
‘ಕಂಡೇವುದ ಆಯನ’ ಮೀನು ಹಿಡಿಯುವ ಜಾತ್ರೆ, ವಾರ್ಷಿಕ ನೇಮೋತ್ಸವ
ಮಂಗಳೂರು: ಮೇ.14 ರಂದು ಖಂಡಿಗೆ ಮೀನು ಹಿಡಿಯುವ ಜಾತ್ರೆಯೊಂದಿಗೆ ಕಂಡೇವುದ ಆಯನ ಪ್ರಾರಂಭಗೊಳ್ಳಲಿದ್ದು ಎರಡು ದಿನಗಳ ಕಾಲ ನಡೆಯಲಿರುವ ವಾರ್ಷಿಕ ಉತ್ಸವದ ಸಂದರ್ಭದಲ್ಲಿ ಚೇಳಾಯರು ಖಂಡಿಗೆ ಧರ್ಮರಸು ಶ್ರೀ ಉಳ್ಳಾಯ ಹಾಗೂ ಪರಿವಾರ ದೈವಗಳ ವಾರ್ಷಿಕ ಜಾತ್ರೆ ನಡೆಯಲಿದೆ ಎಂದು ತೋಕೂರು ಗುತ್ತು ಉದಯ್ ಕುಮಾರ್ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ಮೇ.14 ರಂದು ಬೆಳಗ್ಗೆ 9 ಗಂಟೆಗೆ ಮೂಲಸ್ಥಾನದಲ್ಲಿ ಶುದ್ಧಕಲಶ, ಗಣಹೋಮ, ಬೆಳಗ್ಗೆ 11 ಗಂಟೆಗೆ ಸಂಕ್ರಮಣ ಪೂಜೆ, 12 ಗಂಟೆಗೆ ಮಹಾ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8 ಗಂಟೆಗೆ ಮಹಾ ಅನ್ನಸಂತರ್ಪಣೆ, ರಾತ್ರಿ 9 ಗಂಟೆಗೆ ಬ್ರಹ್ಮಸ್ಥಾನದಲ್ಲಿ ಬ್ರಹ್ಮರಿಗೆ ತಂಬಿಲ, ಕುಮಾರ ಸಿರಿಗಳ ದರ್ಶನ, ಧರ್ಮದ ಶ್ರೀ ಉಳ್ಳಾಯ ಹಾಗೂ ಪರಿವಾರ ದೈವಗಳ ಭಂಡಾರ ಮೂಲಸ್ಥಾನ ಹೋಗುವುದು. ಸಿಡಿಮದ್ದು ಪ್ರದರ್ಶನ ನಂತರ ಧ್ವಜಾರೋಹಣ ನಡೆಯಲಿದೆ.
ಮೇ.15 ರಂದು ಬೆಳಗ್ಗೆ 5 ಗಂಟೆಗೆ ಧರ್ಮರಸು ಶ್ರೀ ಉಳ್ಳಾಯ, ಇಷ್ಟದೇವತೆ, ಬಬ್ಬರ್ಯ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವ ನಂತರ ನಂದಿಗೋಣ ಕುಮಾರ ಸಿರಿಗಳ ಭೇಟಿ, ಬೆಳಗ್ಗೆ 7 ಗಂಟೆಗೆ ನಾಗದೇವರಿಗೆ ಭಕ್ತಾದಿಗಳಿಂದ ತಂಬಿಲ ಸೇವೆ, ಸಂಜೆ 4.30ಕ್ಕೆ ಬಾಕಿಮಾರು ಗದ್ದೆಯಲ್ಲಿ ಚೆಂಡು, ಸಂಜೆ 6 ಗಂಟೆಗೆ ಜಾರಂದಾಯ, ಬಂಟ, ಕೊಡಮಣಿತ್ತಾಯ ದೈವಗಳಿಗೆ ಜೋಡಿ ನೇಮೋತ್ಸವ ಬಾಕಿಲ್ ದಾಂತಿ ಶ್ರೀ ಕೋರಬ್ಬು ದೈವಸ್ಥಾನದ ಕೋರಬ್ಬು ಮತ್ತು ಧೂಮಾವತಿ ದೈವದ ಭೇಟಿ ನಡೆಯಲಿದೆ.
ರಾತ್ರಿ 7 ಗಂಟೆಗೆ ಶ್ರೀ ಉಳ್ಳಾಯ ಹಾಗೂ ಪರಿವಾರ ದೈವಗಳಿಗೆ ಸಾಮೂಹಿಕ ಹೂವಿನ ಪೂಜೆ, ನಂತರ ಸಾರ್ವಜನಿಕ ಅನ್ನಸಂತರ್ಪಣೆ ಜರುಗಲಿದೆ. ರಾತ್ರಿ 8 ಗಂಟೆಗೆ ಧ್ವಜಾವರೋಹಣ ನಡೆದು ಖಂಡಿಗೆ ಬೀಡಿಗೆ ಭಂಡಾರ ನಿರ್ಗಮನವಾಗಲಿದೆ.
ಮೇ.14ರಂದು ಸಂಜೆ 5 ಗಂಟೆಗೆ ಸರಿಯಾಗಿ ಯಕ್ಷಮಣಿ ಕಲಾ ತಂಡ ಚೇಳಾಯರು ಇವರಿಂದ ಸುದರ್ಶನ ಗರ್ವ ಭಂಗ ಭಾರ್ಗವ ವಿಜಯ ಯಕ್ಷಗಾನ ಬಯಲಾಟ ನಡೆಯಲಿದೆ. ಮೇ.15 ರಂದು ರಾತ್ರಿ 8 ಗಂಟೆಗೆ ಚೈತನ್ಯ ಕಲಾವಿದರು ಬೈಲೂರು ಇವರಿಂದ ಅಷ್ಟೆಮಿ ತುಳು ನಾಟಕ ಜರುಗಲಿದೆ. ಮೇ.24 ರಂದು ರಾತ್ರಿ 9 ಗಂಟೆಗೆ ಕಲ್ಕುಡ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವ ಇದೆ ಎಂದು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ದಿವಾಕರ್ ಸಾಮಾನಿ ಚೇಳಾಯರು, ನಾಗರಾಜ್ ಭಟ್, ದಯಾನಂದ ಶೆಟ್ಟಿ ಖಂಡಿಗೆ ಬೀಡು, ಆಶಿಕ್ ಭಟ್, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ, ದೈವಸ್ಥಾನದ ಕಾರ್ಯದರ್ಶಿ ಚರಣ್ ಕುಮಾರ್, ಕೋಶಾಧಿಕಾರಿ ಸುಧಾಕರ ಶೆಟ್ಟಿ ಖಂಡಿಗೆ ಮತ್ತಿತರರು ಉಪಸ್ಥಿತರಿದ್ದರು.