
ಮನೆ ನಿರ್ಮಿಸಲು ಅಡ್ಡಿ: ಆರೋಪ
ಬಂಟ್ವಾಳ: ತಾಲೂಕಿನ ಮಾಣಿ ಗ್ರಾಮದ ಸರ್ವೆ ನಂಬರ್ 95/11 ರಲ್ಲಿ 0.12 ಎಕ್ರೆ ಜಮೀನನ್ನು ಫೆಲಿಕ್ಸ್ ಲಸ್ರಾದೊ ಎಂಬುವರಿಂದ ಕಳೆದ ವರ್ಷ ಮೀನಾಕ್ಷಿ ಮನೋಜ್ ಎಂಬುವರು ಖರೀದಿಸಿದ್ದು, ಈ ಜಮೀನಿನಲ್ಲಿ ಮನೆ ನಿರ್ಮಿಸಲು ಸ್ಥಳೀಯ ಇಬ್ಬರು ಪ್ರಭಾವಿ ವ್ಯಕ್ತಿಗಳು ಅಡ್ಡಿಪಡಿಸುತ್ತಿದ್ದಾರೆ ಎಂದು ಪುತ್ತೂರು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಗಿರಿಧರ ನಾಯ್ಕ ಆರೋಪಿಸಿದ್ದಾರೆ.
ಬಂಟ್ವಾಳ ಪ್ರೆಸ್ಕ್ಲಬ್ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ ತಂತಿ ಬೇಲಿ ನಾಶ ಮಾಡಿದ್ದಲ್ಲದೆ ಮನೆಯ ಸಿಮೆಂಟ್ ಶೀಟು ಹಾನಿಗೊಳಿಸಿದ್ದು, ದೈವ-ದೇವರ ಕಲ್ಲು ಕಿತ್ತು ಎಸೆದಿದ್ದಾರೆ ಎಂದು ದೂರಿದರು.
ಪ.ಜಾ.ಪಂ.ಕ್ಕೆ ಸೇರಿರುವ ಮನೋಜ್ ಮತ್ತು ಮೀನಾಕ್ಷಿ ದಂಪತಿ 12 ಸೆಂಟ್ಸ್ ಜಮೀನು ಖರೀದಿಸಿ, ಇದರಲ್ಲಿ ಅವರು ಮನೆ ನಿರ್ಮಾಣಕ್ಕೆ ಮುಂದಾದಾಗ ಪ್ರಭಾವಿ ವ್ಯಕ್ತಿಗಳಿಬ್ಬರು ಅಡ್ಡಿಪಡಿಸುತ್ತಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದರೂ ಸೂಕ್ತ ಸ್ಪಂದನ ದೊರೆತಿಲ್ಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ಸಲ್ಲಿಸಲಾಗಿದ್ದು, ಒಂದು ತಿಂಗಳ ಒಳಗಾಗಿ ನಮಗೆ ನ್ಯಾಯ ಸಿಗದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಪ್ರಮೋದ್ ತಿಂಗಳಾಡಿ, ಕೃಷ್ಣಪ್ಪ ನಾಯ್ಕ್, ಸಂತ್ರಸ್ಥೆ ಮೀನಾಕ್ಷಿ ಉಪಸ್ಥಿತರಿದ್ದರು.