
ಕುಡುಪು ಬಳಿ ಗುಂಪು ಹತ್ಯೆ: ಬಿಜೆಪಿ ಕಾರ್ಯಕರ್ತರಿಂದ ಕೃತ್ಯ: ಹರೀಶ್ ಕುಮಾರ್
ಮಂಗಳೂರು: ಕುಡುಪು ಸಮೀಪ ಕ್ರಿಕೆಟ್ ಆಟದ ವೇಳೆ ಗುಂಪು ಹತ್ಯೆ ನಡೆದಿರೋದು ಬಿಜೆಪಿ ಕಾರ್ಯಕರ್ತರಿಂದ ಎಂದು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಬಿಜೆಪಿ ಕಾರ್ಯಕರ್ತ ಪಿಸ್ತೂಲ್ ರವಿ ಎಂಬಾತ ಈ ಗುಂಪು ಹತ್ಯೆಯ ನೇತೃತ್ವ ವಹಿಸಿದ್ದ. ಮೈದಾನದಲ್ಲಿದ್ದ ಯುವಕರಿಗೆ ಪ್ರಚೋದನೆ ನೀಡಿದ್ದರಿಂದಲೇ ಈ ದುರ್ಘಟನೆ ಸಂಭವಿಸಿದೆ ಎಂದು ಆರೋಪಿಸಿದರು.
ಕ್ರಿಕೆಟ್ ಆಟದ ಸಂದರ್ಭದಲ್ಲಿ ಕೇರಳದ ಯುವಕ ಮೈದಾನಕ್ಕೆ ಬಂದಾಗ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಪಿಸ್ತೂಲ್ ರವಿ ಎಂಬಾತ ‘ತೂಪಿನ ದಾದ ಹಾಕುಲೆ’ (ನೋಡೋದು ಏನು, ಹೊಡೆಯಿರಿ) ಅಂತ ಪ್ರಚೋದನೆ ನೀಡಿದ ಬಳಿಕ ಅಲ್ಲಿದ್ದ ಯುವಕರು ಬ್ಯಾಟ್, ಕಲ್ಲಿನಿಂದ ಹೊಡೆದು ಮರ್ಮಾಂಗಕ್ಕೆ ಗುದ್ದಿ, ಸ್ಮೃತಿ ತಪ್ಪಿ ಬಿದ್ದ ನಂತರ ದೇಹವನ್ನು ಪಕ್ಕಕ್ಕೆ ಹಾಕಿದ್ದರು. ಗಂಭೀರ ಗಾಯಗೊಂಡ ವ್ಯಕ್ತಿಗೆ ಸ್ವಲ್ಪ ಹೊತ್ತಿನ ಬಳಿಕ ಪ್ರಜ್ಞೆ ಬಂದಾಗ ಮತ್ತೆ ಹೊಡೆದಿದ್ದಾರೆ. ಇದು ಭಯೋತ್ಪಾದಕ ಕೃತ್ಯ ಅಲ್ವಾ ಎಂದು ಪ್ರಶ್ನಿಸಿದರು.
ಅಧಿಕಾರಿ ಅಮಾನತಿಗೆ ಪತ್ರ:
ಮೃತಪಟ್ಟ ವ್ಯಕ್ತಿಯ ಮೈಪೂರ್ತಿ ಗಾಯಗಳಿದ್ದರೂ ಠಾಣಾ ಇನ್ಸ್ಪೆಕ್ಟರ್ ಗಾಯವಾಗಿಲ್ಲ ಎಂದು ಹಿರಿಯ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ಶವಾಗಾರಕ್ಕೆ ಸಾಗಿಸಿದ್ದರು. ಶವಾಗಾರಕ್ಕೆ ಹೋಗಿ ನೋಡಿದಾಗ ಇಡೀ ಮೈಯಲ್ಲಿ ಗಾಯಗಳಾಗಿರುವುದು ಗೊತ್ತಾಗಿದೆ. ತಪ್ಪು ಮಾಹಿತಿ ನೀಡಿದ ಅಧಿಕಾರಿಯನ್ನು ಸಸ್ಪೆಂಡ್ ಮಾಡಲು ಗೃಹ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದು ಹರೀಶ್ ಕುಮಾರ್ ತಿಳಿಸಿದರು.
ಕ್ರಿಕೆಟ್ ಆಟವಾಡಲು ಹೋಗಿದ್ದ ಸ್ಥಳೀಯ ಯುವಕರಿಗೆ ಪ್ರಚೋದನೆ ನೀಡಿದ್ದರಿಂದಲೇ ಕೊಲೆ ಕೃತ್ಯ ನಡೆದಿದೆ. ಈ ರೀತಿ ಬಿಜೆಪಿಯವರ ಪ್ರಚೋದನೆಯಿಂದ ಅನೇಕ ಪ್ರಕರಣಗಳು ಆಗಿವೆ. ಹಿಂದುಳಿದ ಯುವಕರನ್ನು ಛೂಬಿಟ್ಟು ಅವರ ಬಾಳು, ಕುಟುಂಬಗಳನ್ನು ಹಾಳು ಮಾಡಿದ್ದಾರೆ. ಯಾರೂ ಇಂಥ ಪ್ರಚೋದನೆಗೆ ಒಳಗಾಗಬಾರದು ಎಂದರು.
ಕಾಂಗ್ರೆಸ್ ಮುಖಂಡರಾದ ಶುಭೋದಯ ಆಳ್ವ, ಶಾಹುಲ್ ಹಮೀದ್, ಟಿಕೆ ಸುಧೀರ್, ಪ್ರಕಾಶ್ ಸಾಲ್ಯಾನ್, ವಿಶ್ವಾಸ್ದಾಸ್, ನವಾಝ್, ಸುಹೈಲ್ ಕಂದಕ್, ಲಾರೆನ್ಸ್ ಡಿಸೋಜ, ಹೊನ್ನಯ್ಯ ಮತ್ತಿತರರು ಇದ್ದರು.