
‘ಕಾಂಗ್ರೆಸ್ ಪರಿಹಾರ ಹಣದಿಂದಲೇ ಸುಹಾಸ್ ಶೆಟ್ಟಿ ಹತ್ಯೆಯಾಗಿದೆ’: ರಾಜೇಶ್ ಪವಿತ್ರನ್ ಆಗ್ರಹ
ಮಂಗಳೂರು: ಸುಹಾಸ್ ಶೆಟ್ಟಿ ಒಬ್ಬ ಹಿಂದು ಸಂಘಟನೆ ಕಾರ್ಯಕರ್ತ. ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರು ಆತನನ್ನು ಕೇವಲ ರೌಡಿಶೀಟರ್ ಎನ್ನುವ ಮೂಲಕ ಕೀಳು ಮಟ್ಟಕ್ಕಿಳಿಸುತ್ತಿದ್ದಾರೆ. ಹಿಂದುತ್ವಕ್ಕಾಗಿ ಕೆಲಸ ಮಾಡಿದ್ದಕ್ಕೆ ಪೊಲೀಸರು ರೌಡಿ ಪಟ್ಟ ನೀಡಿದ್ದರು. ಅಂತಹ ವ್ಯಕ್ತಿಯನ್ನು ಕಾಂಗ್ರೆಸ್ ಸರಕಾರ ನೀಡಿದ್ದ ಪರಿಹಾರದ ಹಣದಿಂದಲೇ ಫಾಜಿಲ್ ಕುಟುಂಬ ಕೊಲೆ ಮಾಡಿಸಿದೆ. ಸರಕಾರ ಕೂಡಲೇ ಈ ಹಣವನ್ನು ವಾಪಸ್ ಪಡೆಯಬೇಕು ಎಂದು ಹಿಂದು ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಸುಹಾಸ್ ಶೆಟ್ಟಿ ಕುಟುಂಬ ಹಿಂದಿನಿಂದಲೂ ಕಾಂಗ್ರೆಸ್ ಪರವಾಗಿದ್ದವರು. ಆದರೆ ಕಾಂಗ್ರೆಸ್ ನಾಯಕರು ಆತ ಹಿಂದುತ್ವವಾದಿ ಎನ್ನುವ ಕಾರಣಕ್ಕೆ ಹತ್ತಿರ ಹೋಗಿಲ್ಲ. ಕಾಂಗ್ರೆಸಿಗರಿಗೆ ಕೇವಲ ಮುಸ್ಲಿಮರು ಮಾತ್ರ ಬೇಕು, ಹಿಂದುಗಳು ಬೇಕಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಹಿಂದು, ಮುಸ್ಲಿಮರು, ಕ್ರೈಸ್ತರು ಎಲ್ಲರೂ ಮತ ಹಾಕಿದ್ದಾರೆ. ಜಾಲತಾಣದಲ್ಲಿ ಕಮೆಂಟ್ ಮಾಡಿದ ಹಿಂದುಗಳನ್ನೆಲ್ಲ ಹುಡುಕಿ ಅರೆಸ್ಟ್ ಮಾಡುತ್ತಿದ್ದಾರೆ. ಮುಸ್ಲಿಮರನ್ನು ಯಾಕೆ ಬಂಧನ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಕುಡುಪುವಿನಲ್ಲಿ ನಡೆದ ಹತ್ಯೆ ಪ್ರಕರಣದಲ್ಲಿ ಯಾವುದೇ ಸಾಕ್ಷಿ ಇಲ್ಲದಿದ್ದರೂ ಪೊಲೀಸರು 22 ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ. ಸುಹಾಸ್ ಕೊಲೆ ಕೃತ್ಯದಲ್ಲಿ ಅನೇಕ ಸಾಕ್ಷಿಗಳಿದ್ದರೂ ಎಂಟು ಮಂದಿಯನ್ನು ಮಾತ್ರ ಬಂಧಿಸಿದ್ದು ಯಾಕೆ. ಹಣಕಾಸು ನೆರವು ನೀಡಿದವರು, ಸಪೋರ್ಟ್ ಮಾಡಿದವರು ಹೀಗೆ ಎಲ್ಲರನ್ನೂ ಬಂಧನ ಮಾಡಬೇಕಿತ್ತಲ್ವಾ.. ಕಾಂಗ್ರೆಸ್ ನಾಯಕರು ಹೇಳಿದಂತೆ ಪೊಲೀಸರು ಮಾಡುತ್ತಿದ್ದಾರೆಯೇ ಎಂದು ಕೇಳಿದ ಅವರು, ಬಿಜೆಪಿಯವರು ಸುಹಾಸ್ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಪಕ್ಷದಿಂದ ಜುಜುಬಿ 25 ಲಕ್ಷ ಕೊಟ್ಟು ರಾಜಕೀಯ ಲಾಭಕ್ಕೆ ನೋಡುತ್ತಿದ್ದಾರೆ. ಇವರ ನಾಯಕರು ಕೋಟಿಗಟ್ಟಲೆ ಮಾಡಿಲ್ವಾ.. ಎಂದು ಪ್ರಶ್ನಿಸಿದರು.
ಸುಹಾಸ್ ಕೊಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಕೈವಾಡ ಇದೆ, ಬಿಜೆಪಿಗೆ ಹಿಂದುತ್ವ ಕೇವಲ ರಾಜಕೀಯಕ್ಕೆ ಮಾತ್ರ. ಎರಡೂ ಪಕ್ಷಗಳು ರಾಜಕೀಯ ಲಾಭಕ್ಕೆ ನೋಡುತ್ತಿದ್ದಾರೆ ಎಂದು ಹೇಳಿದರು
ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ಡಾ. ಎಲ್. ಕೆ. ಸುವರ್ಣ, ಪದಾಧಿಕಾರಿಗಳಾದ ಲೋಕೇಶ್ ಉಳ್ಳಾಲ, ಗುರುರಾಜ್, ಕಿರಣ್, ಸಂದೀಪ್ ಉಪಸ್ಥಿತರಿದ್ದರು.