
ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರ...? ಮೂವರಿಗೆ ಇರಿತ
ಮಂಗಳೂರು: ಬಜ್ಪೆಯಲ್ಲಿ ಹಿಂದು ಕಾರ್ಯಕರ್ತ, ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಬೆನ್ನಿಗೇ ಪ್ರತೀಕಾರದ ಎಂಬಂತೆ ಅಡ್ಯಾರಿನ ಕಣ್ಣೂರು, ಮಂಗಳೂರಿನ ಕೊಂಚಾಡಿ ಹಾಗೂ ತೊಕ್ಕೊಟ್ಟು ಈ ಮೂರು ಕಡೆಗಳಲ್ಲಿ ಶುಕ್ರವಾರ ಮುಸ್ಲಿಂ ಯುವಕರ ಮೇಲೆ ಇರಿತದ ಘಟನೆ ನಡೆದಿದೆ.
ಅಡ್ಯಾರು ಕಣ್ಣೂರಿನಲ್ಲಿ ಇರಿತಕ್ಕೆ ಒಳಗಾದಾತನನ್ನು ನೌಷಾದ್ ಎಂದು ಗುರುತಿಸಲಾಗಿದೆ. ಕೊಂಚಾಡಿಯಲ್ಲಿ ಮಹಮ್ಮದ್ ಲುಕ್ಮಾನ್ ಹಾಗೂ ಉಳ್ಳಾಲದ ತೊಕ್ಕೊಟ್ಟಿನಲ್ಲಿ ಫೈಜಲ್ ಎಂಬಾತನ ಮೇಲೆ ದುಷ್ಕರ್ಮಿಗಳು ಚೂರಿಯಿಂದ ಇರಿದ ಘಟನೆ ನಡೆದಿದೆ.
ನೌಷಾದ್ ಅವರು ತೊಕ್ಕೊಟ್ಟು ಸಮೀಪದ ಕಲ್ಲಾಪು ಮಾರ್ಕೆಟ್ಗೆ ಹೋಗಲು ನಸುಕಿನ 3 ಗಂಟೆಗೆ ಅಡ್ಯಾರ್ ಹೆದ್ದಾರಿಯಲ್ಲಿ ನಿಂತಿದ್ದ ವೇಳೆ ಎರಡು ದ್ವಿಚಕ್ರ ವಾಹನದಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ನೌಷಾದ್ ಬೆನ್ನಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಚೂರಿ ಇರಿತವಾದ ತಕ್ಷಣ ದುಷ್ಕರ್ಮಿಗಳಿಂದ ನೌಷಾದ್ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಬಳಿಕ ಸ್ಥಳೀಯರು ಆಗಮಿಸಿ ನೌಷಾದ್ರನ್ನು ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಬಗ್ಗೆ ಕಂಕನಾಡಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಇನ್ನೊಂದು ಘಟನೆ ತೊಕ್ಕೊಟ್ಟಿನ ಮಾಯಾ ಬಾರ್ ಬಳಿ ಗುರುವಾರ ಮಧ್ಯರಾತ್ರಿ 12.30ರ ಸುಮಾರಿಗೆ ನಡೆದಿದೆ. ಅಳೇಕಲ ನಿವಾಸಿ ಫೈಝಲ್ ಇರಿತಕ್ಕೆ ಒಳಗಾದ ವ್ಯಕ್ತಿ. ಈತ ಮಧ್ಯರಾತ್ರಿ ಒಂಭತ್ತುಕೆರೆಯ ಪತ್ನಿ ಮನೆಯಿಂದ ಕಲ್ಲಾಪುವಿನ ಗ್ಲೋಬಲ್ ಮಾರುಕಟ್ಟೆಗೆ ತನ್ನ ಸ್ಕೂಟರ್ನಲ್ಲಿ ತೆರಳುತ್ತಿದ್ದ ವೇಳೆ ಬೈಕ್ನಲ್ಲಿ ಹಿಂಬಾಲಿಸಿದ ಇಬ್ಬರು ದುಷ್ಕರ್ಮಿಗಳು ತಲ್ವಾರು ಬೀಸಿದ್ದರು. ಮತ್ತೊಂದು ಬೈಕ್ನಲ್ಲಿ ಇಬ್ಬರು ಯುವಕರು ಮಾರಕಾಯುಧಗಳಿಂದ ಬಂದಿದ್ದು, ಬಳಿಕ ನಾಲ್ವರು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಈ ಬಗ್ಗೆ ಸಿಸಿ ಕ್ಯಾಮರಾ ಫುಟೇಜ್ನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಮತ್ತೊಂದು ಘಟನೆಯಲ್ಲಿ ನಗರದ ಕುಂಟಿಕಾನದಲ್ಲಿ ಗ್ರಾಹಕರೊಬ್ಬರಿಗೆ ಮೀನು ಕೊಡಲು ಕಾಯುತ್ತಿದ್ದ ಉಳ್ಳಾಲ ನಿವಾಸಿ ಲುಕ್ಮಾನ್ ಎಂಬ ಮೀನು ವ್ಯಾಪಾರಿಯ ಮೇಲೆ ಕಪ್ಪು ಬಣ್ಣದ ಇನ್ನೋವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಹಲ್ಲೆ ನಡೆಸಿದೆ.
ಲುಕ್ಮಾನ್ರನ್ನು ಬಲವಂತವಾಗಿ ಕೆಳಗೆ ಬೀಳಿಸಿ, ಕಲ್ಲು ಹೊತ್ತು ಹಾಕಿ ಕೊಲೆಗೆ ಯತ್ನಿಸಲಾಗಿದೆ. ಈ ದೃಶ್ಯ ನೋಡಿದ ಹಿಂದು ಮಹಿಳೆಯೊಬ್ಬರು ಬೊಬ್ಬೆ ಹಾಕಿ ಸ್ಥಳಕ್ಕೆ ಧಾವಿಸಿದ್ದರು. ಆಕೆಯ ಸಮಯಪ್ರಜ್ಞೆಯಿಂದ ದುಷ್ಕರ್ಮಿಗಳು ಆತಂತಕ್ಕೆ ಒಳಗಾಗಿ ಸ್ಥಳದಿಂದ ಪರಾರಿಯಾಗಿದ್ದಾರೆ. ಲುಕ್ಮಾನ್ ಪ್ರಣಾಪಾಯದಿಂದ ಪಾರಾಗಿದ್ದು, ಗಾಯಗೊಂಡ ಆತನನ್ನು ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.