
ಶಾಲಾ ವಾಹನಗಳ ನಿಯಮ ಉಲ್ಲಾಂಘನೆ: ಒಂದು ವಾರದ ಕಾಲಾವಕಾಶ
ಉಡುಪಿ: ಇತ್ತೀಚಿನ ದಿನಗಳಲ್ಲಿ ಶಾಲಾ ಮಕ್ಕಳ ವಾಹನಗಳನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸುತ್ತಿರುವ ಬಗ್ಗೆ ಕೇಳಿ ಬಂದಿರುವ ದೂರಿನ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಉಪವಿಭಾಗಗಳಲ್ಲೂ ಏಕಕಾಲದಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುವ ಎಲ್ಲಾ ವಾಹನಗಳ ತಪಾಸಣೆ ನಡೆಸಿದ್ದೇವೆ. ನಿಯಮಗಳನ್ನು ಉಲ್ಲಂಘಿಸಿರುವ 280ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಎಲ್ಲಾ ವಾಹನಗಳಿಗೆ ಇನ್ನೊಂದು ವಾರದ ಕಾಲಾವಕಾಶ ನೀಡಲಿದ್ದು, ದಾಖಲೆಗಳು ಸೇರಿದಂತೆ ಎಲ್ಲವನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಾದ್ಯಂತ ಇಂದು ನಡೆದ ಪೊಲೀಸರ ವಿಶೇಷ ಅಭಿಯಾನದ ಕುರಿತಂತೆ ನಗರದ ಡಿವೈಎಸ್ಪಿ ಕಚೇರಿಯಲ್ಲಿ ಸುದ್ದಿಗಾರರಿಗೆ ಮಾಹಿತಿಗಳನ್ನು ಹಂಚಿಕೊಂಡ ಎಸ್ಪಿ ಅವರು, ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಇಂದು ಬೆಳಗ್ಗೆ 7 ರಿಂದ ಅಪರಾಹ್ನ 12 ಗಂಟೆಯವರೆಗೆ ಶಾಲಾ ವಾಹನಗಳ ವಿಶೇಷ ತಪಾ ಸಣಾ ಅಭಿಯಾನ ಕೈಗೊಂಡಿದ್ದು, ಜಿಲ್ಲೆಯ ಎಲ್ಲಾ ಠಾಣಾ ವ್ಯಾಪ್ತಿಯಲ್ಲೂ ಶಾಲಾ ವಾಹನಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಾಗಿದೆ ಎಂದರು.
ಇಂದಿನ ಅಭಿಯಾನದಲ್ಲಿ ಐವರು ಪೊಲೀಸ್ ನಿರೀಕ್ಷಕರು, 30 ಮಂದಿ ಪೊಲೀಸ್ ಉಪನಿರೀಕ್ಷಕರು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಇವರು 930 ವಾಹನಗಳ ತಪಾಸಣೆ, ಪರಿಶೀಲನೆ ನಡೆಸಿದ್ದಾರೆ ಎಂದರು.
ಈ ಬಗ್ಗೆ ಸಂಬಂಧಿತ ಶಾಲಾ ಆಡಳಿತ ಮಂಡಳಿಗಳಿಗೆ ಶಾಲೆಯ ಎಲ್ಲಾ ವಾಹನಗಳ ದಾಖಲಾತಿ, ವಾಹ ನದ ಮಿತಿಗನುಗುಣವಾಗಿ ಮಕ್ಕಳ ಸಂಖ್ಯೆ ಹಾಗೂ ಇತರೇ ಸುರಕ್ಷತಾ ಕ್ರಮಗಳನ್ನು ಒಂದು ವಾರದ ಒಳಗೆ ಅಳವಡಿಸಿ ಕೊಳ್ಳುವಂತೆ ಹಾಗೂ ಎಲ್ಲಾ ಸೌಲಭ್ಯ ಮತ್ತು ದಾಖಲಾತಿಗಳನ್ನು ಒಂದು ವಾರದ ಒಳಗೆ ಸರಿಪಡಿಸಿಕೊಳ್ಳದೇ ಇದ್ದಲ್ಲಿ ಸಂಬಂಧಿತ ಶಾಲಾ ವಾಹನಗಳನ್ನು ಸೀಝ್ ಮಾಡುವ ಬಗ್ಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ ಎಂದರು.
ಈ ಬಗ್ಗೆ ಕಳೆದೊಂದು ವಾರದಿಂದ ಮಕ್ಕಳನ್ನು ಕರೆದೊಯ್ಯುವ ಶಾಲಾ ವಾಹನಗಳು, ಅಟೋರಿಕ್ಷಾ, ಓಮ್ನಿ ಹಾಗೂ ಇತರ ವಾಹನಗಳ ಚಾಲಕರಿಗೆ ಓವರ್ ಲೋಡ್, ಓವರ್ ಸ್ಪೀಡ್, ಸಮರ್ಪಕ ದಾಖಲೆಗಳ ಬಗ್ಗೆ ಸೂಚನೆಗಳನ್ನು ನೀಡಿದ್ದೇವೆ. ಆದರೂ ನಿಯಮಗಳ ಉಲ್ಲಂಘನೆ ಮುಂದುವರಿದ ಹಿನ್ನೆಲೆಯಲ್ಲಿ ಇಂದು ಅಭಿಯಾನ ನಡೆಸಿದ್ದೇವೆ. ಬೆಂಗಳೂರು, ಮಂಗಳೂರಿನಲ್ಲಿ ಇಂಥ ತಪಾಸಣೆಗಳು ನಡೆಯುತ್ತಿವೆ. ಇದೀಗ ಉಡುಪಿಯಲ್ಲಿ ಇದನ್ನು ಜಾರಿಗೊಳಿಸಿದ್ದೇವೆ. ವಾರದ ಬಳಿಕ ಮತ್ತೆ ಅಭಿಯಾನ ನಡೆಯಲಿದ್ದು, ಉಲ್ಲಂಘನೆ ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರಗಲಿದೆ ಎಂದರು.
ಶಾಲೆಗೆ ಬೆದರಿಕೆ ಕರೆ:
ನಾಲ್ಕು ದಿನಗಳ ಹಿಂದೆ ನಗರದ ವಿದ್ಯೋದಯ ಪಬ್ಲಿಕ್ ಸ್ಕೂಲ್ಗೆ ಇಮೇಲ್ ಬೆದರಿಕೆ ಕರೆ ಬಂದ ಕುರಿತ ತನಿಖೆ ಬಗ್ಗೆ ಪ್ರಶ್ನಿಸಿದಾಗ, ಇದನ್ನು ಇಲ್ಲಿ ಪತ್ತೆ ಹಚ್ಚಲು ಸಾಧ್ಯವಿಲ್ಲ. ರಾಷ್ಟ್ರಮಟ್ಟದಲ್ಲಿ ನ್ಯಾಶನಲ್ ಕೋಆರ್ಡಿನೇಷನ್ ಗ್ರೂಪ್ ಇದ್ದು, ಅದಕ್ಕೆ ಕಳುಹಿಸಿದ್ದೇವೆ. ಇಂಟೆಲಿಜೆನ್ಸ್ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಇರುವ ಗ್ರೂಪ್ ಇದಾಗಿದ್ದು, ಅವರೇ ಅದನ್ನು ಮಾನಿಟರ್ ಮಾಡುತ್ತಾರೆ ಎಂದು ಹರಿರಾಂ ಶಂಕರ್ ತಿಳಿಸಿದರು.
ನಗರದಲ್ಲಿ 90ಸಿಸಿ ಕೆಮರಾ: ಉಡುಪಿ ನಗರಸಭೆ ಉಡುಪಿ ನಗರದಾದ್ಯಂತ 90 ಸಿಸಿ ಕೆಮರಾ ಹಾಗೂ ಎರಡು ಟ್ರಾಫಿಕ್ ಸಿಗ್ನಲ್ಗಳನ್ನು ಅಳವಡಿಸಲು ಮುಂದಾಗಿದ್ದು, ಈಗಾಗಲೇ ಟೆಂಡರ್ ಕರೆಯಲಾಗಿದೆ. ಅಲ್ಲದೇ ಜಿಲ್ಲೆಯ ಎಲ್ಲಾ ಠಾಣಾ ವ್ಯಾಪ್ತಿಗಳಲ್ಲೂ ಸಿಸಿಟಿವಿ ಕೆಮರಾಗಳನ್ನು ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.