಶೆಟ್ಟಿ, ಮೋಹನ್ ಶಿರ್ಲಾಲು, ನೆಲ್ಯಾಡಿ ಸಮಾನ ಮನಸ್ಕರ ವೇದಿಕೆ ಕಾರ್ಯದರ್ಶಿ ಪ್ರಶಾಂತ್ ವರ್ಗಿಸ್, ಕೋಶಾಧಿಕಾರಿ ಜೋಶ್ ಕೆ.ಜಿ. ಉಪಸ್ಥಿತರಿದ್ದರು.