
ಜು.12ರಂದು ಪುತ್ತೂರಿನಲ್ಲಿ ‘ಲೋಕಅದಾಲತ್’ ವ್ಯಾಜ್ಯಗಳ ರಾಜೀ-ಸಂಧಾನಕ್ಕೆ ಸುವರ್ಣವಕಾಶ
ಪುತ್ತೂರು: ರಾಜೀ ಸಂಧಾನದ ಮೂಲಕ ಹಲವು ಬಗೆಯ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ಜನತೆಗೆ ಉತ್ತಮವಾದ ಅವಕಾಶವಿದ್ದು, ಜುಲೈ 12ರಂದು ಪುತ್ತೂರು ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ. ಪ್ರಕರಣಗಳನ್ನು ರಾಜಿ ಮಾಡಿಕೊಳ್ಳುವ ಮೂಲಕ ಇತ್ಯರ್ಥ ಮಾಡುವುದರಿಂದ ಹಣ ಮತ್ತು ಸಮಯದ ಉಳಿತಾಯ ಮಾಡಬಹುದು. ಬದುಕಿನಲ್ಲಿ ಮಾನಸಿಕ ನೆಮ್ಮದಿ ಹಾಗೂ ತ್ವರಿತ ನ್ಯಾಯಾಧಾನ ದೊರಕುವಂತಾಗುತ್ತದೆ ಎಂದು ಗೌ.ಪ್ರಧಾನ ಹಿರಿಯ ವ್ವವಹಾರಿಕ ನ್ಯಾಯಾಧೀಶರಾದ ಪ್ರಕೃತಿ ಕಲ್ಯಾಣ್ಪುರ ಹೇಳಿದರು.
ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ತಾಲೂಕು ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ಈ ಲೋಕ ಅದಾಲತ್ ನಡೆಯಲಿದ್ದು, ಪುತ್ತೂರಿನ 6 ನ್ಯಾಯಾಲಯಗಳಲ್ಲಿ ರಾಜೀಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಬಹುದಾದ ಸುಮಾರು ಸಾವಿರ ಪ್ರಕರಣಗಳಿದ್ದು, ಸುಮಾರು ೩ ಸಾವಿರ ಹಣಕಾಸು ಸಂಸ್ಥೆಗಳ ಚೆಕ್ ಬೌನ್ಸ್ ಪ್ರಕರಣಗಳಿವೆ. ವ್ಯಾಜ್ಯಪೂರ್ವ ಪ್ರಕರಣ (ಪಿಎಲ್ಸಿ)ಗಳನ್ನು ಹೆಚ್ಚು ದಾಖಲಿಸಿಕೊಂಡಾಗ ಶೂನ್ಯಶುಲ್ಕದಲ್ಲಿ ನ್ಯಾಯಾಧಾನ ಸಿಗುತ್ತದೆ. ಇದನ್ನು ಅದಾಲತ್ ಮೂಲಕವೂ ಇತ್ಯರ್ಥ ಮಾಡಿಕೊಳ್ಳಬಹುದಾಗಿದೆ. ಬ್ಯಾಂಕಿಂಗ್ ಕ್ಷೇತ್ರ ಮತ್ತು ಆರ್ಟಿಒ ಇಲಾಖೆಗೆ ಈ ರೀತಿಯ ಪ್ರಕರಣ ದಾಖಲಿಸಿಕೊಳ್ಳಲು ಹೆಚ್ಚಿನ ಅವಕಾಶ ಇದೆ. ಅದಾಲತ್ ನಲ್ಲಿ ರಾಜಿಯಲ್ಲಿ ಪ್ರಕರಣಗಳ ಇತ್ಯರ್ಥವಾದರೆ ನ್ಯಾಯಾಲಯದ ಶುಲ್ಕ ಹಿಂತಿರುಗಿಸುವ ವ್ಯವಸ್ಥೆ ಮಾಡಲಾಗುವುದು. ಆದರೆ ಇದರಲ್ಲಿ ಜನತೆಯ ಸಹಕಾರ ಹೆಚ್ಚು ಬೇಕಾಗಿದೆ ಎಂದು ಅವರು ಹೇಳಿದರು.
ಜನರಿಗೆ ತಮ್ಮ ವ್ಯಾಜ್ಯಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಲು ನಡೆಸಲಾಗುತ್ತಿರುವ ಈ ಅದಾಲತ್ನಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಹೊರತು ಪಡಿಸಿ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳಲು ಅವಕಾಶವಿದೆ. ಈ ಬಗ್ಗೆ ಈಗಾಗಲೇ ಹಣಕಾಸು ಸಂಸ್ಥೆಗಳು, ಪೊಲೀಸ್, ಆರ್.ಟಿ.ಓ. ಪುರಸಭೆ ಅಧಿಕಾರಿಗಳು, ತಹಶೀಲ್ದಾರ್, ವಕೀಲರು, ಇನ್ಸೂರೆನ್ಸ್ ಕಂಪೆನಿಗಳ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದೆ. ಹಣಕಾಸು ಸಂಸ್ಥೆಗಳಿಗೆ ಬಡ್ಡಿ ಹಣದಲ್ಲಿ ರಿಯಾಯಿತಿ ನೀಡಿ ಸಹಕರಿಸಬೇಕು ಎಂದು ಕೇಳಿಕೊಳ್ಳಲಾಗಿದೆ. ಸಾಲಗಾರರ ಮನವೊಲಿಸುವ ಪ್ರಯತ್ನಗಳನ್ನು ನಡೆಸುವಂತೆ ಅಧಿಕಾರಿಗಳಿಗೆ ಮತ್ತು ವಕೀಲರಿಗೆ ತಿಳಿಸಲಾಗಿದೆ ಎಂದರು.
ಆಡಿಯೋ ಮೂಲಕ ಪ್ರಚಾರ:
ಲೋಕ ಅದಾಲತ್ ಬಗ್ಗೆ ಜನಸಾಮನ್ಯರಿಗೆ ಅರಿವು ಮೂಡಿಸುವ ಸಲುವಾಗಿ ಈ ಬಾರಿ ಗ್ರಾಪಂ, ನಗರಸಭೆಗಳ ಕಸ ವಿಲೇವಾರಿ ವಾಹನದಲ್ಲಿ ವಿಶೇಷ ಆಡಿಯೋ ತುಣುಕನ್ನು ಪ್ರಚಾರಕ್ಕಾಗಿ ಬಳಕೆ ಮಾಡಲಾಗುವುದು. ಅದಾಲತ್ ಬಗ್ಗೆ ಹೆಚ್ಚಿನ ಜನತೆಗೆ ಮಾಹಿತಿ ಇರುವುದಿಲ್ಲ. ಕಳೆದ ಅದಾಲತ್ ನಲ್ಲಿ 1500 ಪ್ರಕರಣಗಳನ್ನು ಮಾತ್ರ ಇತ್ಯರ್ಥ ಮಾಡಲಾಗಿದೆ. ಈ ಬಾರಿ ಕನಿಷ್ಠ 7 ಸಾವಿರ ಪ್ರಕರಣಗಳನ್ನಾದರೂ ಇತ್ಯರ್ಥ ಪಡಿಸುವ ಗುರಿ ಹೊಂದಲಾಗಿದೆ. ಹೆಚ್ಚು ಪ್ರಕರಣಗಳು ರಾಜೀ-ಸಂಧಾನದ ಮೂಲಕ ಬಗೆ ಹರಿದರೆ ನ್ಯಾಯಾಲಯದ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ ಎಂದು ಅವರು ತಿಳಿಸಿದರು.
ಗೌ. ಪ್ರಧಾನ ವ್ಯವಹಾರಿಕ ನ್ಯಾಯಾಲಯದ ನ್ಯಾಯಧೀಶರಾದ ಶಿವಣ್ಣ ಎಚ್. ಆರ್., ಯೋಗೇಂದ್ರ ಶೆಟ್ಟಿ, ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಜಿ. ಜಗನ್ನಾಥ ರೈ ಉಪಸ್ಥಿತರಿದ್ದರು.