
ಎಸ್ಎಸ್ಎಲ್ಸಿ ಮರು ಮೌಲ್ಯಮಾಪನ: ಎಕ್ಸಲೆಂಟ್ ಶಾಲೆಯ ಸಾನಿಧ್ಯ ರಾವ್ ರಾಜ್ಯಕ್ಕೆ ಪ್ರಥಮ
Friday, May 23, 2025
ಮೂಡುಬಿದಿರೆ: ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಮೂಡುಬಿದಿರೆ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಾನಿಧ್ಯ ರಾವ್ 625ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾಳೆ.
ಹಿಂದೆ 624 ಅಂಕಗಳನ್ನು ಪಡೆದಿದ್ದು, ಮರು ಮೌಲ್ಯಮಾಪನದಲ್ಲಿ ಈಕೆ ಹಿಂದಿ ವಿಷಯದಲ್ಲಿ ಪರಿಷ್ಕೃತ 1 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾಳೆ. ಈಕೆ ನಾರಾವಿಯ ಉದ್ಯಮಿ ವಸಂತ್ ಭಟ್ ಹಾಗೂ ಬಂಟ್ವಾಳ ತಾಲೂಕು ಕೊಲ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸೌಜನ್ಯ ದಂಪತಿಯ ಪುತ್ರಿ.
ಎಕ್ಸಲೆಂಟ್ ವಿದ್ಯಾರ್ಥಿನಿಯಾರಾದ ಸುಧಾಶ್ರೀ ಎಸ್.ಎಂ. ಮರುಮೌಲ್ಯಮಾಪನದಲ್ಲಿ ಪರಿಷ್ಕೃತ ನಾಲ್ಕು ಅಂಕಗಳೊಂದಿಗೆ 619 ಹಾಗೂ ನಿಖಿಲ್ ವಿ. ಗೌಡ ನಾಲ್ಕು ಪರಿಷ್ಕೃತ ಅಂಕಗಳೊಂದಿಗೆ 616 ಅಂಕಗಳನ್ನು ಪಡೆದಿದ್ದಾರೆ.
ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.