
ಮಂಗಳೂರನ್ನು ಡೇಟಾ ಸೆಂಟರ್ ಹಬ್ ಪರಿವರ್ತಿಸಿ ಪ್ರತ್ಯೇಕ ಡೇಟಾ ಸೆಂಟರ್ ವಿಶೇಷ ಆರ್ಥಿಕ ವಲಯ ಸ್ಥಾಪನೆಗೆ ಆಗ್ರಹ
ನವದೆಹಲಿಯಲ್ಲಿ ಇಂದು ಕಾರ್ಯದರ್ಶಿ ಕೃಷ್ಣನ್ ಅವರನ್ನು ಭೇಟಿಯಾದ ಸಂಸದರು, ಮಂಗಳೂರು ನಗರ ಹೊಂದಿರುವ ಅಗಾಧ ಸಾಮರ್ಥ್ಯ, ವ್ಯೂಹಾತ್ಮಕ ಅನುಕೂಲತೆ ಹಾಗೂ ಇಕೋಸಿಸ್ಟಮ್ ಬಗ್ಗೆ ಮನವರಿಕೆ ಮಾಡಿದ್ದಾರೆ. ಇಲ್ಲಿರುವ ಭೌಗೋಳಿಕ, ತಾಂತ್ರಿಕವಾದ ಮೂಲಸೌಕರ್ಯಗಳ ಬಗ್ಗೆ ವಿವರಿಸಿದ ಅವರು, ನಮ್ಮ ಕರಾವಳಿ ಕಡಿಮೆ ಭೂಕಂಪನ ಅಪಾಯವಿರುವ, ಧಾರಾಳ ನೀರಿನ ಸಂಪನ್ಮೂಲ ಮತ್ತು ಸಮುದ್ರಾಂತರ ಇಂಟರ್ನೆಟ್ ಕೇಬಲ್ ಮಾರ್ಗಗಳಿಗೆ ಹತ್ತಿರವಿರುವ ಪ್ರದೇಶವಾಗಿದ್ದು, ಇಲ್ಲಿ ಕೇಬಲ್ ಲ್ಯಾಂಡಿಂಗ್ ಸ್ಟೇಷನ್ ಸ್ಥಾಪಿಸಲು ಸೂಕ್ತ ಸ್ಥಳವಾಗಿದೆ. ಇಂತಹ ಮೂಲಸೌಕರ್ಯವು ಪ್ರಾದೇಶಿಕ ಇಂಟರ್ನೆಟ್ ವೇಗವನ್ನು ಸುಧಾರಿಸುವುದರ ಜೊತೆಗೆ ಭಾರತದ ಡೇಟಾ ಸಾಮರ್ಥ್ಯ ಮತ್ತು ಭದ್ರತೆಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ ಎಂದು ವಿವರಿಸಿದ್ದಾರೆ.
ಬೃಹತ್ ಡೇಟಾ ಸೆಂಟರ್ಗಳ ಸ್ಥಾಪನೆಯು ಜಾಗತಿಕವಾಗಿ ಈಗ ಎಲ್ಲೆಡೆ ಅವಶ್ಯಕ ಮೂಲಸೌಕರ್ಯವೆಂದು ಪರಿಗಣಿಸಲಾಗುತ್ತಿದೆ. ಕೃತಕ ಬುದ್ಧಿಮತ್ತೆ, ಕ್ಲೌಡ್ ಕಂಪ್ಯೂಟಿಂಗ್, ಹಣಕಾಸು ವ್ಯವಸ್ಥೆಗಳು ರಾಷ್ಟ್ರೀಯ ಭದ್ರತೆ ಹೀಗೆ ಪ್ರತಿಯೊಂದು ಕ್ಷೇತ್ರ ಹಾಗೂ ಆಯಕಟ್ಟಿನ ಜಾಗಗಳಲ್ಲಿ ಅತ್ಯವಶ್ಯಕ ತಂತ್ರಜ್ಞಾನ ವ್ಯವಸ್ಥೆಯಾಗಿದೆ. ಹೀಗಿರುವಾಗ ಮಂಗಳೂರನ್ನು ಭಾರತದ ಪ್ರಾದೇಶಿಕ ಡೇಟಾ ಬ್ಯಾಕ್ಬೋನ್ ಆಗಿ ಬೆಳೆಸುವುದಕ್ಕೆ ವಿಪುಲ ಅವಕಾಶ ಹಾಗೂ ಸಾಮರ್ಥ್ಯವನ್ನು ಹೊಂದಿದೆ. ಈ ಹಿನ್ನಲೆ ಖಾಸಗಿ ಹೂಡಿಕೆಯನ್ನು ಆಕರ್ಷಿಸಲು ಮಂಗಳೂರಿನಲ್ಲಿ ಪ್ರತ್ಯೇಕ ಡೇಟಾ ಸೆಂಟರ್ ವಿಶೇಷ ಆರ್ಥಿಕ ವಲಯವನ್ನು ಸ್ಥಾಪಿಸಲು ಅಗತ್ಯ ಕ್ರಮ ಹಾಗೂ ಪೂರಕ ನೀತಿಯನ್ನು ರೂಪಿಸಬೇಕೆಂದು ಇದೇ ವೇಳೆ ಸಂಸದರು ಸಚಿವಾಲಯಕ್ಕೆ ಸಲಹೆ ನೀಡಿದ್ದಾರೆ
ಇಂಡಿಯಾ ಂI ಮಿಷನ್ನಡಿಯಲ್ಲಿ ಮಂಗಳೂರು ನಗರಕ್ಕೆ ಸಂಬಂಧಿಸಿದ ಹಲವಾರು ಯೋಜನೆ ತರಲು, ಸ್ಥಳೀಯ ಪ್ರತಿಭೆಯನ್ನು ಗುರುತಿಸಿ ಬೆಳೆಸುವುದಕ್ಕೆ ಂI ಹ್ಯಾಕಥಾನ್ಗಳನ್ನು ಆಯೋಜಿಸುವ ಸಾಧ್ಯತೆ ಹಾಗೂ ಮಂಗಳೂರು ಮತ್ತು ಅದರ ಸುತ್ತಮುತ್ತಲಿನ ಪ್ರದೇಶವನ್ನು ಐಟಿ ಮತ್ತು ಆವಿಷ್ಕಾರ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು, ಡೇಟಾ ಮೂಲಸೌಕರ್ಯಕ್ಕೆ ಸಂಬಂಧಿಸಿದ ಉತ್ಪಾದನಾ ಕ್ಷೇತ್ರವನ್ನು ಉತ್ತೇಜಿಸುವುದು ಹಾಗೂ ನವ ಮಂಗಳೂರು ಬಂದರಿನ ಮೂಲಕ ರಫ್ತು ವೃದ್ಧಿ ಮಾಡುವ ಅವಕಾಶಗಳ ಬಗ್ಗೆಯೂ ಕಾರ್ಯದರ್ಶಿಗಳ ಈ ಭೇಟಿ ವೇಳೆ ಕ್ಯಾ. ಚೌಟ ಅವರು ಸವಿಸ್ತಾರವಾಗಿ ಚರ್ಚಿಸಿದ್ದಾರೆ.
ಮಂಗಳೂರನ್ನು ರಾಷ್ಟ್ರೀಯ ಗುರಿಗಳಿಗೆ ಅನುಗುಣವಾಗಿ ಒಂದು ವ್ಯೂಹಾತ್ಮಕ ಡಿಜಿಟಲ್ ಮತ್ತು ತಂತ್ರಜ್ಞಾನದ ಮುಖ್ಯ ಹಬ್ ಆಗಿ ಪರಿವರ್ತಿಸುವ ನಿಟ್ಟಿನಲ್ಲಿ ಈ ರೀತಿಯ ನಿರಂತರ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದ್ದಾರೆ.
ಭೇಟಿ ಬಳಿಕ ಪ್ರತಿಕ್ರಿಯಿಸಿದ ಕ್ಯಾ. ಚೌಟ, ‘ಬೆಂಗಳೂರಿನಂಥ ಐಟಿ ಸಿಟಿಗಳ ಆಚೆಗೂ ಐಟಿ ಕಾರ್ಯ ಕ್ಷೇತ್ರದ ಅಭಿವೃದ್ಧಿಯನ್ನು ಉತ್ತೇಜಿಸುವ ಮತ್ತು ನಮ್ಮ ಪ್ರದೇಶವನ್ನು ಸಿಲಿಕಾನ್ ಬೀಚ್ ಆಗಿ ನಿರ್ಮಿಸುವ ಹಾಗೂ ಡೇಟಾ ಸೆಂಟರ್ ಹಬ್ ಆಗಿ ಪರಿವರ್ತಿಸುವ ಉದ್ದೇಶದಿಂದ ಮಂಗಳೂರಿನಲ್ಲಿ ಈ ಕುರಿತು ಸಾಧ್ಯಾ-ಸಾಧ್ಯತೆಗಳ ಬಗ್ಗೆ ನನ್ನ ದೂರದೃಷ್ಟಿ ಯೋಚನೆಗಳನ್ನು ಹಂಚಿಕೊಂಡಿದ್ದೇನೆ. ಇಂಡಿಯಾ ಂI ಮಿಷನ್ನ ಯೋಜನೆಗಳನ್ನು ಮಂಗಳೂರಿಗೆ ತರುವ ಬಗ್ಗೆಯೂ ಚರ್ಚಿಸಿದ್ದೇನೆ. ಇದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಕನಸಿಗೆ ಮಹತ್ವದ ಕೊಡುಗೆ ನೀಡಲಿದೆ. ಇದರ ಜೊತೆಗೆ, ಇದು ವಿಶ್ವಾದ್ಯಂತ ಇರುವ ಮಂಗಳೂರಿನವರಿಗೆ ಬ್ಯಾಕ್ ಟು ಊರಿಗೆ ಬರಲು ಹಾಗೂ ನಮ್ಮ ಕರಾವಳಿಯಲ್ಲಿ ಐಟಿ ಅಭಿವೃದ್ಧಿಯಲ್ಲಿ ಭಾಗಿಯಾಗುವುದನ್ನು ಪ್ರೋತ್ಸಾಹಿಸುತ್ತದೆ ಎಂದರು.