ಸಯ್ಯಿದ್ ಮದನಿ ದರ್ಗಾ ಉರೂಸ್‌ಗೆ ಚಾಲನೆ

ಸಯ್ಯಿದ್ ಮದನಿ ದರ್ಗಾ ಉರೂಸ್‌ಗೆ ಚಾಲನೆ


ಉಳ್ಳಾಲ: ಪ್ರವಾದಿಗಳು, ಅಂಬಿಯಾಕಳು, ಔಲಿಯಾ ಸ್ಥಾನದಲ್ಲಿ ಇರುವವರಿಗೆ ಪ್ರತ್ಯೇಕ ಸ್ಥಾನ ಇದೆ.ಅವರ ಶಕ್ತಿ ಅಸಾಧಾರಣ ಶಕ್ತಿ ಆಗಿರುತ್ತದೆ. ಪ್ರವಾದಿಗಳು, ಅಂಬಿಯಾಕಳು ಶತ್ರುಗಳ ವಿರುದ್ಧ ಹೋರಾಡಿ ಧರ್ಮ ಪ್ರಚಾರ ಮಾಡಿದವರು. ಅವರಿಗೆ ಅಲ್ಲಾಹು ಪ್ರತ್ಯೇಕ ಶಕ್ತಿ ನೀಡಿದ್ದಾನೆ ಎಂದು ಖಾಝಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಹೇಳಿದರು.

ಅವರು ಖುತ್ ಬುಝ್ಝಮಾನ್ ಹಝ್ರತ್ ಅಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ತಂಙಳ್ ಅವರ ಹೆಸರಿನಲ್ಲಿ ಉಳ್ಳಾಲ ದರ್ಗಾ ವಠಾರದಲ್ಲಿ ನಡೆಯುವ 22 ಪಂಚವಾರ್ಷಿಕ ಉರೂಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಔಲಿಯಾಗಳ ಹಾಗೂ ಪ್ರವಾದಿ ಯವರ ಶಕ್ತಿಗೆ ಸಾಮ್ಯತೆ ಇದೆ. ಅವರ ಚರಿತ್ರೆ ಓದಿದರೆ ಅವರು ಮಾಡಿದ ಸಾಧನೆ ಅರ್ಥ ಆಗುತ್ತದೆ. ನಮ್ಮ ಈಮಾನ್ ವೃದ್ಧಿ ಆಗಲು ಧಾರ್ಮಿಕ ಚೌಕಟ್ಟಿನಲ್ಲಿ ನಾವಿರಬೇಕು. ಪ್ರವಾದಿ ಹಾಗೂ ಔಲಿಯಾಕಳ ಹೆಸರಿನಲ್ಲಿ ಓದುವುದು, ಅವರ ಸಾಧನೆ ಬಗ್ಗೆ ಸಮಾಜಕ್ಕೆ ತಿಳಿಸುವುದು ಪುಣ್ಯ ದಾಯಕ ಕಾರ್ಯ ಎಂದವರು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಉಡುಪಿ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾತನಾಡಿ, ಇಸ್ಲಾಂ ಅಲ್ಲಾಹನು ಸ್ವೀಕರಿಸಿದ ಧರ್ಮ. ಇಸ್ಲಾಂನ ಬಗ್ಗೆ ಅಲ್ಲಾಹನು ಕುರ್‌ಆನ್‌ನಲ್ಲಿ ವಿವರಿಸಿದ್ದಾನೆ. ಲೋಕಕ್ಕೆ ಬಂದಿರುವ 1,24,000 ಅಂಬಿಯಾಕಳು ಇಸ್ಲಾಂ ಧರ್ಮಕ್ಕಾಗಿ ಸೇವೆ ಮಾಡಿದವರು. ಉಳ್ಳಾಲ ಮದನಿ ತಂಙಳ್ ಅವರ ಕಾರಣದಿಂದ ಅಭಿವೃದ್ಧಿ ಕಂಡಿದೆ ಎಂದರು.

ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಉಳ್ಳಾಲ ದರ್ಗಾ ವ್ಯಾಪ್ತಿಯಲ್ಲಿ ನಡೆಯುವ ಉರೂಸ್ ಯಶಸ್ಸಿಗೆ ಸಹಕರಿಸುವಂತೆ ಕರೆ ನೀಡಿದರು.

ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ಉಳ್ಳಾಲ ದರ್ಗಾ ಧಾರ್ಮಿಕ ಮಾತ್ರವಲ್ಲ, ಎಲ್ಲಾ ಧರ್ಮದ ಜನರು ಸೇರುವ ಸಹೋದರತೆಯ ಕ್ಷೇತ್ರ. ಧಾರ್ಮಿಕ ಜೊತೆಗೆ ಲೌಕಿಕ ವಿದ್ಯಾಭ್ಯಾಸಕ್ಕೆ ಉಳ್ಳಾಲ ದರ್ಗಾ ಒತ್ತು ನೀಡಿದ ಕಾರಣ ಉಳ್ಳಾಲ ಅಭಿವೃದ್ಧಿ ಆಗಿದೆ. ನಿನ್ನೆಯ ದಿನ ಕಾಶ್ಮೀರ ದ ಪೆಹಾಲ್ಗಮ್ ಸಂಭವಿಸಿದ ದುರಂತವನ್ನು ಇಡೀ ಉಳ್ಳಾಲದ ಜನತೆ ಖಂಡಿಸುತ್ತದೆ. ಕೇಂದ್ರ ಸರಕಾರ ಇದಕ್ಕೆ ತಕ್ಕ ಉತ್ತರವನ್ನು ನೀಡಬೇಕು. ಜೀವನದಲ್ಲಿ ಸಣ್ಣ ಉಪಕಾರ ಮಾಡಿದರೆ ಜೀವನ ಪೂರ್ತಿ ಮರೆಯಬಾರದು. ಉಳ್ಳಾಲ ದರ್ಗಾ ಈಗ ಶೈಕ್ಷಣಿಕ ಹಾಗೂ ಮಾಹಿತಿಯ ಸಾಮಾಜಿಕ ಕೇಂದ್ರವಾಗಿ ಹೊರಹೊಮ್ಮಿದೆ. ಒಂದು ತಿಂಗಳ ಊರೂಸ್ ನಮ್ಮ ಸಂಸ್ಕೃತಿಯನ್ನು ಭವಿಷ್ಯದ ಜನಾಂಗಕ್ಕೆ ತಿಳಿಸಿಕೊಡುವ ಕಾರ್ಯಕ್ರಮ ಆಗಬೇಕು ಎಂದರು.

ಸಯ್ಯಿದ್ ಅತ್ತಾವುಲ್ಲ ತಂಙಳ್ ದುಆ ನೆರವೇರಿಸಿದರು. ಈ ಕಾರ್ಯಕ್ರಮದ ಪ್ರಯುಕ್ತ ದ್ಸಿಕ್ರ್ ಹಲ್ಕಾ, ದರ್ಗಾ ಝಿಯಾರತ್ ಸಿಹಿ ಪಾನೀಯ ವಿತರಣೆಗೆ ಚಾಲನೆ ನಡೆಯಿತು.

ಎಸ್‌ಎಂಎ ರಶೀದ್ ಹಾಜಿ, ದರ್ಗಾ ಮಾಜಿ ಅಧ್ಯಕ್ಷ ಕಣಚೂರು ಮೋನು, ಸಯ್ಯಿದ್ ಅಬ್ದುರ್ರಹ್ಮಾನ್ ಮಸ್‌ಊದ್ ತಂಙಳ್, ಉಡುಪಿ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಸಯ್ಯಿದ್ ಹಾಮಿದ್ ಇಂಬಿಚ್ಚಿ ತಂಙಳ್, ಸಯ್ಯಿದ್ ಅಲಿ ಬಾಫಕಿ ತಂಙಳ್, ಅಶ್ರಫ್ ಸ ಅದಿ ಆದೂರು, ಹುಸೈನ್ ಸ ಅದಿ ಕೆಸಿರೋಡ್, ಮಜೀದ್ ಹಾಜಿ ಉಚ್ಚಿಲ, ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್, ಶರೀಯತ್ ಕಾಲೇಜು ಪ್ರಾಂಶುಪಾಲ ಪ್ರೊ. ಅಹ್ಮದ್ ಕುಟ್ಟಿ ಸಖಾಫಿ, ಶಾಕೀರ್ ಹಾಜಿ, ಎಸ್.ಕೆ. ಖಾದರ್ ಹಾಜಿ, ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಜುಲ್ಫಿಕರ್ ಅಲಿ, ಸಿದ್ದೀಕ್ ಮೋಂಟುಗೋಳಿ, ಅಬ್ದುಲ್ ಮಜೀದ್ ಕೊಡ್ಲಿಪೇಟೆ, ದರ್ಗಾ ಮಾಜಿ ಅಧ್ಯಕ್ಷ ಯು.ಎಸ್. ಹಂಝ, ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಕಾರ್ಯದರ್ಶಿ ಮುಸ್ತಫಾ, ಕೋಶಾಧಿಕಾರಿ ನಾಝೀಮ್ ಮುಕಚೇರಿ ಮತ್ತಿತರರು ಉಪಸ್ಥಿತರಿದ್ದರು.

ದರ್ಗಾ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article