ಕಾಡಾನೆ ಹಿಂಡು ದಾಳಿಯಿಂದ ಅಪಾರ ಕೃಷಿ ಹಾನಿ

ಕಾಡಾನೆ ಹಿಂಡು ದಾಳಿಯಿಂದ ಅಪಾರ ಕೃಷಿ ಹಾನಿ


ಉಜಿರೆ: ಕಾಡಾನೆಗಳ ಹಿಂಡು ಕೃಷಿ ತೋಟಕ್ಕೆ ದಾಳಿ ಇಟ್ಟು ಅಪಾರ ಪ್ರಮಾಣದಲ್ಲಿ ಕೃಷಿಹಾನಿ ಉಂಟುಮಾಡಿದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ.

ಚಾರ್ಮಾಡಿ ಗ್ರಾಮದ ಮಠದ ಮಜಲು ಎಂಬಲ್ಲಿ ಕಾಡಾನೆಗಳ ಹಿಂಡು ತೋಟಕ್ಕೆ ಲಗ್ಗೆ ಇಟ್ಟಿದ್ದು ಇಲ್ಲಿನ ಕೃಷಿಕ ಅನಂತ ರಾವ್ ಅವರ ತೋಟದಲ್ಲಿ 120ಕ್ಕಿಂತ ಅಧಿಕ ಅಡಕೆ ಮರಗಳನ್ನು ಮುರಿದು ಹಾಕಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ.

ಮುಂಜಾನೆ ಹೊತ್ತಿಗೆ ರಸ್ತೆಯಿಂದಲೇ ಸಂಚರಿಸಿ ಬಂದ ಕಾಡಾನೆಗಳು ಸೋಲಾರ್ ಬೇಲಿ ಇಲ್ಲದ ಸಣ್ಣ ಜಾಗದ ಮೂಲಕ ತೋಟಕ್ಕೆ ನುಗ್ಗಿವೆ. ಬೆಳಗ್ಗೆ 6ರ ಸುಮಾರಿಗೆ ಮನೆಯವರಿಗೆ ತಿಳಿದು ಬಂದಿದ್ದು ಈ ವೇಳೆ ಕಾಡಾನೆಗಳು ತೋಟದಲ್ಲಿ ಸಂಚಾರ ನಡೆಸುತ್ತಿದ್ದವು. ತಕ್ಷಣ ಸೋಲಾರ್ ಬೇಲಿಯ ಸಂಪರ್ಕ ತಪ್ಪಿಸಿ ಆನೆಗಳನ್ನು ತೋಟದಿಂದ ಓಡಿಸಲಾಗಿದ್ದು, ಈ ವೇಳೆ 5 ದೊಡ್ಡ ಆನೆಗಳು ಹಾಗೂ 1 ಮರಿಯಾನೆ ಕಂಡು ಬಂದಿದೆ. ಆನೆಗಳು ತೋಟದಿಂದ ಹೊರ ಹೋಗುವ ವೇಳೆ ಸೋಲಾರ್ ಬೇಲಿಯ 5 ಕಂಬಗಳಿಗೂ ಹಾನಿ ಉಂಟು ಮಾಡಿವೆ ಎಂದು ತೋಟದ ಮಾಲಕರ ಪುತ್ರ ಪ್ರಕಾಶ ನಾರಾಯಣ ರಾವ್ ತಿಳಿಸಿದ್ದಾರೆ.

ಸ್ಥಳಕ್ಕೆ ಅರಣ್ಯ ಇಲಾಖೆಯ ಡಿಆರ್‌ಎಫ್‌ಒ ರಂಜಿತ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಠದ ಮಜಲು ಪರಿಸರದಲ್ಲಿ ಆಗಾಗ ಕಾಡಾನೆ ದಾಳಿ ಮಾಡುತ್ತಿದ್ದು ಇಲ್ಲಿನ ಕೃಷಿಕರಿಗೆ ಭಾರಿ ಪ್ರಮಾಣದ ಕೃಷಿ ನಷ್ಟ ಉಂಟಾಗುತ್ತಿದೆ. ಸಾಮಾನ್ಯವಾಗಿ ಇಲ್ಲಿ ಒಂಟಿ ಸಲಗ ಅಥವಾ ಎರಡರಿಂದ ಮೂರು ಆನೆಗಳು ದಾಳಿ ಮಾಡುತ್ತಿದ್ದು ಈ ಬಾರಿ 6 ಆನೆಗಳ ಹಿಂಡು ತೋಟಕ್ಕೆ ನುಗ್ಗಿ ಅಪಾರ ಕೃಷಿಯನ್ನು ನಾಶಪಡಿಸಿವೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article