
ಎನ್.ಎಸ್.ಯು.ಐ. ವತಿಯಿಂದ ವಿದ್ಯಾರ್ಥಿ ನ್ಯಾಯ ಯಾತ್ರೆ: ಸುಳ್ಯದಲ್ಲಿ ವಿವಿಧ ಕಾಲೇಜುಗಳ ಭೇಟಿ
ಸುಳ್ಯ: ರಾಜ್ಯದ ವಿದ್ಯಾರ್ಥಿಗಳ ಹಕ್ಕುನ್ನು ರಕ್ಷಿಸುವ ಮತ್ತು ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಎನ್ಎಸ್ಯುಐ ವತಿಯಿಂದ ವಿದ್ಯಾರ್ಥಿ ನ್ಯಾಯ ಯಾತ್ರೆ ಪ್ರಯುಕ್ತ ವಿವಿಧ ಕಾಲೇಜು ಭೇಟಿ ಕಾರ್ಯಕ್ರಮ ಸುಳ್ಯದಲ್ಲಿ ನಡೆಯಿತು.
ಕಾಲೇಜುಗಳಿಗೆ ಭೇಟಿ ನೀಡಿದ ತಂಡ ಕಾಲೇಜಿನ ಮುಖ್ಯಸ್ಥರೊಂದಿಗೆ ವಿದ್ಯಾರ್ಥಿ ನ್ಯಾಯ ಯಾತ್ರೆ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ನ್ಯಾಯ ಯಾತ್ರೆಯ ಪೋಸ್ಟರ್ನ್ನು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಬಿಡುಗಡೆ ಮಾಡಿದರು.
ಇಂಟೆಕ್ ಕಾಂಗ್ರೆಸ್ ಸುಳ್ಯ ವಿಧಾನಸಭಾ ಕ್ಷೇತ್ರಾಧ್ಯಕ್ಷ ಶಾಫಿ ಕುತ್ತಮೊಟ್ಟೆ, ಗ್ಯಾರಂಟಿ ಯೋಜನೆಯ ತಾಲೂಕು ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಪಂಚಾಯತ್ ರಾಜ್ ಸಂಘಟನೆಯ ತಾಲೂಕು ಪ್ರಧಾನ ಕಾರ್ಯದರ್ಶಿ ಭವಾನಿಶಂಕರ್ ಕಲ್ಮಡ್ಕ, ಲತೀಫ್ ಅಡ್ಕಾರು, ಉಬೈಸ್ ಗೂನಡ್ಕ, ಆಶಿಕ್ ಅರಂತೋಡು, ಗೋಕುಲ್ ದಾಸ್, ಎನ್.ಎಸ್.ಯು.ಐ. ನಾಯಕರಾದ ಹೃತಿಕ್ ರವಿ, ಮನೀಶ್ ಜಿ. ರಾಜ್, ಅನ್ವಿತ್ ಕಟೀಲ್, ಶಿವಕುಮಾರ್ ಮತ್ತಿತರರು ಇದ್ದರು.
ಯಾತ್ರೆಯ ಮೂಲಕ ವಿದ್ಯಾರ್ಥಿ ಸಮುದಾಯದ ಪ್ರಮುಖ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಗುತ್ತದೆ. ಶೈಕ್ಷಣಿಕ ವ್ಯವಸ್ಥೆಯಲ್ಲಿ ಬದಲಾವಣೆ, ಸಮರ್ಪಕ ವಿದ್ಯಾರ್ಥಿವೇತನ ವಿತರಣಾ ವ್ಯವಸ್ಥೆ, ಹಾಸ್ಟೆಲ್ ವ್ಯವಸ್ಥೆಯ ಸುಧಾರಣೆ, ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗಾವಕಾಶಗಳ ಹೆಚ್ಚಳ, ಡ್ರಗ್ಸ್ ಮತ್ತು ರ್ಯಾಂಗ್ ಪಿಡುಗು ನಿರ್ಮೂಲನೆ, ವಿದ್ಯಾರ್ಥಿನಿಯರ ಸುರಕ್ಷತೆ, ಸರ್ಕಾರಿ ವಿದ್ಯಾಸಂಸ್ಥೆಗಳ ಬಲವರ್ಧನೆ, ಕರ್ನಾಟಕ ವಿದ್ಯಾರ್ಥಿ ಹಿತ ಮಸೂದೆ ಜಾರಿಗೆ ತರುವಿಕೆ, ಪ್ರಶ್ನೆ ಪತ್ರಿಕೆ ಲೀಕ್ ತಡೆಗಟ್ಟುವಿಕೆ ಮತ್ತಿತರ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಪ್ರಮುಖರು ತಿಳಿಸಿದ್ದಾರೆ.