
ಪುತ್ತೂರು ಬಿಜೆಪಿ ಶಿಸ್ತುಕ್ರಮ: ಮುಜುಗರ ತಪ್ಪಿಸಲು ಶೋಕಾಸ್ ನೋಟೀಸು
ಪುತ್ತೂರು: ಬಾಲ್ಯದ ಗೆಳತಿಗೆ ಮಗುಭಾಗ್ಯ ಕರುಣಿಸಿದ ಪ್ರಕರಣದ ಆರೋಪಿಯಾಗಿರುವ ಪುತ್ರನಿಂದಾಗಿ ಪಕ್ಷಕ್ಕೆ ತೀವ್ರ ಮುಜುಗರ ಉಂಟಾದ ಹಿನ್ನಲೆಯಲ್ಲಿ ಯುವಕನ ಅಪ್ಪ ಪುತ್ತೂರು ನಗರಮಂಡಲದ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಗರಸಭಾ ಸದಸ್ಯ ಪಿ.ಜಿ.ಜಗನ್ನೀವಾಸ ರಾವ್ ಅವರಿಗೆ ಇದೀಗ ಪುತ್ತೂರು ಬಿಜೆಪಿ ಶಿಸ್ತುಕ್ರಮ ಕೈಗೊಳ್ಳುವ ನೋಟೀಸು ನೀಡಿದೆ.
ನಿಮ್ಮ ಮೇಲೆ ಯಾಕೆ ಶಿಸ್ತುಕ್ರಮ ಕೈಗೊಳ್ಳಬಾರದು ಎಂದು ಕಾರಣ ಕೇಳಿ ಪಕ್ಷದ ಸ್ಥಳೀಯ ಘಟಕ ಶೋಕಾಸ್ ನೋಟಿಸು ನೀಡಿದೆ. ಈ ಪ್ರಕರಣ ಬಿಜೆಪಿ ಪಕ್ಷಕ್ಕೆ ಭಾರೀ ಮುಜುಗರ ಉಂಟು ಮಾಡಿದ್ದು, ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಘಟಕಕ್ಕೆ ಖಡಕ್ ಸೂಚನೆ ನೀಡಿದ್ದರು ಎಂದು ತಿಳಿದುಬಂದಿದೆ. ಈ ಹಿನ್ನಲೆಯಲ್ಲಿಯೇ ಇದೀಗ ಶೋಕಾಸ್ ನೋಟೀಸು ನೀಡಲಾಗಿದೆ.
ಪಿ.ಜಿ.ಜಗನ್ನೀವಾಸ ರಾವ್ ಅವರ ಪುತ್ರ ಕೃಷ್ಣ ಜೆ.ರಾವ್ ತನ್ನ ಬಾಲ್ಯದ ಗೆಳತಿಯನ್ನು ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದು, ಇದೀಗ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಸಂತ್ರಸ್ತೆಯ ದೂರಿನಂತೆ ಕೃಷ್ಣ ಜೆ ರಾವ್ ಮೇಲೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಸು ದಾಖಲಾಗುತ್ತಿದ್ದಂತೆ 10 ದಿನಗಳ ಕಾಲ ತಲೆ ತಪ್ಪಿಸಿಕೊಂಡು ಓಡಾಡಿದ್ದ ಆರೋಪಿಯನ್ನು ಪೊಲೀಸರು ಮೈಸೂರಿನ ಟಿ.ನರಸೀಪುರದಲ್ಲಿ ಬಂಧಿಸಿದ್ದರು. ಇದೀಗ ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಇದರ ಜತೆಗೆ ಆರೋಪಿ ಅಡಗಿಕೊಳ್ಳಲು ಸಹಾಯ ಮಾಡಿದ ಕಾರಣಕ್ಕಾಗಿ ಪಿ.ಜಿ.ಜಗನ್ನೀವಾಸ ರಾವ್ ಅವರನ್ನು ಬಂಧನ ಮಾಡಲಾಗಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ನಿಗಧಿಯಿಲ್ಲದ ಕಾಲಮಿತಿ-ಕಾರ್ಯಕರ್ತರ ಅಸಮಾಧಾನ:
ಈ ಪ್ರಕರಣದಲ್ಲಿ ಬಿಜೆಪಿ ಪಕ್ಷದ ಮೌನ ಕಾರ್ಯಕರ್ತರನ್ನು ಕೆರಳಿಸಿತ್ತು. ಆದರೆ ಇದೀಗ ನೀಡಲಾದ ಶೋಕಾಸ್ ನೋಟಿಸಿಗೆ ಉತ್ತರ ನೀಡಲು ಯಾವುದೇ ಕಾಲಮಿತಿ ನೀಡಿಲ್ಲ ಎಂದು ತಿಳಿದುಬಂದಿದೆ. ಸಾಮಾನ್ಯವಾಗಿ ಶೋಕಾಸ್ ನೋಟೀಸಿನಲ್ಲಿ ಇಂತಿಷ್ಟು ದಿನಗಳೊಳಗೆ ಉತ್ತರ ನೀಡುವಂತೆ ಸೂಚನೆ ನೀಡಲಾಗುತ್ತದೆ. ಆದರೆ ಪ್ರಸ್ತುತ ಪುತ್ತೂರು ಬಿಜೆಪಿ ಘಟಕದಿಂದ ಶೋಕಾಸ್ ನೋಟಿಸು ನೀಡಲಾಗಿದ್ದರೂ ಕಾಲಮಿತಿ ನಿಗಧಿ ಪಡಿಸದೇ ಇರುವುದು ಮತ್ತೊಮ್ಮೆ ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಕೆರಳಿಸಿದೆ. ಪಕ್ಷದ ಕಾರ್ಯಕರ್ತರು ಪಕ್ಷದ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಇಂತಹ ಕಣ್ಣೊರೆಸುವ ನಾಟಕದ ಅಗತ್ಯವಿತ್ತೇ ಎಂದು ಪ್ರಶ್ನೆ ಮಾಡಿದ್ದಾರೆ. ಬಿಜೆಪಿ ನಗರಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್ ಅವರು ಶೋಕಾಸ್ ನೋಟೀಸು ನೀಡಿರುವುದನ್ನು ಸ್ಪಷ್ಟ ಪಡಿಸಿದ್ದಾರೆ.