ಕಲಾವಿದ ರವಿ ರಾಮಕುಂಜ ತೇಜೋವಧೆ: ಪ್ರತಿಭಟನೆಯ ಎಚ್ಚರಿಕೆ
ಪುತ್ತೂರು: ಹಾಸ್ಯಪ್ರಹಸನವೊಂದರಲ್ಲಿ ಶ್ರೀಕೃಷ್ಣನಿಗೆ ಅಪಮಾನ ಮಾಡಿದ್ದಾರೆ ಎಂದು ದಲಿತ ಕಲಾವಿದರೊಬ್ಬರ ತೇಜೋವಧೆ ನಡೆಸಲಾಗುತ್ತಿದ್ದು, ಇದನ್ನು ಮುಂದುವರಿಸಿದರೆ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ ಎಂದು ಅಂಬೇಡ್ಕರ್ ಆಪತ್ಭಾಂದವ ಸಂಘಟನೆಯ ಜಿಲ್ಲಾಧ್ಯಕ್ಷ ರಾಜು ಹೊಸ್ಮಠ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ರವಿ ರಾಮಕುಂಜ ಅವರು ನಮ್ಮ ದಲಿತ ಸಮುದಾಯಕ್ಕೆ ಸೇರಿದ ಪ್ರತಿಭಾವಂತ ಕಲಾವಿದನಾಗಿದ್ದು, ಆತನ ಬೆಳವಣಿಗೆಯನ್ನು ಕುಂಠಿತಗೊಳಿಸುವ ನಿಟ್ಟಿನಲ್ಲಿ ತೇಜೋವಧೆ ಮತ್ತು ಷಡ್ಯಂತ್ರ ನಡೆಯುತ್ತಿದೆ. ಮಂಗಳೂರು ಪಂಚನಾಡಿಯಲ್ಲಿ ನಡೆದ ಹಾಸ್ಯ ಪ್ರಹಸನ ಕಾರ್ಯಕ್ರಮದಲ್ಲಿ ರವಿ ರಾಮಕುಂಜ ಅವರು ಮಾಡಿದ ಪಾತ್ರದಲ್ಲಿ ಶ್ರೀಕೃಷ್ಣ ದೇವರಿಗೆ ಅವಮಾನ ಆಗಿದೆ ಎಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಹರಿಪ್ರಸಾದ್ ರೈ ನೆಲ್ಲಿಕಟ್ಟೆ ಅವರು ದೂರು ನೀಡಿದ್ದರು.
ಈ ವಿಚಾರದಲ್ಲಿ ರವಿ ರಾಮಕುಂಜ ಅವರು ಠಾಣೆಗೆ ಹಾಜರಾಗಿ ಮುಂದೆ ಹಿಂದೂ ಬಾಂಧವರ ಭಾವನೆಗೆ ಧಕ್ಕೆ ಬರುವಂತಹ ಸಂಭಾಷಣೆಯನ್ನು ಪ್ರದರ್ಶಿಸುವುದಿಲ್ಲ ಎಂದು ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದಾರೆ. ಠಾಣೆಯಲ್ಲಿ ಈ ವಿಚಾರ ಮುಗಿದ ಬಳಿಕವೂ ಇದೀಗ ವಾಟ್ಸಪ್, ಫೇಸ್ಬುಕ್ ಇನ್ನಿತರ ಮಾಧ್ಯಮಗಳಲ್ಲಿ ರವಿ ರಾಮಕುಂಜ ಅವರ ಹೆಸರನ್ನು ಹಾಕಿ ಅವರ ತೇಜೋವಧೆ ಮಾಡಲಾಗುತ್ತಿದೆ.
ನೆಲ್ಲಿಕಟ್ಟೆ-ಸೊರಕೆಯಿಂದ ಸಂಘರ್ಷ:
ಹರಿಪ್ರಸಾದ್ ನೆಲ್ಲಿಕಟ್ಟೆ ಮತ್ತು ಬಾಲಚಂದ್ರ ಸೊರಕೆ ಅವರು ಬೇರೆ ಬೇರೆ ಹಿಂದು ಸಂಘಟನೆಗಳಿಗೆ ಪ್ರಚೋದನೆ ನೀಡಿ ಆ ವಿಷಯವನ್ನು ಎತ್ತಿಕೊಂಡು ಸಂಘರ್ಷಕ್ಕೆ ದಾರಿ ಮಾಡುತ್ತಿದ್ದಾರೆ. ಇತ್ತೀಚೆಗೆ ವಿಶ್ವಹಿಂದು ಪರಿಷತ್ ವತಿಯಿಂದಲೂ ಠಾಣೆಗೆ ದೂರು ನೀಡಲಾಗಿದೆ. ಮುಂದಿನ ದಿನ ರವಿ ರಾಮಕುಂಜ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಅವಮಾನಿಸಿದರೆ, ತೇಜೋವಧೆ ನಡೆಸಿದರೆ ದಲಿತ ಸಂಘಟನೆಗಳು ಎಚ್ಚೆತ್ತುಕೊಂಡು ಪ್ರತಿಭಟನೆ ಅನಿವಾರ್ಯವಾಗಲಿದೆ ಎಂದು ಅವರು ಹೇಳಿದರು.