
ಮಾಡನ್ನೂರು ದರ್ಗಾ ಶರೀಫಿನಲ್ಲಿ ದೇಶದ ಸೈನಿಕರಿಗಾಗಿ ವಿಶೇಷ ಪ್ರಾರ್ಥನೆ
Friday, May 9, 2025
ಕಾವು ಪುತ್ತೂರು: ಇಲ್ಲಿನ ಮಾಡನ್ನೂರು ಮಸೀದಿ ಹಾಗೂ ಶಹದಾಗಳ ದರ್ಗಾ ಶರೀಫ್ನಲ್ಲಿ ದೇಶಕ್ಕಾಗಿ ಜೀವದ ಹಂಗು ತೊರೆದು ಹೋರಾಡುತ್ತಿರುವ ಸೈನಿಕರ ಕ್ಷೇಮಕ್ಕಾಗಿ ವಿಶೇಷ ಪ್ರಾರ್ಥನೆ ನಡೆಸಲಾಯಿತು.
ಪ್ರಾರ್ಥನೆಯ ನೇತೃತ್ವ ನೀಡಿ ಮಾತನಾಡಿದ ಸ್ಥಳೀಯ ಇಮಾಂ ಎಸ್.ಬಿ. ದಾರಿಮಿಯವರು ದೇಶ ಸುರಕ್ಷತೆಯಲ್ಲಿದ್ದರೆ ಮಾತ್ರ ನಮಗೆ ಭವಿಷ್ಯ ಇರುವುದು. ದೇಶ ದುರ್ಬಲಗೊಂಡರೆ ಅದರ ಪರಿಣಾಮವನ್ನು ನಾವೇ ಎದುರಿಸ ಬೇಕಾಗುತ್ತದೆ. ಒಂದು ವೇಳೆ ಪವಿತ್ರ ಮಕ್ಕಾ ಮದೀನ ಇರುವ ಸೌದಿ ದೇಶ ಅನ್ಯಾಯವಾಗಿ ನಮ್ಮ ದೇಶದ ವಿರುದ್ದ ನಿಂತರೆ ಅವರ ವಿರುದ್ಧ ನಾವು ಹೋರಾಡ ಬೇಕೆಂದು ಉಲಮಾಗಳು ನಮಗೆ ಕಲಿಸಿದ್ದಾರೆ. ಉಗ್ರವಾದಿಗಳ ಕೃತ್ಯದಿಂದಾಗಿ ಇವತ್ತು ಯುದ್ಧದ ಪರಿಸ್ಥಿತಿ ನಿರ್ಮಾಣ ಆಗಿದೆ. ಭಾರತೀಯರ ಮಧ್ಯೆ ಧರ್ಮದ ಹೆಸರಲ್ಲಿ ದಂಗೆ ಎಬ್ಬಿಸಬೇಕೆಂಬ ಭಯೋತ್ಪಾದಕರ ದುರುದ್ದೇಶನ್ನು ಭಾರತದ ಹಿಂದೂ ಮುಸ್ಲಿಮರು ಒಟ್ಟು ಸೇರಿ ವಿಫಲ ಗೊಳಿಸಿದ್ದಾರೆ. ದೇಶ ಪ್ರೇಮವು ಧರ್ಮಾದ ಭಾಗವಾಗಿದೆ ಎಂದು ಇಸ್ಲಾಂ ಧರ್ಮ ಕಲಿಸಿ ಕೊಟ್ಟಿದೆ ಎಂದು ಹೇಳಿದರು.
ಮಸೀದಿ ಅಧ್ಯಕ್ಷ ಬುಶ್ರ ಅಬ್ದಲ್ ಅಝೀಝ್, ಕಾರ್ಯದರ್ಶಿ ಬಿ.ಎಂ. ಅಬ್ದುಲ್ಲ, ಕೋಶಧಿಕಾರಿ ಯೂಸುಪ್ ಹಾಜಿ ಅರಳಿಯಡಿ ಸೇರಿದಂತೆ ಸಮಿತಿ ಪಧಾದಿಕಾರಿಗಳು ಊರ ಜಮಾತರು ಭಾಗವಹಿಸಿದರು.