
ಢಿಕ್ಕಿ ಹೊಡೆದ ಪರಾರಿಯಾದ ವಾಹನ ವಶ
ಪುತ್ತೂರು: ರಾಷ್ಟ್ರೀಯ ಹೆದ್ದಾರಿಯ ಕುಂಬ್ರ ಸಮೀಪದ ಶೇಖಮಲೆ ಮಸೀದಿ ಬಳಿ ಬುಧವಾರ ಸ್ಕೂಟರ್ಗೆ ಟೆಂಪೋ ಟ್ರಾವೆಲ್ಲರ್ ಢಿಕ್ಕಿ ಹೊಡೆದ ಪರಿಣಾಮ ಅರಿಯಡ್ಕ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಸವಿತಾ ಎಂಬವರು ಗಾಯಗೊಂಡಿದ್ದಾರೆ. ಅಪಘಾತ ಎಸಗಿ ಪರಾರಿಯಾಗಿದ್ದ ವಾಹನವನ್ನು ಕಲ್ಲುಗುಂಡಿಯಲ್ಲಿ ಪತ್ತೆ ಹಚ್ಚಿದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಅಪಘಾತ ಬಳಿಕ ರಸ್ತೆಗೆ ಬಿದ್ದು ಗಾಯಗೊಂಡ ಸವಿತಾ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಕುಂಬ್ರ ಸಿಎ ಬ್ಯಾಂಕ್ ನಿರ್ದೇಶಕ ಪ್ರವೀಣ್ ಮಡ್ಯಂಗಳ ಅವರು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಲ್ಲುಗುಂಡಿಯಲ್ಲಿ ಪತ್ತೆ:
ಘಟನೆ ನಡೆದ ಸಂದರ್ಭದಲ್ಲಿ ರಸ್ತೆಯಲ್ಲಿ ಬರುತ್ತಿದ್ದ ಆನಂದ ಕೌಡಿಚ್ಚಾರು ಅವರು ಟಿಟಿಯ ನೋಂದಣಿ ಸಂಖ್ಯೆ ದಾಖಲಿಸಿಕೊಂಡಿದ್ದರಿಂದ ಪೊಲೀಸರಿಗೆ ಅದರ ಪತ್ತೆ ಕಾರ್ಯ ಸುಲಭವಾಯಿತು. ಸಂಪ್ಯ ಪೊಲೀಸರು ತಕ್ಷಣ ಜಾಲ್ಸೂರು ಹಾಗೂ ಸಂಪಾಜೆ ಚೆಕ್ಪೋಸ್ಟ್ಗಳಿಗೆ ಮಾಹಿತಿ ನೀಡಿದ್ದರು.
ಮಳೆ ಅಬ್ಬರ ಮನೆ ಕುಸಿತ...:
ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿದ ಭಾರೀ ಮಳೆ ಗುರುವಾರ ವಿರಾಮ ಪಡೆದಿತ್ತು. ಒಂದೆರಡು ಬಾರಿ ಸಣ್ಣ ಪ್ರಮಾಣದ ಮಳೆಯಷ್ಟೇ ಸುರಿದಿದೆ.
ಕುಸಿದ ಮನೆ:
ಎರಡು ದಿನಗಳ ಭಾರೀ ಗಾಳಿ ಮಳೆಗೆ ಅರಿಯಡ್ಕ ಗ್ರಾ.ಪಂ. ವ್ಯಾಪ್ತಿಯ ಮಾಡ್ನೂರು ಗ್ರಾಮದ ಕಾವು ಬೊಮ್ಮಡ್ಕ ಎಂಬಲ್ಲಿ ವಾಸದ ಮನೆಯೊಂದು ಕುಸಿದು ಬಿದ್ದ ಘಟನೆ ವರದಿಯಾಗಿದೆ. ಲಲಿತಾ ಎಂಬವರ ವಾಸದ ಮನೆಯ ಮೇಲ್ಛಾವಣಿ ರಾತ್ರಿ ಸಂಪೂರ್ಣ ಕುಸಿದು ಬಿದ್ದಿದೆ. ಮೇಲ್ಟಾವಣಿ ಕುಸಿದು ಬಿದ್ದಿದ್ದರಿಂದ ಹಂಚುಗಳು ಸಂಪೂರ್ಣ ಹುಡಿಯಾಗಿದ್ದು, ಪಕ್ಕಾಸುಗಳು ತುಂಡಾಗಿವೆ. ಇದರಿಂದ ಸುಮಾರು ರೂ. 2 ಲಕ್ಷ ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಅರಿಯಡ್ಕ ಗ್ರಾ.ಪಂ. ಸದಸ್ಯ ಮೋನಪ್ಪ ಪೂಜಾರಿ ಕೆರೆಮಾರು, ಕಾರ್ಯದರ್ಶಿ ವಿದ್ಯಾಧರ್, ಸಿಬ್ಬಂದಿ ಯೋಗೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.