
ನಕಲಿ ದಾಖಲೆ ಸೃಷ್ಠಿಸಿ ಇನ್ನೋವಾ ಕಾರು ಬೇರೆಯವರ ಹೆಸರಿಗೆ ವರ್ಗಾವಣೆ
ಬಂಟ್ವಾಳ: ಶ್ರೀರಾಮ ಫೈನಾನ್ಸ್ನಿಂದ ಸಾಲ ಪಡೆದ ವ್ಯಕ್ತಿಯೋರ್ವ ಇನ್ನೋವಾ ಕಾರು ಖರೀದಿಸಿ ಬಳಿಕ ಸಾಲ ಮರುಪಾವತಿಸದೆ ತನ್ನ ಸ್ನೇಹಿತರ ಜತೆ ಸೇರಿ ಕಾರಿನ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಾರನ್ನು ಮತ್ತೋರ್ವರ ಹೆಸರಿಗೆ ವರ್ಗಾಯಿಸಿರುವ ಘಟನೆ ಬೆಳಕಿಗೆ ಬಂದಿದೆ.
ಫೈನಾನ್ಸ್ ಸಂಸ್ಥೆಯ ಬಿ.ಸಿ.ರೋಡು ಶಾಖೆಯ ಮ್ಯಾನೇಜರ್ ಪುನೀತ್ಕುಮಾರ್ ಎಂಬವರು ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಬೇಡಗುಡ್ಡೆ ನಿವಾಸಿ ಗಿರೀಶ್ ಎಂಬಾತ 2023ರ ಜೂ. 27ರಂದು ಟೊಯೋಟ ಇನ್ನೋವಾ ಯೂರೋ ಕಾರು ಖರೀದಿಗಾಗಿ 8.75 ಲ.ರೂ. ಸಾಲ ಪಡೆದು ಬಡ್ಡಿ ಸೇರಿ ಒಟ್ಟು 13,07,663 ರೂ.ಗಳನ್ನು ೪೮ ಕಂತುಗಳಲ್ಲಿ ಮರುಪಾವತಿಗೆ ಕರಾರು ಮೂಲಕ ಒಪ್ಪಿಕೊಂಡಿದ್ದ, ಈ ಸಾಲಕ್ಕೆ ಬಿಳಿಯೂರಿನ ರಾಜೇಶ್ ರೈ ಜಾಮೀನುದಾರರಾಗಿದ್ದಾರೆ.
ಸಾಲಗಾರ ಗಿರೀಶ್ ಸಾಲದ ಕಂತು ಮರುಪಾವತಿ ಮಾಡದಿದ್ದು, ಕಂತುಗಳ ಪಾವತಿಯ ಜತೆಗೆ ವಾಹನವನ್ನು ವಶಕ್ಕೆ ನೀಡಲು ಜಾಮೀನುದಾರರಿಗೆ ನೋಟಿಸ್ ನೀಡಿದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಜೂ. 23ರಂದು ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ದಾಖಲೆಯನ್ನು ಪರಿಶೀಲಿಸಿದಾಗ ವಾಹನ ದಾಖಲೆ ಬದಲಾಗಿರುವುದು ಕಂಡುಬಂದಿದೆ. ಆರೋಪಿ ಗಿರೀಶ್ ತನ್ನ ಸ್ನೇಹಿತರೆನ್ನಲಾದ ರಾಜೇಶ್ ರೈ, ರೋಹಿತ್, ಮಂಜುನಾಥ್ ಎಂಬವರೊಂದಿಗೆ ಸೇರಿಕೊಂಡು ಕಾರನ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿದ್ದಲ್ಲದೆ, ಫೈನಾನ್ಸ್ ಸಂಸ್ಥೆಯ ಲೆಟರ್ಹೆಡ್, ಸೀಲ್ ಮತ್ತು ಸಹಿಯನ್ನು ಕೂಡ ನಕಲಿಯಾಗಿ ಬಳಸಿಕೊಂಡು ಆರ್ಸಿಯ ಎಚ್ಪಿ ಎಂಟ್ರಿಯನ್ನೂ ಅಳಿಸಿ ಹಾಕಿ ರೋಹಿತ್, ಮಂಜುನಾಥ್ ಎಂಬವರು ವಾಹನವನ್ನು ಇಂದ್ರೇಶ್ಕುಮಾರ್ ವಿ. ಅವರಿಗೆ ವರ್ಗಾಹಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.