ಪೊಳಲಿ ಸಹಿತ ವಿವಿಧ ದೇವಿ ಕ್ಷೇತ್ರದಲ್ಲಿ ನವರಾತ್ರಿ ಉತ್ಸವಕ್ಕೆ ಚಾಲನೆ
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ದೀಪ ಪ್ರಜ್ವಲನೆಗೈಯುವ ಮೂಲಕ ಪೊಳಲಿಯ ನವರಾತ್ರಿ ಉತ್ಸವದ ಸಂಭ್ರಮ ಸಹಿತ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ಕ್ಷೇತ್ರದ ಪ್ರಧಾನ ಅರ್ಚಕರಾದ ಮಾಧವ ಭಟ್, ಯಕ್ಷಕಲಾ ಪೊಳಲಿಯ ವೆಂಕಟೇಶ್ ನಾವಡ, ನಿವೃತ ಶಿಕ್ಷಕ ಸುಬ್ರಾಯ ಕಾರಂತ, ದೇವಳದ ಕಾರ್ಯನಿರ್ವಾಹಣಾಧಿಕಾರಿ. ಪ್ರವೀಣ್, ಸಂಘಟಕ ಜನಾರ್ಧನ ಅಮ್ಮುಂಜೆ ಮೊದಲಾದವರಿದ್ದರು.
ಪೊಳಲಿಯ ಕ್ಷೇತ್ರದ ಸನ್ನಿಧಿಯಲ್ಲಿ ನವರಾತ್ರಿ ಪ್ರಯುಕ್ತ ಪ್ರತಿನಿತ್ಯ ಭಕ್ತರಿಂದ ಹರಕೆ ರೂಪದ ಚಂಡಿಕಾ ಹೋಮ, ಅ.1 ರಂದು ದೇವಳದ ವತಿಯಿಂದ ಚಂಡಿಕಾ ಹೋಮ, ಸಂಜೆಯಿಂದ ರಾತ್ರಿ ವರೆಗೆ ನವರಾತ್ರಿ ವೇಷಗಳ ಸಂಭ್ರಮ ನಡೆಯಲಿದೆ.
ಸೆ.26 ರಂದು ಲಲಿತಪಂಚಮಿಯಂದು 18 ವರ್ಷ ಮೇಲ್ಪಟ್ಟ ಸ್ತ್ರೀಯರಿಗೆ ದೇವಿಗೆ ಹರಕೆ ರೂಪದಲ್ಲಿ ಬಂದ ಸೀರೆ ವಿತರಣೆ ನಡೆಯಲಿದೆ. ನವರಾತ್ರಿ ಪ್ರಯುಕ್ತ ಪ್ರತಿನಿತ್ಯ ಸಂಜೆಯಿಂದ ವಿವಿಧ ಸಾಂಸ್ಕೃತಿಕಕಾರ್ಯಗಳು ನಡೆಯಲಿದೆ. ಈ ಸಂದರ್ಭ ಪ್ರತಿದಿನ ಸಾವಿರಾರು ಮಂದಿ ಭಕ್ತರು ದೇವರ ದರ್ಶನ ಪಡೆದು ಧನ್ಯರಾಗಲಿದ್ದಾರೆ.
ಅದೇ ರೀತಿ ಬಿ.ಸಿ. ರೋಡಿನ ಶ್ರೀರಕ್ತೇಶ್ವರೀ ದೇವಿ ಸನ್ನಿಧಿ, ಶ್ರೀಚಂಡಿಕಾ ಪರಮೇಶ್ವರೀ, ಪೊಲೀಸ್ ಲಯುನ್ನಲ್ಲಿರುವ ಶ್ರೀ ಅನ್ನ ಪೂರ್ಣೇಶ್ವರೀ ದೇವಳ ಸಹಿತ ಬಂಟ್ವಾಳ ಸುತ್ತಮುತ್ತಲಿನ ವಿವಿಧ ದೇವಿ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಉತ್ಸವಕ್ಕೆ ಚಾಲನೆ ದೊರೆತಿದೆ. ನವರಾತ್ರಿಯ ಹಿನ್ನಲೆಯಲ್ಲಿ ಮೊದಲದಿನವೇ ಕೆಲ ವೇಷಗಳು ಆರಂಭಗೊಂಡಿದೆ. ನವರಾತ್ರಿ ಪ್ರಯುಕ್ತ ಮಧ್ಯರಾತ್ರಿ ವರೆಗೂ ವಿವಿಧ ಸಾಂಸ್ಕೃತಿಕ, ಯಕ್ಷಗಾನ, ನಾಟಕದಂತ ಕಾರ್ಯಕ್ರಮಗಳು ನಡೆಯುತ್ತಿದ್ದು, ಆಯಾಯ ಭಾಗದ ಸಾರ್ವಜನಿಕರು, ಭಕ್ತಸಮೂಹ ಇದರಲ್ಲಿ ಸಂಭ್ರಮದಿಂದ ಭಾಗವಹಿಸುತ್ತಾರೆ.
ಆದರೆ ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕ ಬಳಕೆಗೆ ಪೊಲೀಸರು ಅಡ್ಡಿಪಡಿಸಲು ಮುಂದಾದರೆ ಗೊಂದಲಕ್ಕು ಕಾರಣವಾಗಬಹುದೆಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ಕಳೆದ ಗಣೇಶೋತ್ಸವದ ಸಂದರ್ಭ ಬಂಟ್ವಾಳದ ವಿವಿಧೆಡೆಯಲ್ಲಿ ಪೊಲೀಸರು 10 ಗಂಟೆಗೆ ಯಕ್ಷಗಾನ ಸಹಿತ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸ್ಥಗೊತಗೊಳಿಸಿದ ಪ್ರಸಂಗ ನಡೆದಿರುವುದು ಕಣ್ಣಮುಂದಿದೆ. ಹಾಗಾಗಿ ನವರಾತ್ರಿ ವಿಭಿನ್ನ ಹಬ್ಬವಾಗಿದ್ದು, ಎಲ್ಲರೂ ಸಾಮೂಹಿಕವಾಗಿ ಇದರಲ್ಲಿ ಪಾಲ್ಗೊಳ್ಳುತ್ತಾರೆಂಬುದು ಇಲ್ಲಿ ವಿಶೇಷವಾಗಿದೆ.
ಯಾವುದೇ ದೂರು ಬಾರದಂತೆ, ಸೀಮಿತವಾಗಿ 10 ಗಂಟೆಯ ಬಳಿಕ ಧ್ವನಿವರ್ಧಕ ಬಳಸುವಂತೆ ಪೊಲೀಸರು ಸಲಹೆ ನೀಡಿದ್ದು, ಇದು ಸಾಧ್ಯವೇ ಎಂಬ ಪ್ರಶ್ನೆಯು ಸಾರ್ವಜನಿಕರಲ್ಲಿ ಎದ್ದಿದೆ.