ಪ್ರಾಕೃತಿಕ ವಿಕೋಪಕ್ಕೆ ಮೊದಲ ಬಲಿ!-ಕರಾವಳಿಗೆ ಮತ್ತೆರಡು ದಿನ ರೆಡ್‌ಅಲರ್ಟ್: ಮೇ 30ರ ವರೆಗೂ ಭಾರೀ ಮಳೆಯ ಮುನ್ಸೂಚನೆ

ಪ್ರಾಕೃತಿಕ ವಿಕೋಪಕ್ಕೆ ಮೊದಲ ಬಲಿ!-ಕರಾವಳಿಗೆ ಮತ್ತೆರಡು ದಿನ ರೆಡ್‌ಅಲರ್ಟ್: ಮೇ 30ರ ವರೆಗೂ ಭಾರೀ ಮಳೆಯ ಮುನ್ಸೂಚನೆ

ಮಂಗಳೂರು: ನಿಗದಿತ ಸಮಯಕ್ಕೀಮತ ಮುಂಚಿತವಾಗಿ ಕರಾವಳಿಗೆ ಆಗಮಿಸಿದ ಮುಂಗಾರು ಮಳೆಯು ವಿಕೋಪಕ್ಕೆ ತಿರುಗಿದ್ದು, ಪ್ರಾಕೃತಿಕ ವಿಕೋಪಕ್ಕೆ ಮೊದಲ ಬಲಿಯಾಗಿದೆ. ಮೂಡುಬಿದಿರೆ ತಾಲೂಕಿನ ಇರುವೈಲು ಸಮೀಪದ ಹೊಸ್ಮಾರ ಪದವು ಎಂಬಲ್ಲಿ ಲಿಲ್ಲಿ ಡಿಸೋಜ (64) ಎಂಬ ಮಹಿಳೆ ವಿದ್ಯುತ್ ತಂತಿ ತಗುಲಿ ಸಾವಿಗೀಡಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಹಲವಡೆ ವಿದ್ಯುತ್ ಕಂಬಗಳು ದಾರಶಾಯಿಯಾಗಿದೆ. ಅಲ್ಲದೆ ವಿವಿಧೆಡೆ ಮಳೆಯಿಂದಾಗಿ ಮನೆಗಳಿಗೆ ಹಾನಿಯಾಗಿದೆ. ಬುಧವಾರ ಬೆಳಗ್ಗಿನಿಂದಲೇ ಗಾಳಿಯೊಂದಿಗೆ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಿತ್ತು. ಅದರ ನಂತರ ಸ್ವಲ್ಪ ಸಮಯ ಮಳೆ ಬಿಟ್ಟಿತಾದರೂ ನಂತರ ಎಡೆಬಿಡದೆ ಸುರಿಯುತ್ತಲೇ ಇತ್ತು. ನಿರಂತರ ಮಳೆಯಿಂದಾಗಿ ಮುತ್ತೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುಲವೂರು ಗ್ರಾಮದ ಬೊಳಿಯ ಸೈಟ್ ಎಂಬಲ್ಲಿ ಸಂಜೀವ ಎಂಬವರ ಮನೆ ಮಂಗಳವಾರ ರಾತ್ರಿ ಕುಸಿದಿದೆ. ಮನೆಯವರು ಸಂಬಂಧಿಕರ ಮನೆಗೆ ತೆರಳಿದ್ದರಿಂದ ಸಂಭಾವ್ಯ ಭಾರೀ ಅನಾಹುತ ತಪ್ಪಿದೆ.

 ಹಲವಡೆ ಹಾನಿ

ಮಂಗಳೂರು ನಗರದಲ್ಲಿ ಬುಧವಾರವೂ ಕೆಲವೆಡೆ ಕೃತಕ ಪ್ರವಾಹ ಮುಂದುವರಿದಿದೆ. ಚರಂಡಿ, ರಾಜಕಾಲುವೆಗಳ ನಿರ್ವಹಣೆ ಅರೆಬರೆ ಮಾಡಿದ್ದರಿಂದ ನಗರದ ಪಂಪ್‌ವೆಲ್, ಪಡೀಲ್, ಬಿಜೈ ಕೆಎಸ್‌ಆರ್‌ಟಿಸಿ, ಕೊಟ್ಟಾರ, ಮಾಲೆಮಾರ್, ಕೂಳೂರು ಮುಂತಾದೆಡೆ ನೀರು ನಿಂತು ಜನತೆ ಸಮಸ್ಯೆ ಎದುರಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ಒಟ್ಟು 11 ಮನೆಗಳು ಪೂರ್ಣ ಹಾನಿಯಾಗಿವೆ. 225 ಮನೆಗಳು ಭಾಗಶಃ ಹಾನಿಯಾಗಿವೆ. ವಿದ್ಯುತ್ ಸರಬರಾಜು ಕಂಬಗಳು 2380, ವಿದ್ಯುತ್ ಸರಬರಾಜು ಪರಿವರ್ತಕಗಳು 38, ವಿದ್ಯುತ್ ಸರಬರಾಜು ತಂತಿಗಳು 150.30 ಕಿ.ಮೀ ಹಾನಿಯಾಗಿವೆ. ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ನಿರಂತರ ಮಳೆಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳ ಸ್ನಾನಘಟ್ಟ ಮುಳುಗಡೆಯಾಗಿದ್ದವು.

 ದ.ಕ ಜಿಲ್ಲೆಯ ಮಳೆ ವಿವರ:

ಕೊಡಗಿನ ರಸ್ತೆಗಳು ಶಿಥಿಲವಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅಧಿಕ ತೂಕದ ಘನವಾಹನಗಳ ಸಂಚಾರ ನಿಷೇಧಿದ ಮುಂದುವರಿದಿದೆ. ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8ರಿಂದ ಬುಧವಾರ ಬೆಳಗ್ಗೆ 8ರವರೆಗೆ ಸರಾಸರಿ 52.4 ಮಿ.ಮೀ. ಮಳೆ ದಾಖಲಾಗಿದೆ. ಬೆಳ್ತಂಗಡಿಯಲ್ಲಿ 60.6 ಮಿ.ಮೀ, ಬಂಟ್ವಾಳ 43.2 ಮಿ.ಮೀ., ಮಂಗಳೂರು 27.8 ಮಿ.ಮೀ., ಪುತ್ತೂರು 48 ಮಿ.ಮೀ., ಸುಳ್ಯ 46.6 ಮಿ.ಮೀ., ಮೂಡುಬಿದಿರೆ 75.1 ಮಿ.ಮೀ., ಕಡಬ 62.9 ಮಿ.ಮೀ., ಮೂಲ್ಕಿ 42.9 ಮಿ.ಮೀ, ಉಳ್ಳಾಲದಲ್ಲಿ 29.5 ಮಿ.ಮೀ. ಮಳೆಯಾಗಿದೆ.

 

 ಕರಾವಳಿಗೆ ಮತ್ತೆರಡು ದಿನ ರೆಡ್‌ಅಲರ್ಟ್

 ಪಶ್ಚಿಮ ಘಟ್ಟ ಮತ್ತು ಕರಾವಳಿಯ ನದಿಗಳು ತುಂಬಿ ಹರಿಯತೊಡಗಿದ್ದು, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರ ನದಿ, ನೇತ್ರಾವತಿ ನದಿಗಳು ತುಂಬಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಮೇ 30ರ ವರೆಗೂ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ಸೂಚನೆ ನೀಡಿದೆ. ಈ ಕಾರಣದಿಂದ ವಿಕೋಪ ನಿರ್ವಹಣೆ ಸಲುವಾಗಿ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್ ಎಫ್ ತಂಡವನ್ನು  ಬೆಳ್ತಂಗಡಿ, ಪುತ್ತೂರು, ಸುಳ್ಯ, ಮಂಗಳೂರು ಮತ್ತು ಸುಬ್ರಹ್ಮಣ್ಯ ಭಾಗದಲ್ಲಿ ಸರ್ವ ಸನ್ನದ್ದವಾಗಿರುವಂತೆ ಜಿಲ್ಲಾಡಳಿತ ಸೂಚಿಸಿದೆ.

 

 ಗಾಳಿಯ ಪ್ರಮಾಣ ಹೆಚ್ಚಳ

 ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಬುಧವಾರ ಗರಿಷ್ಠ 35.2 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಗುರುವಾರ ವೇಳೆ ತುಸು ಏರಿಕೆಯಾಗುವ ಸಾಧ್ಯತೆ ಇದೆ. ಅರಬ್ಬಿ ಸಮುದ್ರದ ವಾಯುಭಾರ ಕುಸಿತ ಪರಿಣಾಮ ಪರಿಣಾಮದಿಂದ ಮುಂಗಾರು ಚುರುಕಾಗಿದ್ದು, ಮುಂದಿನ 3 ದಿನಗಳವರೆಗೂ ಮುಂಗಾರು ಮಳೆ ರಾಜ್ಯದಲ್ಲಿ ಉತ್ತಮಾವಾಗಿರಲಿದೆ. ಜೂನ್ ಮೊದಲ ವಾರದಲ್ಲಿ ರಾಜ್ಯದಲ್ಲಿ ಮುಂಗಾರು ಮಳೆಯ ತೀವ್ರತೆ ಸ್ವಲ್ಪ ಕಡಿಮೆಯಾಗುವ ಲಕ್ಷಣಗಳಿವೆ ಎಂದು ಐಎಂಡಿ ಮಾಹಿತಿ ನೀಡಿದೆ.ಅರಬ್ಬಿ ಸಮುದ್ರ ಸುತ್ತಮುತ್ತ ಗಾಳಿಯ ಪ್ರಮಾಣ ಹೆಚ್ಚಳವಾಗಿರುವುದರಿಂದ ಕರಾವಳಿ ತೀರಪ್ರದೇಶದಲ್ಲಿ ಎಚ್ಚರಿಕೆ ಇರುವಂತೆಯೂ, ಮೀನುಗಾರಿಕೆ ನಡೆಸದಂತೆಯೂ ಜಿಲ್ಲಾಡಳಿತದಿಂದ ಸೂಚನೆ ನೀಡಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article