
ವಿಪಕ್ಷ ನಾಯಕರ ಮೇಲೆ ಹಲ್ಲೆಗೆ ಯತ್ನ ಬಿ.ಜೆ.ಪಿ. ಖಂಡನೆ
ಮಂಗಳೂರು: ರಾಜ್ಯದಲ್ಲಿ ಅರಾಜಕತೆ ಮಿತಿ ಮೀರುತ್ತಿದೆ. ಕ್ರಿಮಿನಲ್ ಗಳ ಅಟ್ಟಹಾಸ ಅತಿಯಾಗುತ್ತಿದೆ. ಕಾಂಗ್ರೆಸಿಗರ ಪುಂಡಾಟಿಕೆ ರಾಜರೋಷವಾಗಿ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಭಂಡತನದ ಪರಿಣಾಮ ಕಾಂಗ್ರೆಸ್ ಕಾರ್ಯಕರ್ತರ ಗೂಂಡತನಕ್ಕೆ ಕಾರಣವಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಪಕ್ಷವು ಆಡಳಿತ ನಡೆಸುವ ಸರ್ಕಾರದ ಹುಳುಕುಗಳನ್ನು ಜನರ ಮುಂದಿಡುವುದು, ವಿರೋಧಿಸುವುದು ಸಂವಿಧಾನ ನೀಡಿರುವ ಹಕ್ಕು. ಆದರೆ ರಾಜ್ಯದಲ್ಲಿ ಆಡಳಿತ ನಡೆಸುವ ಕಾಂಗ್ರೆಸ್ ಗೆ ಪ್ರತಿಪಕ್ಷದ ಆರೋಪಗಳನ್ನು ಅರಗಿಸಿಕೊಳ್ಳಲು ಆಗದೆ ಗೂಂಡಾ ಪ್ರವೃತ್ತಿ ಮೂಲಕ ದಮನಿಸುವ ತಂತ್ರವನ್ನು ಬಳಸುತ್ತಿದೆ.
ವಿಧಾನ ಪರಿಷತ್ ನ ಪ್ರತಿಪಕ್ಷದ ನಾಯಕರಾದ ಛಲವಾದಿ ನಾರಾಯಣ ಸ್ವಾಮಿ ಯವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ದಾಳಿ ನಡೆಸಲು ಯತ್ನ ಇದಕ್ಕೆ ನಿದರ್ಶನವಾಗಿದೆ. ಪರಿಶಿಷ್ಟ ಜಾತಿಯ ವ್ಯಾಮೋಹದ ನಾಟಕವಾಡುವ ಕಾಂಗ್ರೆಸ್ ಅದೇ ಸಮುದಾಯದ ನಾಯಕನ ಮೇಲೆ ದಬ್ಬಾಳಿಕೆ ನಡೆಸಿರುವುದನ್ನು ವಿರೋಧಿಸುತ್ತಿಲ್ಲ ಬದಲಾಗಿ ತಮ್ಮ ಪಕ್ಷದ ಕಾರ್ಯಕರ್ತರ ಕಿಡಿಗೇಡಿ ಕೃತ್ಯವನ್ನು ಸಮರ್ಥಿಸುತ್ತಿದ್ದಾರೆ. ಇದು ಖಂಡನೀಯ, ಕೃತ್ಯ ಎಸಗಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಬಿ.ಜೆ.ಪಿ. ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಒತ್ತಾಯಿಸಿದ್ದಾರೆ.
ವಿಪಕ್ಷ ನಾಯಕರಿಗೆ ರಕ್ಷಣೆ ನೀಡಲು ವಿಫಲವಾಗಿರುವ ಹೊಣೆಗೇಡಿ ಕಾಂಗ್ರೆಸ್ ಸರ್ಕಾರದಲ್ಲಿ ಜನಸಾಮಾನ್ಯರಿಗೆ ನ್ಯಾಯ ಸಿಗಬಹುದೇ ಎಂದವರು ಪ್ರಕಟನೆ ಮೂಲಕ ಸರ್ಕಾರವನ್ನು ಪ್ರಶ್ನಿಸಿದ್ದಾರೆ.