
ಗಡಿ ಉಸ್ತುವಾರಿ ಸಚಿವರಾಗಿ ಎಚ್.ಕೆ.ಪಾಟೀಲ ನೇಮಕ
Monday, June 30, 2025
ಮಂಜೇಶ್ವರ: ಗಡಿಭಾಗದ ಕನ್ನಡ ಸಂಘಟನೆಗಳ ದೀರ್ಘ ಕಾಲದ ಬೇಡಿಕೆಯಾಗಿದ್ದ ಗಡಿ ಉಸ್ತುವಾರಿ ಸಚಿವರ ನೇಮಕವಾಗಿದ್ದು ಹಿರಿಯ ಸಚಿವ ಎಚ್.ಕೆ. ಪಾಟೀಲ ಅವರನ್ನು ಗಡಿ ಹಾಗೂ ಜಲ ವಿವಾದಗಳ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ಇಂದು ಆದೇಶ ಹೊರಡಿಸಲಾಗಿದೆ.
2013 ರಲ್ಲಿ ಸಿದ್ದರಾಮಯ್ಯ ಅವರ ಸರಕಾರ ಅಧಿಕಾರಕ್ಕೆ ಬಂದ ನಂತರ ಎಚ್.ಕೆ. ಪಾಟೀಲ ಅವರನ್ನು ಗಡಿ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿತ್ತು. 2018 ರ ನಂತರ ಅಧಿಕಾರಕ್ಕೆ ಬಂದ ಯಾವದೇ ಸರಕಾರ ಗಡಿ ಉಸ್ತುವಾರಿ ಸಚಿವರನ್ನು ನೇಮಿಸಿರಲಿಲ್ಲ. ಮಹಾರಾಷ್ಟ್ರ ಸರಕಾರವು ಗಡಿವಿವಾದ ಸಂಬಂಧ ಇಬ್ಬರೂ ಉಸ್ತುವಾರಿ ಸಚಿವರನ್ನು ಇತ್ತೀಚೆಗೆ ನೇಮಿಸಿತ್ತು.
ಇಂದಿನ ನೇಮಕ ಆದೇಶಕ್ಕಾಗಿ ಯೂತ್ ಕಾಂಗ್ರೆಸ್ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಆರಿಫ್ ಮಚ್ಚಂಪಾಡಿ, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯಿಕಾಪ್, ಪ್ರಧಾನ ಕಾರ್ಯದರ್ಶಿ ಗಂಗಾಧರ ತೆಕ್ಕೆಮೂಲೆ, ಕೋಶಾಧಿಕಾರಿ ಶ್ರೀಕಾಂತ ನೆಟ್ಟಣಿಗೆ ಹಾಗೂ
ಕಾಸರಗೋಡಿನ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಪದಾಧಿಕಾರಿಗಳಾದ ಎನ್. ಚನಿಯಪ್ಪ ನಾಯ್ಕ್, ಅಖಿಲೇಶ್ ನಗುಮುಗಮ್, ಝಡ್.ಎ. ಕಯ್ಯಾರ್, ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ಎಚ್.ಕೆ. ಪಾಟೀಲರನ್ನು ಅಭಿನಂದಿಸಿದ್ದಾರೆ.