
ಆಪರೇಷನ್ ಸಿಂದೂರ್: ಸರ್ವಪಕ್ಷಗಳ ನಿಯೋಗಕ್ಕೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಆಯ್ಕೆ
ಮಂಗಳೂರು: ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ಮುಖವನ್ನು ವಿಶ್ವವೇದಿಕೆಯಲ್ಲಿ ಬಹಿರಂಗಪಡಿಸಲು ಕೇಂದ್ರ ಸರ್ಕಾರ ಅಂತಿಮಗೊಳಿಸಿದ ಸರ್ವ ಪಕ್ಷಗಳ ನಿಯೋಗಕ್ಕೆ ದಕ್ಷಿಣ ಕನ್ನಡದ ಸಂಸದ ಕ್ಯಾ. ಬ್ರಿಜೇಶ್ ಚೌಟ ಆಯ್ಕೆಯಾಗಿದ್ದಾರೆ. ರಾಷ್ಟ್ರಮಟ್ಟದ ಈ ನಿಯೋಗಕ್ಕೆ ಕ್ಯಾ. ಚೌಟ ಅವರು ನೇಮಕವಾಗಿರುವುದನ್ನು ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ.
ಕ್ಯಾ. ಚೌಟ ಒಳಗೊಂಡಂತೆ ವಿಶ್ವ ವೇದಿಕೆಯ ಈ ನಿಯೋಗದಲ್ಲಿ ಕರ್ನಾಟಕದಿಂದ ಇಬ್ಬರು ಸಂಸದರು ಆಯ್ಕೆ ಆಗಿದ್ದಾರೆ. ಅದರಲ್ಲೂ ಕರಾವಳಿ ಕರ್ನಾಟಕದಿಂದ ಕ್ಯಾ. ಚೌಟ ಆಯ್ಕೆಯಾಗಿದ್ದಾರೆ. 59 ಸದಸ್ಯರ ತಂಡವನ್ನು ಒಟ್ಟು ಏಳು ನಿಯೋಗಗಳನ್ನಾಗಿ ಮಾಡಿ ವಿವಿಧ ದೇಶಗಳಿಗೆ ಕಳುಹಿಸಿಕೊಡಲಾಗುತ್ತಿದ್ದು, ಈ ಪೈಕಿ ಡಿಎಂಕೆಯ ಕನಿಮೊಳಿ ನೇತೃತ್ವದ ತಂಡದಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಸೇರಿ ಐವರು ಸಂಸದರು ಮೂವರು ಅಧಿಕಾರಿಗಳು ಇರಲಿದ್ದು, ಇವರು ಗ್ರೀಸ್, ರಷ್ಯಾ, ಸ್ಪೇನ್, ಸ್ಲೊವೇನಿಯ್ ಹಾಗೂ ಲಾಟ್ವಿಯ ದೇಶಗಳಿಗೆ ಭೇಟಿ ನೀಡಲಿದ್ದಾರೆ.
ಕ್ಯಾ. ಚೌಟ ಆಯ್ಕೆಯ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು, ‘ಭಯೋತ್ಪಾನೆ ವಿರುದ್ದ ಹಾಗೂ ಪಾಕಿಸ್ತಾನ ಮೇಲಿನ ಅಪರೇಷನ್ ಸಿಂದೂರ್ ಬಗ್ಗೆ ಜಗತ್ತಿಗೆ ವಾಸ್ತವ ವಿಚಾರವನ್ನು ತಿಳಿಸುವ ಸರ್ವ ಪಕ್ಷದ ನಿಯೋಗದಲ್ಲಿ ಕ್ಯಾ. ಚೌಟ ಸ್ಥಾನ ಪಡೆದಿರುವುದು ದಕ್ಷಿಣ ಕನ್ನಡ ಜಿಲ್ಲೆಗೆ ಅತ್ಯಂತ ಖುಷಿಯ ಹಾಗೂ ಹೆಮ್ಮೆಯ ವಿಚಾರ. ಸೇನೆಯಲ್ಲಿದ್ದು ದೇಶ ಸೇವೆ ಮಾಡಿರುವ ಕ್ಯಾ. ಚೌಟ ಅವರ ಆಯ್ಕೆ ಅತ್ಯಂತ ಔಚಿತ್ಯಪೂರ್ಣವಾಗಿದೆ. ಏಕೆಂದರೆ ನಮ್ಮ ದೇಶದ ಸೇನಾಪಡೆಯು ಪಾಕಿಸ್ತಾನದಲ್ಲಿ ಅಡಗಿದ್ದ ಉಗ್ರರನ್ನು ಸದೆಬಡಿಯುವ ಮೂಲಕ ಭಾರತದ ಶಕ್ತಿಯನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟಿದೆ ಹಾಗೂ ನವ ಭಾರತವು ಭಿನ್ನವಾಗಿದ್ದು ಭಯೋತ್ಪಾದನೆಯ ವಿರುದ್ಧ ಶೂನ್ಯ-ಸಹಿಷ್ಣು ಹೊಂದಿದ್ದು, ಬೆದರಿಕೆಗಳಿಗೆ ಬಗ್ಗದೆ ಕಠಿಣ ನಿಲುವನ್ನು ಹೊಂದಿದೆ. ಇದೀಗ ಅಪರೇಷನ್ ಸಿಂದೂರ್ ಕಾರ್ಯಾಚರಣೆ ಹಾಗೂ ಪಾಕಿಸ್ತಾನ ಪ್ರಯೋಜಿತ ಭಯೋತ್ಪಾನೆಯ ಮುಖವಾಡ ಕಳಚಲು ಸರ್ವಪಕ್ಷಗಳ ನಿಯೋಗವು ಹಲವು ದೇಶಗಳಿಗೆ ತೆರಳುತ್ತಿದೆ. ಈ ಹಿನ್ನಲೆಯಲ್ಲಿ ನಮ್ಮ ಸೈನಿಕ ಶಕ್ತಿ ಸಮರ್ಥ್ಯವನ್ನು ಜಗತ್ತಿನ ಮುಂದೆ ಸಾರುವುದಕ್ಕೆ ಅತ್ಯಂತ ಸಮರ್ಥ ವ್ಯಕ್ತಿ’ ಎಂದು ಶ್ಲಾಘಿಸಿದ್ದಾರೆ.