
ರಸ್ತೆ ಸರಿಪಡಿಸಲು ಸಾರ್ವಜನಿಕರಿಂದ ನಗರ ಪಂಚಾಯತ್ಗೆ ಮನವಿ
Tuesday, June 24, 2025
ಸುಳ್ಯ: ಸುಳ್ಯದ ಜಟ್ಟಿಪಳ್ಳ-ಕೊಡಿಯಾಲಬೈಲು ರಸ್ತೆಯನ್ನು ಅಮೃತ್ 2 ಯೋಜನೆಯಡಿಯಲ್ಲಿ ಪೈಪ್ ಅಳವಡಿಸಲು ಅಗೆದು ಸರಿಯಾಗಿ ಮುಚ್ಚದೆ ಸಂಚಾರ ದುಸ್ತರವಾಗಿದ್ದು ರಸ್ತೆ ಸರಿಪಡಿಸುವಂತೆ ಒತ್ತಾಯಿಸಿ ನಗರ ಪಂಚಾಯತ್ಗೆ ಸಾರ್ವಜನಿಕರು ಮನವಿ ಮಾಡಿದ್ದಾರೆ. ಸದ್ಯಕ್ಕೆ ಹೊಂಡ ಮುಚ್ಚುವ ಹಾಗೂ ಮಳೆಗಾಲ ಕಳೆದ ತಕ್ಷಣ ಈ ಹಿಂದಿನಂತೆ ರಸ್ತೆ ಯೋಗ್ಯವನ್ನಾಗಿಸುವುದಾಗಿ ನಗರಾಡಳಿತ ಭರವಸೆ ನೀಡಿದೆ.
ಜಟ್ಟಿಪಳ್ಳ ಕೊಡಿಯಾಲಬೈಲು ರಸ್ತೆಯಲ್ಲಿ ಅಲ್ಲಲ್ಲಿ ಕಡಿದು ಪೈಪು ಅಳವಡಿಸಲಾಗಿದೆ. ಕಡಿದ ರಸ್ತೆ ಸರಿಯಾಗಿ ಮುಚ್ಚದೆ ಸಂಚಾರಕ್ಕೆ ತೊಂದರೆಯಾಗಿದೆ. ಆದ್ದರಿಂದ ಕೂಡಲೇ ರಸ್ತೆಯನ್ನು ಸರಿಪಡಿಸಿ ಕೊಡಬೇಕೆಂದು ಜಟ್ಟಿಪಳ್ಳ ಕೊಡಿಯಾಲಬೈಲು ಪರಿಸರದ ನಾಗರಿಕರು ನಗರ ಪಂಚಾಯತ್ಗೆ ಮನವಿ ಮಾಡಿಕೊಂಡಿದ್ದಾರೆ. ಮನವಿ ಸ್ವೀಕರಿಸಿದ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಮುಖ್ಯಾಧಿಕಾರಿ ಸುಧಾಕರ ರವರು ಎರಡು ದಿನದಲ್ಲಿ ಆ ರಸ್ತೆಯನ್ನು ತಾತ್ಕಾಲಿಕ ದುರಸ್ತಿ ಪಡಿಸಿಕೊಡುವುದಾಗಿ ಮತ್ತು ಮಳೆಗಾಲ ಕಳೆದ ತಕ್ಷಣ ರಸ್ತೆ ಸರಿಪಡಿಸುವ ಭರವಸೆ ನೀಡಿದರು.ಈ ಸಂದರ್ಭದಲ್ಲಿ ನಗರ ಪಂಚಾಯತ್ ಸದಸ್ಯ ಡೇವಿಡ್ ದೀರಾ ಕ್ರಾಸ್ತ ಇದ್ದರು.
ಜಟ್ಟಿಪಳ್ಳ ಸಾರ್ವಜನಿಕರ ಪರವಾಗಿ ಸುಳ್ಯ ಪ್ರೆಸ್ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ, ಸಿಎಫ್ಸಿ ಅಧ್ಯಕ್ಷ ಅಬ್ದುಲ್ ರಹಿಮಾನ್, ಉದ್ಯಮಿ ಶಿಹಾಬ್ ಷಾ, ಮೊಯ್ದೀನ್, ಖಲೀಲ್, ಶಿಹಾಬ್ ಮತ್ತಿತರರು ಉಪಸ್ಥಿತರಿದ್ದರು.