
ಇಲಾಖಾಧಿಕಾರಿಗಳ ಗೈರು, ಸಾಮಾನ್ಯ ಸಭೆ ಅರ್ಧದಲ್ಲೇ ರದ್ದು
ಉಳ್ಳಾಲ: ವಿವಿಧ ಇಲಾಖೆಗಳ ಅಧಿಕಾರಿಗಳ ಗೈರು ಹಾಜರಿಯ ಕಾರಣದಿಂದ ಸಾಮಾನ್ಯ ಸಭೆ ಅರ್ಧದಲ್ಲೇ ರದ್ದುಗೊಂಡ ಘಟನೆ ಕೋಟೆಕಾರ್ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆದಿದೆ.
ಕೋಟೆಕಾರ್ ಪ.ಪಂ. ಅಧ್ಯಕ್ಷ ದಿವ್ಯ ಸತೀಶ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮೆಸ್ಕಾಂ ಮತ್ತು ಅಮೃತ್ 2.0 ಕುಡಿಯುವ ನೀರು ವಿಭಾಗದ ಅಧಿಕಾರಿಗಳು ಹಾಜರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಸುಜಿತ್ ಮಾಡೂರು ಅವರು, ಅಧಿಕಾರಿಗಳು ಬಾರದೇ ಸಭೆ ನಡೆಸುವುದು ಬೇಡ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ದಿವ್ಯ ಸತೀಶ್ ಈಗಾಗಲೇ ಬಂದಿರುವ ಅಧಿಕಾರಿಗಳ ಜತೆ ಚರ್ಚೆ ಮಾಡೋಣ ಎಂದರು.
ಅಮೃತ್ 2.0 ಕುಡಿಯುವ ನೀರು ಯೋಜನೆ ಸಹಾಯಕ ಇಂಜಿನಿಯರ್ ಶ್ರೀಕಾಂತ್ ಮಾತನಾಡಿ, ಪೈಪ್ ಲೈನ್ ಕಾಮಗಾರಿ ಪೂರ್ಣಗೊಂಡ ಹಾಗೂ ಬಾಕಿ ಉಳಿದಿರುವ ಕಾಮಗಾರಿ ಬಗೆ ಮಾಹಿತಿ ನೀಡಿದರು. ಈ ವೇಳೆ ಮಾತನಾಡಿದ ಸುಜಿತ್ ಮಾಡೂರು ಅವರು ನೀವು ವಾರ್ಡ್ ಸದಸ್ಯರ ಗಮನ ಸೆಳೆಯದೇ ಕೆಲಸ ಮಾಡುತ್ತೀರಿ. ಶ್ರೀಮಂತರ ಮನೆಯ ಕೆಲಸ ಮುಗಿಸಿ ಬಡವರ ಮನೆಯ ಪೈಪ್ ಲೈನ್ ಕಾಮಗಾರಿ ಬಾಕಿ ಇಟ್ಟಿದ್ದೀರಿ. ಕಾಮಗಾರಿ ಮಾಡುವಾಗ ವಾರ್ಡ್ ಸದಸ್ಯರ ಗಮನಕ್ಕೆ ತನ್ನಿ ಎಂದರು.
ವಿರೋಧ ಪಕ್ಷದ ಸದಸ್ಯ ಅಹ್ಮದ್ ಅಜ್ಜಿನಡ್ಕ ಮಾತನಾಡಿ, ಕಾಮಗಾರಿ ಅರ್ಧಂಬರ್ಧ ಮಾಡುವುದು ಬೇಡ. ಅಜ್ಜಿನಡ್ಕ, ಮುಳ್ಳುಗುಡ್ಡೆ ಬಳಿ ಪೈಪ್ಲೈನ್ಗೆ ಅಗೆದ ಗುಂಡಿ ಹಾಗೆ ಇದೆ. ಇದನ್ನು ಪೂರ್ಣಗೊಳಿಸಿ ಎಂದರು.
ಅಧ್ಯಕ್ಷ ದಿವ್ಯ ಸತೀಶ್ ಮಾತನಾಡಿ, ಒಂದು ದಿನ ನಾಲ್ಕು ವಾರ್ಡ್ಗಳಿಗೆ ಭೇಟಿ ನೀಡಿ ಕಾಮಗಾರಿ ಬಗೆ ಪರಿಶೀಲನೆ ಮಾಡಬೇಕು. ಕಾಮಗಾರಿ ಮಾಡುವಾಗ ಆಯಾ ವಾರ್ಡ್ ಸದಸ್ಯರ ಗಮನಕ್ಕೆ ತರಬೇಕು. ತೆರೆದಿಟ್ಟ ಹೊಂಡಗಳನ್ನು ಶೀಘ್ರ ಮುಚ್ಚಬೇಕು ಎಂದು ಸೂಚನೆ ನೀಡಿದರು.
ಮೆಸ್ಕಾಂ ಎ.ಇ. ಮಾರಪ್ಪ ಮಾತನಾಡಿ, ವಿದ್ಯುತ್ ಹೆಚ್ಟಿ ಲೈನ್ ಹೋಗಿರುವ ಜಾಗದಲ್ಲಿ ಮರಗಳು ಬೆಳೆದು ನಿಂತಿದೆ. ಅದನ್ನು ಅರಣ್ಯ ಇಲಾಖೆ ತೆರವು ಮಾಡಿಲ್ಲ. ಮರ ತೆರವು ಮಾಡುವ ಕೆಲಸ ಪ.ಪಂ. ವತಿಯಿಂದ ಆಗಬೇಕು ಎಂದು ವಿನಂತಿಸಿದರು.
ಕೌನ್ಸಿಲರ್ ಅಹ್ಮದ್ ಅಜ್ಜಿನಡ್ಕ ಮಾತನಾಡಿ, ಕೋಟೆಕಾರ್ ನಲ್ಲಿ ಮೆಸ್ಕಾಂ ಶಾಖಾ ಕಚೇರಿ ಬೇಕು. ಜತೆಗೆ ಬಿಲ್ ಪಾವತಿ ಮಾಡಲು ಪ.ಪಂ.ವ್ಯಾಪ್ತಿಯಲ್ಲಿ ವ್ಯವಸ್ಥೆ ಮಾಡಬೇಕು. ಕರೆ ಮಾಡಿದರೆ ಸ್ವೀಕರಿಸುವ ವ್ಯವಸ್ಥೆ ಕೂಡ ಮಾಡಬೇಕು ಎಂದು ಆಗ್ರಹಿಸಿದರು.
ವಿದ್ಯುತ್ ಹೋದರೆ ಸದಸ್ಯರಿಗೆ ಜನರ ಒತ್ತಡ ಬರುತ್ತದೆ. ಫೋನ್ ರಿಸೀವ್ ಮಾಡುವ ವ್ಯವಸ್ಥೆ ಸರಿಪಡಿಸಿ. ವಿದ್ಯುತ್ ಕೈಗೊಡದಂತೆ ಕಾರ್ಯ ನಿರ್ವಹಣೆ ಮಾಡಿ ಎಂದು ಅಧ್ಯಕ್ಷ ದಿವ್ಯ ಸತೀಶ್ ಸೂಚಿಸಿದರು.
ಇಬ್ಬರು ಅಧಿಕಾರಿಗಳು ಹೊರತು ಪಡಿಸಿ ಉಳಿದ ಪ್ರಮುಖ ಇಲಾಖೆಗಳಾದ ಪಿಡಬ್ಲ್ಯೂಡಿ, ಕಂದಾಯ, ಆರೋಗ್ಯ ಸಹಿತ ವಿವಿಧ ಇಲಾಖಾಧಿಕಾರಿಗಳು ಸಭೆಗೆ ಗೈರು ಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ಸಾಮಾನ್ಯ ಸಭೆಯಲ್ಲಿ ಸರಿಯಾದ ನಿರ್ಣಯವನ್ನು ತೆಗೆದುಕೊಳ್ಳಲಾಗದೇ ಸದಸ್ಯರ ಸರ್ವಾನುಮತದಿಂದ ಅಧ್ಯಕ್ಷೆ ದಿವ್ಯ ಶೆಟ್ಟಿ ಸಭೆಯನ್ನು ಅರ್ಧದಲ್ಲೇ ರದ್ದುಗೊಳಿಸಿ ಬುಧವಾರಕ್ಕೆ ಮುಂದೂಡಿದರು.
ಅಧಿಕಾರಿಗಳು ಗೈರು ಹಾಜರಾದರೆ ಸಭೆಯಲ್ಲಿ ಸಮಸ್ಯೆಯ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಪ್ರತಿ ಸಭೆಗೂ ಸಂಬಂಧಪಟ್ಟ ಇಲಾಖೆಗೆ ಸಭೆಯ ಬಗ್ಗೆ ನೋಟೀಸ್ ಕಳಿಸಲಾಗುತ್ತದೆ. ಜನರಿಗೆ ನ್ಯಾಯ ಸಿಗಬೇಕು ಎಂಬುದು ನಮ್ಮ ಗುರಿ ಈ ಕಾರಣದಿಂದ ಸಭೆ ರದ್ದುಗೊಳಿಸಿ ಬುಧವಾರಕ್ಕೆ ಮುಂದೂಡಿದ್ದೇವೆ ಎಂದು ಸಭೆಯ ಬಳಿಕ ಅಧ್ಯಕ್ಷೆ ದಿವ್ಯ ಶೆಟ್ಟಿ ತಿಳಿಸಿದರು.
ಪ.ಪಂ. ಉಪಾಧ್ಯಕ್ಷ ಪ್ರವೀಣ್, ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕುಮಾರ್ ಉಪಸ್ಥಿತರಿದ್ದರು.