
ಕೋಮುವಾದ ನಿಗ್ರಹಕ್ಕೆ ಕೋಮು ಹಿಂಸೆ ನಿಗ್ರಹ ಕಾರ್ಯಪಡೆ-ನಕ್ಸಲ್ ನಿಗ್ರಹ ಪಡೆ ಮಾದರಿ: ಡಾ. ಜಿ. ಪರಮೇಶ್ವರ್
ಮಂಗಳೂರು: ಯಾವುದೇ ಕಾರಣಕ್ಕೂ ಕರಾವಳಿ ಜಿಲ್ಲೆಯಲ್ಲಿ ಶಾಂತಿ ಹಾಳು ಮಾಡುವ ದುಷ್ಟ ಶಕ್ತಿಗೆ ಅವಕಾಶ ನೀಡುವುದಿಲ್ಲ. ಇನ್ನು ಮುಂದೆ ಈ ರೀತಿಯ ಘಟನೆ ನಡೆಯಬಾರದು. ಆ ನಿಟ್ಟಿನಲ್ಲಿ ಹೊಸದಾಗಿ ಆಂಟಿ ಕಮ್ಯೂನಲ್ ಫೋರ್ಸ್ (ಕೋಮು ಹಿಂಸೆ ನಿಗ್ರಹ ಕಾರ್ಯಪಡೆ) ರಚಿಸಲಾಗುವುದು. ಆಂಟಿ ನಕ್ಸಲ್ ಫೋರ್ಸ್ (ಎಎನ್ಎಫ್) ಮಾದರಿಯಲ್ಲಿ ಈ ಕಾರ್ಯಪಡೆ ದಕ್ಷಿಣ ಕನ್ನಡ ಮತ್ತು ಉಡುಪಿಗೆ ಸೀಮಿತವಾಗಿ ಕಾರ್ಯನಿರ್ವಹಿಸಲಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆನ್ನು ಬೆನ್ನಿಗೆ ನಡೆದ ಎರಡು ಕೊಲೆ ಪ್ರಕರಣ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಜೊತೆಗೆ ಕಾನೂನು ಸುವ್ಯವಸ್ಥೆ ಬಗ್ಗೆ ಸಭೆ ನಡೆಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದೆ.
ದ.ಕ ಮತ್ತು ಉಡುಪಿ ಭಾಗದಲ್ಲಿ ಮತ್ತೆ ಕೋಮು ವೈಷಮ್ಯ ಮರುಕಳಿಸಿದೆ ಎನ್ನುವ ಭಾವನೆ ಬಂದಿರಬಹುದು. ಆದರೆ ಜನ ಸಮುದಾಯ ಇಂತಹ ಘಟನೆಯನ್ನು ಇಷ್ಟ ಪಡುವುದಿಲ್ಲ. ಪೊಲೀಸ್ ಇಲಾಖೆ ಹಾಗೂ ಸರ್ಕಾರ ಶಾಂತಿಯಿಂದ ಇರಬೇಕು ಅಂತ ಬಯಸುತ್ತಾರೆ. ಇಲ್ಲಿಯೇ ಕಲಿಯಬೇಕು, ಉದ್ಯೋಗ ಸಿಗಬೇಕು ಅಂತ ಎಲ್ಲ ರೀತಿಯ ಕ್ರಮ ಕೈಗೊಂಡಿದ್ದೇವೆ.
ಈ ಘಟನೆ ಹಾಗೂ ನಾಲ್ಕು ದಿನ ಹಿಂದಿನ ಅಶ್ರಫ್ ಕೊಲೆ ಮತ್ತೆ ಕೋಮು ಸೌಹಾರ್ದಕ್ಕೆ ಸವಾಲಾಗಿದೆ ನಿಂತಿದೆ. ಸುಹಾಸ್ ಪ್ರಕರಣದಲ್ಲಿ ಎಂಟು ಮಂದಿಯನ್ನು ಬಂಧಿಸಲಾಗಿದೆ. ಅಶ್ರಫ್ ಪ್ರಕರಣದಲ್ಲಿ 21 ಮಂದಿಯನ್ನು ಬಂಧಿಸಲಾಗಿದೆ. ನಮ್ಮ ಉದ್ದೇಶ ಈ ಭಾಗ ಶಾಂತಿಯಿಂದ ಇರಬೇಕು ಎನ್ನುವುದು. ಹಿಂದೆ ನಮ್ಮ ಪಕ್ಷದಿಂದ ಶಾಂತಿ ಸೌಹಾರ್ದ ಪಾದಯಾತ್ರೆ ಮಾಡಿದ್ದೆವು. ಈಗ ಮತ್ತೆ ಈ ರೀತಿಯ ಘಟನೆ ನಡೆದಿದೆ. ಇದರ ಹಿಂದೆ ಅನೇಕ ಶಕ್ತಿಗಳು ಇವೆ, ಅವುಗಳ ಹುಟ್ಟಡಗಿಸುವ ಕೆಲಸ ಮಾಡುತ್ತೇವೆ.
ಯಾರು ಕಮ್ಯೂನಲ್ ಅಕ್ಟಿವಿಟಿ ಮಾಡ್ತಾರೆ, ಅವರಿಗೆ ಸಹಾಯ ಮಾಡ್ತಾರೆ ಎಂಬುದನ್ನು ಪತ್ತೆಹಚ್ಚಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಎರಡು ಜಿಲ್ಲೆಯಲ್ಲಿ ಶಾಂತಿ ತರುವ ಉದ್ದೇಶದಿಂದ ಈ ಫೋರ್ಸ್ ಮಾಡುತ್ತೇವೆ. ಇದಕ್ಕಾಗಿ ನಕ್ಸಲ್ ವಿರೋಧಿ ಪಡೆಯಲ್ಲಿದ್ದ ನುರಿತ ಅಧಿಕಾರಿಗಳನ್ನು ಬಳಸಿಕೊಳ್ಳುತ್ತೇವೆ. ಯಾರು ಪ್ರಚೋದನಕಾರಿ ಭಾಷಣ ಮಾಡ್ತಾರೋ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಆಂಟಿ ಕಮ್ಯೂನಲ್ ಪೋರ್ಸ್ ಕರಾವಳಿಯ ಎರಡು ಜಿಲ್ಲೆಗೆ ಮಾತ್ರ ಇರಲಿದೆ. ಪ್ರತೇಕವಾಗಿ ಅವರಿಗೆ ಅಧಿಕಾರ ನೀಡುತ್ತೇವೆ. ಅದರ ರೂಪುರೇಷೆಯನ್ನು ಶೀಘ್ರದಲ್ಲೇ ಮಾಡುತ್ತೇವೆ. ಈ ವಿಭಾಗದಲ್ಲಿ ಅಧಿಕಾರಿಗಳು ಬೇರೆ ಬೇರೆ ಕಡೆಯಿಂದ ಬರುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರೌಡಿ ಶೀಟರ್ ನನ್ನು ಹೀರೋ ಮಾಡಿದ್ದಾರೆ..
ಸುಹಾಸ್ ಶೆಟ್ಟಿ ಪ್ರಕರಣದಲ್ಲಿ ಒಂದು ಪಕ್ಷಕ್ಕೆ ಸೇರಿದವರು ರೌಡಿ ಶೀಟರ್ ಒಬ್ಬನನ್ನು ಹೀರೋ ಮಾಡಿದ್ದಾರೆ. ಯಾವುದೋ ಕಾರಣಕ್ಕಾಗಿ ಅವರೆಲ್ಲಾ ಬಂದು ಹೋಗಿದ್ದಾರೆ. ಆದರೆ ಸರ್ಕಾರ ಅಥವಾ ನಾವು ಅ ರೀತಿ ಮಾಡಿಲ್ಲ. ಕೊಲೆಯಾದವನ ಹೆಸರಲ್ಲಿ ಎರಡು ಕೊಲೆ ಕೇಸ್ ಸೇರಿ ಐದು ಕೇಸ್ ಇದೆ ಎಂದರು.
ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಪೊಲೀಸ್ ಅಧಿಕಾರಿಗಳು ಜೊತೆಗಿದ್ದರು.