
ಪರಕೀಯ ಮತಗ್ರಂಥಗಳ ವಿರುದ್ಧ ಸರ್ಕಾರ ಯಾವಾಗ ಕ್ರಮ ಕೈಗೊಳ್ಳತ್ತದೆ: ಸಿ.ಟಿ.ರವಿ
Saturday, June 7, 2025
ಮಂಗಳೂರು: ಸಮಾಜದಲ್ಲಿ ಅಶಾಂತಿಗೆ ಗೋಹತ್ಯೆ, ಗೋ ಕಳ್ಳತನ, ಅಕ್ರಮ ಗೋ ಸಾಗಾಟ, ಲವ್ ಜಿಹಾದ್ ಮಾತ್ರವಲ್ಲ ಮತೀಯವಾದ ಬಿತ್ತುವ ಪರಕೀಯ ಮತಗ್ರಂಥಗಳೂ ಕಾರಣವಾಗಿವೆ. ಈ ಬಗ್ಗೆ ಸಮಾಜದಲ್ಲಿ ವ್ಯಾಪಕ ಚರ್ಚೆ ನಡೆಯಬೇಕು. ಇಂತಹ ಪರಕೀಯ ಮತಗ್ರಂಥಗಳ ವಿರುದ್ಧ ಸರ್ಕಾರ ಯಾವಾಗ ಕ್ರಮ ಕೈಗೊಳ್ಳತ್ತದೆ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.
ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಚೋದನೆ ಮಾಡುವವರ ಮೇಲೆ ಸರ್ಕಾರದ ಸೂಚನೆ ಮೇರೆಗೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ ಕೋಮುವಾದ ಬಿತ್ತುವ ಮತಗ್ರಂಥಗಳ ಮೇಲೆ ಯಾವಾಗ ಕ್ರಮ ಕೈಗೊಳ್ಳುತ್ತೀರಿ? ತಾಕತ್ತಿದ್ದರೆ ಮತಗ್ರಂಥಗಳ ವಿರುದ್ದ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿ. ಕಮ್ಯೂನಲ್ ಎನ್ನುವುದು ಭಾರತದ ಗ್ರಂಥಗಳಲ್ಲೇ ಇಲ್ಲ. ಆದರೆ ಪರಕೀಯ ಮತಗ್ರಂಥಗಳಲ್ಲಿ ಅದರ ಉಲ್ಲೇಖ ಇದೆ, ಅವುಗಳ ಮೇಲೆ ಕ್ರಮ ಕೈಗೊಳ್ಳಿ ಎಂದರು.
ಮತಗ್ರಂಥಗಳಲ್ಲಿ ಕಾಫಿರರನ್ನು ಕೊಲ್ಲಿ ಎನ್ನುತ್ತಾರೆ. ಅದರ ಮೇಲೆ ಕ್ರಮ ಕೈಗೊಂಡರೆ ಜಗತ್ತಿನಲ್ಲೇ ಶಾಂತಿ ನೆಲೆಸುತ್ತದೆ. ಅದು ಬಿಟ್ಟು ಕಾಂಗ್ರೆಸ್ ಮತ ಬ್ಯಾಂಕ್ ರಾಜಕಾರಣ ಮಾಡಬಾರದು. ಮತೀಯ ಭಾವ ಬಿತ್ತುವ ಮತ ಗ್ರಂಥಗಳನ್ನು ನಿಷೇಧಿಸುವ ಧೈರ್ಯ ರಾಜ್ಯ ಸರ್ಕಾರಕ್ಕೆ ಇದೆಯಾ ಎಂದು ಪ್ರಶ್ನಿಸಿದರು.