
ಪ್ರಾರ್ಥನೆ ಮತ್ತು ಧ್ಯಾನದಿಂದ ಮನ ಪರಿವರ್ತನೆ: ಡಾ. ಡಿ. ವೀರೇಂದ್ರ ಹೆಗ್ಗಡೆ
ಉಜಿರೆ: ‘ಪ್ರಾರ್ಥನೆ ಮತ್ತು ಧ್ಯಾನದಿಂದ ಮನ ಪರಿವರ್ತನೆಗೆ ಸಹಕಾರಿಯಾಗುತ್ತದೆ. ಜೀವನದಲ್ಲಿ ಆರೋಗ್ಯವೇ ಭಾಗ್ಯ, ಎಲ್ಲರೂ ಸೇವಾ ಕಾರ್ಯಗಳನ್ನು ಸದಾ ಮಾಡುತ್ತಿರಿ, ಈ ಶಿಬಿರದಿಂದ ಮಾನಸಿಕವಾಗಿ ಪರಿವರ್ತನೆ ಆಗಿದ್ದೀರಿ. ಈ ದೇಶಕ್ಕೆ ಆಸ್ತಿಯಾಗಿ ಉತ್ತಮ ಜೀವನವನ್ನು ನಡೆಸಿ. ತಂದೆ ತಾಯಿಗೆ ಉತ್ತಮ ಮಗನಾಗಿ, ಹೆಂಡತಿಗೆ ಒಳ್ಳೆಯ ಜವಾಬ್ದಾರಿ ಗಂಡನಾಗಿ, ತಂದೆಯಾಗಿ ತಮ್ಮ ಮಕ್ಕಳೊಂದಿಗೆ ಸುಖೀ ಜೀವನ ನಡೆಸಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಇಂದು ಉಜಿರೆ ಲಾಲದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯುತ್ತಿರುವ 246ನೇ ವಿಶೇಷ ಮದ್ಯವರ್ಜನ ಶಿಬಿರದ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
‘ಕುಡಿತ ಬಿಟ್ಟು ನವಜೀವನ ನಡೆಸುವ ಸಂದರ್ಭ ಕುಟುಂಬ ಮತ್ತು ಸಮಾಜವನ್ನು ಪ್ರೀತಿಯಿಂದ ನೋಡುವ ಅವಕಾಶ ತಮಗೆ ದೊರಕುತ್ತದೆ’ ಎಂದರು.
ಇದೇ ಸಂದರ್ಭದಲ್ಲಿ ಹೆಗ್ಗಡೆ ಅವರ ಕಚೇರಿ ಪ್ರಬಂಧಕ ರಾಜೇಂದ್ರ ದಾಸ್ ಉಪಸ್ಥಿತರಿದ್ದರು. ಶಿಬಿರದಲ್ಲಿ ರಾಜ್ಯದ ವಿವಿಧ ಕಡೆಗಳಿಂದ 73 ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆಯ ಕಾರ್ಯದರ್ಶಿ ವಿವೇಕ್ ವಿ. ಪಾಯ್ಸ್, ಆಡಳಿತ ಯೋಜನಾಧಿಕಾರಿ ಮಾಧವ ಗೌಡ, ಶಿಬಿರಾಧಿಕಾರಿ ದಿನೇಶ್ ಮರಾಠಿ, ನಂದಕುಮಾರ್, ಜಯಾನಂದ, ಜಾಗೃತಿ ಸೌಧದ ಪ್ರಬಂಧಕರಾದ ಕಿಶೋರ್ ಕುಮಾರ್, ಶಿಬಿರದ ಆಪ್ತ ಸಲಹೆಗಾರರಾದ ಮಧು ಜಿ.ಆರ್. ಹಾಗೂ ಆರೋಗ್ಯ ಸಹಾಯಕರಾದ ಜಯಲಕ್ಷ್ಮಿ, ಪ್ರೆಸಿಲ್ಲಾ ಡಿ’ಸೋಜ ಮತ್ತು ನವಜಿವನ ಸಮಿತಿಯ ಸದಸ್ಯರಾದ ತಿಮ್ಮಪ್ಪ, ಸಂತೋಷ್ ಸಹಕರಿಸಿದರು.
ಮುಂದಿನ ವಿಶೇಷ ಶಿಬಿರವು ಮೇ.5 ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.