
ಚಾರ್ಮಾಡಿ ಘಾಟಿಯಲ್ಲಿ ಆನೆ ಜತೆ ಸೆಲ್ಫಿ: ಅರಣ್ಯ ಇಲಾಖೆ ಅಧಿಕಾರಿಗಳಿಂದ ಎಚ್ಚರಿಕೆ
ಉಜಿರೆ: ದ.ಕ. ಮತ್ತು ಚಿಕ್ಕಮಗಳೂರು ಜಿಲ್ಲೆ ಸಂಪರ್ಕಿಸುವ ಚಾರ್ಮಾಡಿ ಘಾಟಿಯ ನಾಲ್ಕನೇ ತಿರುವಿನಲ್ಲಿ ಹೆದ್ದಾರಿ ಮಧ್ಯೆ ಒಂಟಿ ಸಲಗ ಕಂಡು ಬಂದಿದ್ದು, ರಸ್ತೆಯಲ್ಲೇ ನಿಂತಿದ್ದ ಒಂಟಿ ಸಲಗವನ್ನು ನೋಡಿ, ಕೆಲ ಪ್ರವಾಸಿಗರು ಸೆಲ್ಫಿ ತೆಗೆಯಲು ಮುಂದಾಗಿದ್ದು, ಕಾಡಾನೆ ಯಾವುದೇ ರೀತಿಯ ಹಾನಿ ಉಂಟು ಮಾಡಿಲ್ಲವಾದರೂ ಪರಿಸರ ತಜ್ಞರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಪ್ರವಾಸಿಗರ ಈ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ವನ್ಯಜೀವಿಗಳು ಮಾನವ ಸಂಪರ್ಕದಿಂದ ತೀವ್ರ ಒತ್ತಡಕ್ಕೆ ಒಳಗಾಗುತ್ತವೆ. ಈ ತರಹದ ವರ್ತನೆ ಮುಂದಿನ ದಿನಗಳಲ್ಲಿ ದುರಂತಗಳಿಗೆ ದಾರಿಯಾಗಬಹುದು ಎಂದು ಎಚ್ಚರಿಸಿದ್ದಾರೆ. ಪ್ರವಾಸಿಗರು ಸೆಲ್ಫಿ ತೆಗೆಯುವ ಗೀಳಿಗೆ ಮುಂದಾಗಿ ಪ್ರಾಣಕ್ಕೆ ಕುತ್ತು ತಂದುಕೊಳ್ಳಬಾರದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಸೂಕ್ತ ಕ್ರಮಕ್ಕೆ ಸಚಿವರ ಆದೇಶ:
ಘಾಟ್ ಪ್ರದೇಶದಲ್ಲಿ ರಸ್ತೆಗೆ ಬಂದ ಕಾಡಾನೆಯ ಸಮೀಪಕ್ಕೆ ತೆರಳಿ ಸೆಲ್ಫಿ ತೆಗೆಯುವ ದುಸ್ಸಾಹಸಕ್ಕೆ ಮುಂದಾದ ವಾಹನ ಸವಾರರ ವಿರುದ್ಧ ಸೂಕ್ತ ಕ್ರಮಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶಿಸಿದ್ದಾರೆ. ವಾಹನ ಸವಾರರು ವಾಹನದಿಂದ ಇಳಿದು ಸೆಲ್ಫಿ, ಫೋಟೋ ಕ್ಲಿಕ್ಕಿಸುವ ಅಪಾಯಕಾರಿ ಸಾಹಸಕ್ಕೆ ಮುಂದಾಗಿರುವ ವೀಡಿಯೋ ಮಾಧ್ಯಮಗಳಲ್ಲಿ ವೈರಲ್ ಅದ ಹಿನ್ನೆಲೆಯಲ್ಲಿ ಸಚಿವರು ವಾಹನವನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರಗಿಸುವಂತೆ ಆದೇಶಿಸಿದ್ದಾರೆ.
ಕಾಡು ಪ್ರಾಣಿಗಳನ್ನು ಕಂಡಲ್ಲಿ ವಾಹನಗಳಿಂದ ಇಳಿಯದಂತೆ ಮತ್ತು ಫೋಟೋ ತೆಗೆಯದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಮತ್ತು ಅರಣ್ಯ ಪ್ರದೇಶದ ಬಳಿ ಎಚ್ಚರಿಕೆ ಫಲಕ ಅಳವಡಿಸುವಂತೆ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಇಲಾಖೆ ಮುಖ್ಯಸ್ಥರಿಗೆ ಆದೇಶ ಹೊರಡಿಸಿದ್ದಾರೆ.